ಕರ್ನಾಟಕ

karnataka

ವೈದ್ಯರ ಮೇಲಿನ ಹಲ್ಲೆ ಪ್ರಕರಣ: ರಾಜ್ಯಾದ್ಯಂತ ಬಂದ್​ಗೆ ಉತ್ತಮ ಪ್ರತಿಕ್ರಿಯೆ

By

Published : Nov 8, 2019, 1:04 PM IST

Updated : Nov 8, 2019, 2:34 PM IST

ರಾಜ್ಯಾದ್ಯಂತ ಕರೆ ನೀಡಲಾಗಿರುವ ಬಂದ್​ಗೆ ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಹಲವೆಡೆ ವೈದ್ಯರು ಹಾಗೂ ಇತರ ಸಿಬ್ಬಂದಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಾದ್ಯಂತ ಬಂದ್

ಬೆಂಗಳೂರು: ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ನಡೆಸಿರುವ ಹಲ್ಲೆ ಪ್ರಕರಣ ಖಂಡಿಸಿ, ಇಂದು ರಾಜ್ಯಾದ್ಯಂತ ಕರೆ ನೀಡಿರುವ ಓಪಿಡಿ ಬಂದ್​ಗೆ ರಾಜ್ಯದ ಎಲ್ಲ ಕಡೆ ಬೆಂಬಲ ವ್ಯಕ್ತವಾಗಿದೆ.

ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಬಂದ್​ಗೆ ಧಾರವಾಡನಗರದಲ್ಲಿನ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ಚಿಕಿತ್ಸಾ ಸೇವೆ ಸ್ಥಗಿತಗೊಳಿಸುವ ಮೂಲಕ ಮಿಂಟೋ ಆಸ್ಪತ್ರೆ ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಜಿಲ್ಲೆಯ ನಾನಾ ಭಾಗಗಳಿಂದ ಚಿಕಿತ್ಸೆಗೆ ಎಂದು ಬರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮಂಡ್ಯ:ಜಿಲ್ಲೆಯಲ್ಲಿ ಬಂದ್​ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಮಾಡಲಾಗಿದೆ. ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ, ನೋಟಿಸ್​​​ ಬೋರ್ಡ್ ಹಾಕಲಾಗಿದೆ.

ಬಾಗಲಕೋಟೆ:ಜಿಲ್ಲೆಯಲ್ಲಿಯೂ ಖಾಸಗಿ ಆಸ್ಪತ್ರೆಯ ಓಪಿಡಿ‌ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತುರ್ತು ಸೇವೆ ಮಾತ್ರ ಪ್ರಾರಂಭ ಮಾಡಿದ್ದು, ಹೂರ ರೋಗಿಗಳ ತಪಾಸಣೆ ಬಂದ್​ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳ ನಗರಿ ಬಾಗಲಕೋಟೆಯಲ್ಲಿ ಸದಾ ಜನಜಗುಂಳಿ ಇರುತ್ತಿದ್ದ ಆಸ್ಪತ್ರೆಗಳು ಬಿಕೋ ಎನ್ನುತ್ತಿದೆ.

ಕಲಬುರ್ಗಿ:ಜಿಲ್ಲೆಯಲ್ಲಿ ಬಂದ್​ಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಜಿಲ್ಲೆಯಾದ್ಯಂತ ಬಹುತೇಕ ಖಾಸಗಿ ಆಸ್ಪತ್ರೆಗಳು ಯಥಾಸ್ಥಿತಿಯಾಗಿ ಕಾರ್ಯನಿರ್ವಹಿಸುತ್ತಿವೆ. ರೋಗಿಗಳಿಗೆ ವೈದಿಕ ಸೇವೆಯಲ್ಲಿ ಯಾವುದೇ ರೀತಿಯ ಕೊರತೆ ಕಂಡುಬಂದಿಲ್ಲ.

ಕೊಪ್ಪಳ:ಕೊಪ್ಪಳದಲ್ಲೂ ಬೆಳಗ್ಗೆಯಿಂದಲೇ ಖಾಸಗಿ ಆಸ್ಪತ್ರೆಗಳ ವೈದ್ಯರು ಓಪಿಡಿ ಬಂದ್ ಮಾಡಿ ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ. ಜಿಲ್ಲಾದ್ಯಂತ ಇರುವ ಸುಮಾರು 50 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಓಪಿಡಿ ಬಂದ್ ಮಾಡಿವೆ‌. ಇನ್ನುಳಿದಂತೆ ತುರ್ತು ಚಿಕಿತ್ಸೆ ಹಾಗೂ ಒಳರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಓಪಿಡಿ ಸೇವೆ ಇಂದು ಸಂಜೆಯವರೆಗೂ ಸ್ಥಗಿತಗೊಂಡಿರುವುದರಿಂದ ರೋಗಿಗಳಿಗೆ ತುಸು ತೊಂದರೆಯಾಗುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ಬಂದ್

ಗಣಿನಗರಿ ಬಳ್ಳಾರಿಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6ಗಂಟೆ ವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗದಲ್ಲಿ ಎಂದಿನಂತೆ ಆಸ್ಪತ್ರೆ ಓಪಿಡಿಗಳು ಕಾರ್ಯ ನಿರ್ವಹಿಸಿವೆ. ಇಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಾದ ಮ್ಯಾಕ್ಸ್, ಮೆಟ್ರೋ, ನಂಜಪ್ಪ ಹಾಗೂ ಸರ್ಜಿ ಹಾಸ್ಪಿಟಲ್​ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಒಟ್ಟಿನಲ್ಲಿ ರಾಜ್ಯಾದ್ಯಂತ ಕರೆ ನೀಡಲಾಗಿರುವ ಬಂದ್​ಗೆ ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಹಲವೆಡೆ ವೈದ್ಯರು ಹಾಗೂ ಇತರ ಸಿಬ್ಬಂದಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಿಸಿ ರೋಗಿಗಳಿಗೆ ತಟ್ಟಿದ್ದು ಮಾತ್ರ ಸುಳ್ಳಲ್ಲ.

Last Updated : Nov 8, 2019, 2:34 PM IST

ABOUT THE AUTHOR

...view details