ಕರ್ನಾಟಕ

karnataka

ETV Bharat / state

ಚಾಮರಾಜಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ವರ್ಚಸ್ಸೇ ಹೆಚ್ಚು: ಈ ಬಾರಿ ರಣಕಣದ ಬದಲಾದ ರಾಜಕೀಯ ಲೆಕ್ಕಾಚಾರ ಏನು?

ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಆಯಾ ಪಕ್ಷದ ಘೋಷಿತ ಅಭ್ಯರ್ಥಿಗಳು, ಟಿಕೆಟ್​ ಆಕಾಂಕ್ಷಿತರು ಈಗಾಗಲೇ ಭರ್ಜರಿ ಮತಬೇಟೆ ಶುರು ಮಾಡಿದ್ದಾರೆ. ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ ಚಾಮರಾಜಪೇಟೆ ಕ್ಷೇತ್ರದ ಲೆಕ್ಕಾಚಾರ ಹೀಗಿದೆ.

By

Published : Mar 13, 2023, 3:21 PM IST

Updated : Mar 13, 2023, 6:54 PM IST

karnataka assembly election 2023
karnataka assembly election 2023

ಬೆಂಗಳೂರು:ಚಾಮರಾಜಪೇಟೆ ಬೆಂಗಳೂರು ನಗರದ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲೊಂದು. ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರದಲ್ಲಿ ಮತಕಾವು ಹೆಚ್ಚಿದೆ. ಸದ್ಯ ಚಾಮರಾಜಪೇಟೆಯ ಚುನಾವಣಾ ಅಖಾಡ ಹೇಗಿದೆ ಎಂಬ ವರದಿ ಇಲ್ಲಿದೆ.

ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಏರುತ್ತಿರುವ ಉರಿ ಬಿಸಿಲಿನಲ್ಲಿ ರಾಜಕೀಯ ಕಾವೂ ಹೆಚ್ಚಾಗುತ್ತಿದೆ. ಬೆಂಗಳೂರು ನಗರದ ಪ್ರಮುಕ ವಿಧಾನಸಭೆ ಕ್ಷೇತ್ರವಾದ ಚಾಮರಾಜಪೇಟೆ ಈ ಬಾರಿಯ ಚುನಾವಣೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರದೊಂದಿಗೆ ಕುತೂಹಲಕ್ಕೆ ಕಾರಣವಾಗಿದೆ. ಚಾಮರಾಜಪೇಟೆ ಸದ್ಯ ಕಾಂಗ್ರೆಸ್ ಭದ್ರಕೋಟೆ. ಕಾಂಗ್ರೆಸ್ ಮಿಗಿಲಾಗಿ ಹಾಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಭದ್ರಕೋಟೆಯಾಗಿದೆ. ಜೆಡಿಎಸ್‌ನಲ್ಲಿದ್ದಾಗ ಹೆಚ್​​.ಡಿ.ಕುಮಾರಸ್ವಾಮಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಮೀರ್, 2008, 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಒಟ್ಟು ನಾಲ್ಕು ಬಾರಿ ಗೆದ್ದು ಬೀಗಿರುವ ಜಮೀರ್ ಈ ಬಾರಿನೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವಿನ ಬಲವಾದ ವಿಶ್ವಾಸದಲ್ಲಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಮತದಾರರೇ ನಿರ್ಣಾಯಕವಾಗಿರುವ ಈ ಕ್ಷೇತ್ರವು ಜೆಡಿಎಸ್‌ ಹಿಡಿತದಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತೆಕ್ಕೆಗೆ ಜಾರಿತು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದರೂ ಜಮೀರ್‌ ಪ್ರಭಾವ ಕ್ಷೇತ್ರದಲ್ಲಿ ಕುಂದಿಲ್ಲ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ಅಹಮ್ಮದ್ ವೈಯ್ಯಕ್ತಿಕ ವರ್ಚಸ್ಸೇ ಹೆಚ್ಚು. ಆ ವರ್ಚಸ್ಸಿನಿಂದಲೇ ಜಮೀರ್ ಹ್ಯಾಟ್ರಿಕ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಎಲ್ಲಾ ಜಾತಿ, ಧರ್ಮದವರ ಅಂತ್ಯಸಂಸ್ಕಾರಕ್ಕೆ ಜಮೀರ್​ ಅಹ್ಮದ್​​ ಸಹಾಯ ಮಾಡಿದ್ದರು.

ಬದಲಾದ ರಾಜಕೀಯ ಲೆಕ್ಕಾಚಾರ:ಮೇಲ್ನೋಟಕ್ಕೆ ಜಮೀರ್ ಅಹಮ್ಮದ್ ಖಾನ್ ಚಾಮರಾಜಪೇಟೆ ಕ್ಷೇತ್ರದಲ್ಲಿ ಮೇಲುಗೈ ಹೊಂದಿದ್ದಾರೆ. ಆದರೆ, ಈ ಬಾರಿ ಚಾಮರಾಜಪೇಟೆಯ ಅಖಾಡದಲ್ಲಿ ಹೊಸ ಚುಮಾವಣಾ ವಿಚಾರ, ಲೆಕ್ಕಾಚಾರ ಹೊರ ಹೊಮ್ಮಿದೆ. ಇತ್ತ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಯಾರೂ ಎಂಬುದು ಇನ್ನೂ ಅಂತಿಮವಾಗಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದ ಬಳಿಕ ಕ್ಷೇತ್ರದ ಚುನಾವಣಾ ರಣಕಣ ರೋಚಕವಾಗಲಿದೆ.

ಜಮೀರ್ ಅಹಮ್ಮದ್ ಖಾನ್

ಈ ಬಾರಿ ಕ್ಷೇತ್ರದ ಚುನಾವಣಾ ಅಜೆಂಡಾ ಬದಲಾಗಿದೆ. ಈದ್ಗಾ ಮೈದಾನ ವಿವಾದ ಈ ಬಾರಿ ಕ್ಷೇತ್ರದ ಪ್ರಮುಖ ಚುಮಾವಣಾ ಅಜೆಂಡಾವಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರದ ಚುನಾವಣಾ ಲೆಕ್ಕಾಚಾರ ಸ್ವಲ್ಪ ಬದಲಾವಣೆಯಾಗಿದೆ. ಬಿಜೆಪಿ ಈದ್ಗಾ ಮೈದಾನ ವಿವಾದವನ್ನೇ ಮುಂದಿಟ್ಟುಕೊಂಡೇ ಕಾಂಗ್ರೆಸ್​ನ ಜಮೀರ್ ಅಹಮ್ಮದ್ ಅವರನನ್ನು ಹಣಿಯಲು ಕಾರ್ಯತಂತ್ರ ರೂಪಿಸಲಿದೆ. ಗಣೇಶೋತ್ಸವಕ್ಕೆ ಮೈದಾನದಲ್ಲಿ ಅವಕಾಶ ನೀಡದ ಹಾಲಿ ಶಾಸಕ ಜಮೀರ್, ಹಿಂದೂ ವಿರೋಧಿ ಎಂಬ ಅಂಶದೊಂದಿಗೆ ಬಿಜೆಪಿ ಕಣಕ್ಕಿಳಿಯಲಿದೆ.‌

ಬಿಜೆಪಿಯಿಂದ ಯಾರನ್ನೂ ಕಣಕ್ಕಿಳಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈದ್ಗಾ ಮೈದಾನ ಅಜೆಂಡಾದೊಂದಿದೆ ಕಣಕ್ಕಿಳಿಯಲಿರುವ ಬಿಜೆಪಿ, ಈ ಬಾರಿ ಅಚ್ವರಿಯ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಲಹರಿ ರೆಕಾರ್ಡಿಂಗ್‌ ಸಂಸ್ಥೆಯ 'ಲಹರಿ ವೇಲು' ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಈದ್ಗಾ ಮೈದಾನದ ಹೋರಾಟದಲ್ಲೂ ಸ್ಥಳೀಯರೊಂದಿಗೆ ವೇಲು ಕಾಣಿಸಿಕೊಂಡಿದ್ದು, ರಾಜಕೀಯಕ್ಕೆ ಬರುವ ಭೂಮಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅಂಬೇಡ್ಕರ್‌ ಸೇನೆಯ ಅಧ್ಯಕ್ಷ ಸುನಿಲ್‌ಬಾಬು ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೇ ಕ್ಷೇತ್ರದಲ್ಲಿ ಸೈಲೆಂಟ್ ಸುನಿಲ್ ಹೆಸರೂ ಜೋರಾಗಿ ಕೇಳಿ ಬರುತ್ತಿದೆ. ಇದೇ ಕ್ಷೇತ್ರದಲ್ಲಿ ನಡೆದಿದ್ದ ರಕ್ತದಾನ ಶಿಬಿರಕ್ಕೆ ಬಿಜೆಪಿ ಶಾಸಕರು ಹಾಗೂ ಸಂಸದರನ್ನು ಕರೆಸಿ ‘ಸೈಲೆಂಟ್ ಸುನಿಲ್‌ ಕುಮಾರ್‌ ಸಂಚಲನ ಸೃಷ್ಟಿಸಿದ್ದರು. ‘ಸೈಲೆಂಟ್‌ ಸುನಿಲ್‌’ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಈ ಶಿಬಿರ ಆಯೋಜಿಸಿದ್ದರಲ್ಲದೇ, ಕ್ಷೇತ್ರದಲ್ಲಿ ಅವರ ಪೋಸ್ಟರುಗಳು ರಾರಾಜಿಸುತ್ತಿವೆ.

ಇತ್ತ ಜೆಡಿಎಸ್ ಜಮೀರ್ ಆಪ್ತ ಬಳಗದಲ್ಲಿದ್ದ ಮಾಜಿ ಕಾರ್ಪೊರೇಟರ್ ಗೋವಿಂದರಾಜ್ ಅವರನ್ನು ಪಕ್ಷಕ್ಕೆ ಸೆಳೆದಿದ್ದು, ಅವರಿಗೇ ಟಿಕೆಟ್ ಕೊಡುವುದು ಖಚಿತವಾಗಿದೆ. ಬಿಬಿಎಂಪಿಯ ಮಾಜಿ ಸದಸ್ಯೆ ಗೌರಮ್ಮ ಅವರ ಪತಿ, ಕಾಂಗ್ರೆಸ್‌ ಮುಖಂಡ ಗೋವಿಂದರಾಜು ಹಾಗೂ ಅವರ ಬೆಂಬಲಿಗರನ್ನು ಜೆಡಿಎಸ್‌ ಸೆಳೆಯುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸಿದೆ. ಹಿಂದಿನ ಚುನಾವಣೆಯಲ್ಲಿ ಜಮೀರ್‌ ಪರ ಗೋವಿಂದರಾಜು ಕೆಲಸ ಮಾಡಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಬಿಟ್ಟಿರುವುದು ‘ಕೈ’ ಪಡೆಗೆ ಆತಂಕ ತಂದೊಡ್ಡಿದೆ.

ಚಾಮರಾಜಪೇಟೆ ಮತಕ್ಷೇತ್ರದ ಮಾಹಿತಿ

ಕ್ಷೇತ್ರದ ಅಭಿವೃದ್ಧಿ, ಜಾತಿ ಲೆಕ್ಕಾಚಾರ ಏನು?:ಚಾಮರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 2,20,337 ಮತದಾರರನ್ನು ಹೊಂದಿದೆ.‌ ಈ ಪೈಕಿ ಪುರುಷ ಮತದಾರರ ಸಂಖ್ಯೆ 1,13,340 ಇದೆ. ಮಹಿಳಾ ಮತದಾರರು ಒಟ್ಟು 1,06,963 ಇದ್ದಾರೆ.

ಮಧ್ಯಮ ವರ್ಗದ ಜನರೇ ನೆಲೆಸಿರುವ ಕ್ಷೇತ್ರದಲ್ಲಿ ಸಂಚಾರ, ತ್ಯಾಜ್ಯ ವಿಲೇವಾರಿ, ರಸ್ತೆ ವಿಸ್ತರಣೆಯಂತಹ ಸಮಸ್ಯೆಗಳು ಉಳಿದಿವೆ. ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂಬುದು ಸ್ಥಳೀಯರ ಅಸಮಾಧಾನ. ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಆಗಿಲ್ಲ ಎಂಬ ಅಭಿಪ್ರಾಯ ಕೂಡ ಇದೆ. ಸುಮಾರು 30ಕ್ಕೂ ಹೆಚ್ಚು ಕೊಳಗೇರಿಗಳನ್ನು ಹೊಂದಿದ್ದು, ಅವರ ಮತಗಳೇ ನಿರ್ಣಾಯಕವಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿನ ಕೊಳಗೇರಿ ಎಲ್ಲ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಸೂಕ್ತ ರೀತಿ ಸ್ಲಂ ಅಭಿವೃದ್ಧಿಪಡಿಸಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಸಾಕಷ್ಟಿದೆ. ಕ್ಷೇತ್ರದಲ್ಲಿ ಶಾಸಕ ಜಮೀರ್ ಅಹ್ಮದ್ ಕೈಗೆ ಸಿಗಲ್ಲ ಎಂಬ ಮಾತುಗಳು ಇವೆ. ಜೊತೆಗೆ ಹಿಂದೂ, ಮುಸ್ಲಿಂ ಎನ್ನುವ ಬೇಧಭಾವ ಮಾಡುವುದಿಲ್ಲ ಎಂಬುದು ಶಾಸಕ ಜಮೀರ್ ಅಹ್ಮದ್ ಮೇಲಿನ ಪ್ಲಸ್ ಪಾಯಿಂಟ್.

ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕವಾಗಿದ್ದು, ಸುಮಾರು 80,000 ಮತ ಬಲ ಹೊಂದಿದೆ. ಬಳಿಕದ ಮತ ಬಲ ಇರುವುದು ಎಸ್​ಸಿ/ಎಸ್​ಟಿ ಸಮುದಾಯ. ಸುಮಾರು 65,000 ಎಸ್​ಸಿ,ಎಸ್​ಟಿ ಮತ ಪ್ರಭುಗಳಿದ್ದಾರೆ. ಇನ್ನು ಒಬಿಸಿ 35,000-40,000 ಮತಗಳಿವೆ. ಅದೇ ರೀತಿ ಕ್ರೈಸ್ತರು 12,000, ಒಕ್ಕಲಿಗರು 10,000 ಮತಗಳಿದ್ದರೆ, ಕುರುಬರು 10,000 ಮತಗಳಿವೆ. ಇನ್ನು ಕ್ಷೇತ್ರದಲ್ಲಿ ಬ್ರಾಹ್ಮಣರ ಮತ ಸುಮಾರು 7,000-8,000 ಇದೆ.

ಜಮೀರ್ ಅಹಮ್ಮದ್ ಖಾನ್

2018 ಚುನಾವಣೆಯ ಫಲಿತಾಂಶ:ಚಾಮರಾಜಪೇಟೆಯ ಕ್ಷೇತ್ರದಲ್ಲಿ ಯಾವತ್ತೂ ತ್ರಿಕೋನ ಸ್ಪರ್ಧೆಯೇ ಎದ್ದು ಕಾಣುತ್ತದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿ ಸಾಮಾನ್ಯ. ಆದರೆ, ಜಮೀರ್ ಖಾನ್ ಪ್ರಾಬಲ್ಯವೇ ಹೆಚ್ಚು. ಕಳೆದ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕೈ ಹಾಲಿ ಶಾಸಕ ಜಮೀರ್ ಅಹಮ್ಮದ್ ಖಾನ್ 65,339 ಮತಗಳನ್ನು ಗಳಿಸಿ ಭರ್ಜರಿ ಜಯಭೇರಿ ಬಾರಿಸಿದ್ದರು.

ಬಿಜೆಪಿ ಅಭ್ಯರ್ಥಿಯಾಗಿದ್ದ ಲಕ್ಷ್ಮೀನಾರಾಯಣ್ 32,202 ಮತಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಆಲ್ತಾಫ್ ಖಾನ್ 19,393 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಾಂಗ್ರೆಸ್​ನ ಜಮೀರ್ ಅಹಮ್ಮದ್ ಬರೋಬ್ಬರಿ 33,137 ಅಂತರದಿಂದ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಜಮೀರ್ ಆ ಮೂಲಕ 54% ಮತ ಪ್ರಮಾಣ ಗಳಿಸಿದ್ದರೆ, ಬಿಜೆಪಿ 27% ಮತ ಪ್ರಮಾಣ ಗಳಿಸಿತ್ತು. ಇನ್ನು ಜೆಡಿಎಸ್ ಮತಗಳಿಕೆ ಪ್ರಮಾಣ 16% ಇತ್ತು.

ಇದನ್ನೂ ಓದಿ:ಗೆಲ್ಲಲೇಬೇಕು ಎಂಬ ತವಕದಲ್ಲಿ ಬಿಜೆಪಿ, ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿ ಕಾಂಗ್ರೆಸ್: ಯಾರಿಗೆ ಸಿಗಲಿದೆ ಬ್ಯಾಟರಾಯನಪುರ ಕ್ಷೇತ್ರದ ಚುಕ್ಕಾಣಿ..?

Last Updated : Mar 13, 2023, 6:54 PM IST

ABOUT THE AUTHOR

...view details