ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕರು ಹಾಗೂ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಾಪತ್ತೆ ಪ್ರಕರಣವನ್ನು ಅವರ ಕುಟುಂಬದವರು ಬಯಸಿದರೆ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ಧಾರ್ಥ್ ನಾಪತ್ತೆಯಾಗಿರುವುದು ತಿಳಿದು ನನಗೆ ಆಘಾತವಾಯಿತು. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ಜನತೆಗೆ ತಿಳಿಯಬೇಕು. ಕುಟುಂಬದವರು ಬಯಸಿದರೆ ತನಿಖೆಗೆ ಶಿಫಾರಸು ಮಾಡುವ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ನನಗೆ ಹಲವಾರು ವರ್ಷಗಳಿಂದ ಸಿದ್ಧಾರ್ಥ ಆತ್ಮೀಯ ಸ್ನೇಹಿತರಾಗಿದ್ದವರು. ಕಾಫಿ ಕುಡಿಯುವ ಸಂದರ್ಭದಲ್ಲಿ ನಾನು ಅವರ ಕೆಫೆ ಕಾಫಿ ಡೇಗೆ ಹೋಗುತ್ತಿದ್ದೆ. ಎಲ್ಲೇ ಇದ್ದರೂ ಬಂದು ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಈ ಘಟನೆ ಬಳಿಕ ನನಗೂ ಆಘಾತವಾಗಿದೆ ಎಂದು ಹೇಳಿದರು.