ಬೆಂಗಳೂರು:ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆಯನ್ನ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ರೈತ ನಾಯಕರು ರಾಜ್ಯಕ್ಕೆ ಬಂದಾಗ ಈ ರೀತಿ ಹಲ್ಲೆ ಆಗಬಾರದಿತ್ತು. ಈ ಕೃತ್ಯ ಹುಚ್ಚುತನವಾಗಿದೆ ಎಂದಿದ್ದಾರೆ.
ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಏಕಾಏಕಿ ಯಾರೊಬ್ಬರ ಮೇಲೂ ಮಸಿ ಎರಚುವುದು ಸರಿಯಲ್ಲ. ಘಟನೆ ಸಂಬಂಧ ಈಗಾಗಲೇ ಮೂವರನ್ನ ಬಂಧಿಸಲಾಗಿದೆ. ಘಟನೆ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಸನ್ನಡತೆ ಅಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಮತ್ತೆ ಆತನನ್ನು ಜೈಲಿಗೆ ಕಳುಹಿಸುತ್ತೇವೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಕೇಂದ್ರ ವಿಭಾಗದ ಡಿಸಿಪಿ ಹುದ್ದೆ ಖಾಲಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶೀಘ್ರದಲ್ಲೇ ಡಿಸಿಪಿಯನ್ನು ನೇಮಕ ಮಾಡಲಾಗುತ್ತದೆ. ಸರ್ಕಾರಕ್ಕೆ ಡಿಸಿಪಿ ನೇಮಕ ಮಾಡಲು ಯಾವುದೇ ಅಡ್ಡಿಯಿಲ್ಲ. ಸಿಎಂ ಬ್ಯುಸಿ ಇದ್ದಿದ್ದರಿಂದ ತಡವಾಗಿದೆ. ಆದಷ್ಟೂ ಬೇಗ ಡಿಸಿಪಿ ಅವರನ್ನು ನೇಮಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಕೇಸ್: ದೆಹಲಿ ಕೋರ್ಟ್ನಿಂದ ಡಿಕೆಶಿಗೆ ಸಮನ್ಸ್ ಜಾರಿ
ಕಮಿಷನರ್ ಕಚೇರಿಗೆ ಭೇಟಿ ನೀಡಿದ ಉದ್ದೇಶದ ಬಗ್ಗೆ ಮಾಹಿತಿ ನೀಡಿದ ಸಚಿವ ಜ್ಞಾನೇಂದ್ರ, ಕಮಾಂಡ್ ಸೆಂಟರ್ ಕೆಲಸ ನಡೆಯುತ್ತಿದೆ. ಈ ವಿಚಾರವಾಗಿ ಇಲ್ಲಿಗೆ ಬಂದಿದ್ದೇನೆ. ಸೆಪ್ಟೆಂಬರ್ ಅಂತ್ಯಕ್ಕೆ ಮೊದಲ ಭಾಗ ಮುಗಿಯಲಿದೆ. 1,650 ಕ್ಯಾಮರಾ ಅಳವಡಿಕೆ ಮೊದಲ ಹಂತದಲ್ಲಿ ನಡೆಯಲಿದೆ. ಒಟ್ಟು 3 ಸಾವಿರ ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.