ಕರ್ನಾಟಕ

karnataka

ಜೆಡಿಎಸ್ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ ಎಂ ಇಬ್ರಾಹಿಂ ರಾಜೀನಾಮೆ

By

Published : May 24, 2023, 9:13 PM IST

Updated : May 25, 2023, 12:17 PM IST

ಸೋಲಿನ ನೈತಿಕ ಹೊಣೆ ಹೊತ್ತು ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ಬಳಿಕ ಮಾತನಾಡಿದ ಅವರು, ಪಕ್ಷದ ಹೀನಾಯ ಸೋಲಿಗೆ ಕಾರಣಗಳೇನು ಅನ್ನೋದನ್ನು ಸಹ ಅವರು ಬಿಚ್ಚಿಟ್ಟರು.

C M Ibrahim resigned
C M Ibrahim resigned

ಸಿ ಎಂ ಇಬ್ರಾಹಿಂ

ಬೆಂಗಳೂರು: ಜೆಡಿಎಸ್‌ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ‌ ಜೆಡಿಎಸ್ ಅವಲೋಕನ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೊದಲೇ ಅವರು ರಾಜೀನಾಮೆ ಕೊಟ್ಟಿದ್ದಾರೆ.

ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ನಡೆದ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎಂ. ಇಬ್ರಾಹಿಂ ಅವರು, ಪಕ್ಷ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಪಕ್ಷದ ವರಿಷ್ಠರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಅದನ್ನು ಅಂಗೀಕರಿಸುವುದು, ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಇವತ್ತು ದೇವೇಗೌಡರು, ನೂತನ. ಶಾಸಕರು, ಹಿರಿಯರು, ಮುಖಂಡರು ಎಲ್ಲರನ್ನೂ ಕರೆದಿದ್ದರು. ಫಲಿತಾಂಶ ಬಂದ ಮಾರನೇ ದಿನವೇ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಿದ್ದೇನೆ. ಹೊಸ ಸರ್ಕಾರ ರಚನೆಯಾಗಿದೆ ಶುಭವಾಗಲಿ ಎಂದರು. ಕಾಂಗ್ರೆಸ್‌ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗ್ತೀವಿ ಎಂದು ಹೇಳಿದರು.

ಯು.ಟಿ.ಖಾದರ್ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಕುರಿತು ಮಾತನಾಡಿದ ಇಬ್ರಾಹಿಂ, ಯು.ಟಿ.ಖಾದರ್‌ ಅವರನ್ನು ಡಿಸಿಎಂ ಮಾಡಬಹುದಿತ್ತಲ್ಲ.‌ ಈಗ ಅವರು ಎದ್ದೇಳಂಗೂ ಇಲ್ಲ, ಮಾತಾಡಂಗು ಇಲ್ಲ ಎಂದು ಹೇಳುವ ಮೂಲಕ ಯು‌.ಟಿ.ಖಾದರ್ ಅವರನ್ನು ಸ್ಪೀಕರ್ ಮಾಡಿದ ಕಾಂಗ್ರೆಸ್ ನಡೆ ಟೀಕಿಸಿದರು.

ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೂ ನಾವು ರಾಜ್ಯದಲ್ಲಿ 60 ಲಕ್ಷ ಮತ ಪಡೆದಿದ್ದೇವೆ. ನಮ್ಮಲ್ಲಿ ಮತ ಪರಿವರ್ತನೆಗಾಗಿ ಸಿದ್ದತೆ ಮಾಡಿಕೊಳ್ಳುವಲ್ಲಿ ವಿಫಲವಾದೆವು. ಕೊನೆಯ ನಾಲ್ಕು ದಿನದ ತಂತ್ರಗಾರಿಕೆಯಲ್ಲಿ ವಿಫಲವಾದೆವು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಿ ಅಂತ ಕಾರ್ಯಕರ್ತರಿಗೆ ಹೇಳುತ್ತೇನೆ. ಈ ಸರ್ಕಾರದ ಮೂರು ತಿಂಗಳ ಹನಿಮೂನ್ ಪಿರೇಡ್ ನೋಡುತ್ತೇವೆ ಎಂದು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಇಂದು ಮೊದಲ ಸಭೆ ಕರೆದಿದ್ದಾರೆ. ಚುನಾವಣೆ ಆದ ನಂತರ ಸೇರಿರಲಿಲ್ಲ. ಯಾಕೆ ಹಿನ್ನಡೆಯಾಯ್ತು ಅನ್ನೋದರ ಬಗ್ಗೆ ಚರ್ಚೆ ಮಾಡಲಾಗಿದೆ. ಇದೊಂದು ಆತ್ಮಾವಲೋಕನ ಸಭೆ ಅಷ್ಟೆ ಇದು ಎಂದರು.

ಜೆಡಿಎಸ್ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರ ಬದಲಾವಣೆ ಈಗ ಯಾಕೆ ಅಂತ ಕೇಳ್ತೀವಿ. ಅವರು ಪಾಪ ಯಾಕೆ ಇದಕ್ಕೆ ಹೊಣೆಯಾಗ್ತಾರೆ? ಅವರು ಯಾಕೆ ಹೊಣೆಯಾಗಬೇಕು? ಸಾಂಪ್ರದಾಯಿಕ ಮತ ಯಾಕೆ ವಿಭಜನೆ ಆಯ್ತು ಅಂತ ಗೊತ್ತಿದೆ. ಬಿಜೆಪಿಯವರು ಏನೇನು ಮಾಡಿದ್ದಾರೆ ಅಂತ ಗೊತ್ತಿದೆ. ಹಿಜಾಬ್, ಹಲಾಲ್ ಹೀಗೆ ಅನೇಕ ವಿಚಾರ ಹುಟ್ಟು ಹಾಕಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತ ಹೀಗೆ ಬಿಜೆಪಿಯವರು ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿಗೆ ಆಯ್ಕೆ ಮಾಡಿ ದಲಿತ ಮತ ಸೆಳೆದರು. ಸಿದ್ದರಾಮಯ್ಯ ಕುರುಬ ಮತ ಸೆಳೆದರು. ಡಿ.ಕೆ.ಶಿವಕುಮಾರ್ ಒಕ್ಕಲಿಗ ಮತ ಸೆಳೆದರು ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಬಾರದಿತ್ತು. ಆಗಲೇ ಬಿಜೆಪಿ ಮಂಕಾಯ್ತು. ಮಗನಿಗಾದ್ರೂ ಒಂದು ಸ್ಥಾನ ಕೊಡಬೇಕಿತ್ತು. ಯಡಿಯೂರಪ್ಪ ಅವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಹೀಗೆ ಅನೇಕ ವಿಚಾರ ಜೆಡಿಎಸ್​ಗೆ ಸೋಲಾಯ್ತು. ವ್ಯವಸ್ಥಿತವಾಗಿ ಜೆಡಿಎಸ್ ಸೋಲೋಕೆ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯಾಧ್ಯಕ್ಷರ ಹುದ್ದೆ ನೀಡುವ ವಿಚಾರಕ್ಕೆ ಮಾತನಾಡಿದ ಜಿಟಿಡಿ, ಯಾವುದೇ ಹುದ್ದೆ ನಿಭಾಯಿಸುವ ಶಕ್ತಿ ಇಲ್ಲ. ಸಮುದ್ರದಲ್ಲಿ ಈಜಿ ಈಗ ಬಂದಿದ್ದಾಗಿದೆ.‌ ಯಾವುದೇ ಹುದ್ದೆ ಕೊಟ್ರೆ ನಾವು ನಿಭಾಯಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ನಾನು ಸೀನಿಯರ್ ಲೀಡರ್ ಇದ್ದೀನಿ ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ: ಸಚಿವ ಎಂ ಬಿ ಪಾಟೀಲ್

Last Updated : May 25, 2023, 12:17 PM IST

ABOUT THE AUTHOR

...view details