ಕರ್ನಾಟಕ

karnataka

By

Published : Dec 8, 2019, 5:47 AM IST

ETV Bharat / state

ಕಾಂಗ್ರೆಸ್-ಜೆಡಿಎಸ್​ಗೆ​ ಹಿನ್ನಡೆಯಾಗುವುದೇ ಉಪಚುನಾವಣೆ ಫಲಿತಾಂಶ?

ಬಿಜೆಪಿಗೆ ಹೆಚ್ಚು ಸ್ಥಾನಗಳು ಬರಲಿದ್ದು, ಸರ್ಕಾರ ಸುಭದ್ರವಾಗಲಿದೆ ಎಂಬುದನ್ನು ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಹೇಳಿವೆ. ಇದರಿಂದಾಗಿ ಕಾಂಗ್ರೆಸ್​ನಲ್ಲಿ ತಲ್ಲಣ, ಜೆಡಿಎಸ್ ನಲ್ಲಿ ತಳಮಳ ಆರಂಭವಾಗಿದೆ

By  election results
By election results

ಬೆಂಗಳೂರು: ಉಪಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆ ಗಾಳಿ ಬೀಸಬಹುದೆಂಬ ವಿಶ್ವಾಸದಲ್ಲಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್​ಗೆ ಹಿನ್ನಡೆ ಉಂಟಾಗಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.

ಬಿಜೆಪಿಗೆ ಹೆಚ್ಚು ಸ್ಥಾನಗಳು ಬರಲಿದ್ದು, ಸರ್ಕಾರ ಸುಭದ್ರವಾಗಲಿದೆ ಎಂಬುದನ್ನು ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಹೇಳಿವೆ. ಇದರಿಂದಾಗಿ ಕಾಂಗ್ರೆಸ್​ನಲ್ಲಿ ತಲ್ಲಣ, ಜೆಡಿಎಸ್ ನಲ್ಲಿ ತಳಮಳ ಆರಂಭವಾಗಿದೆ. ಜೆಡಿಎಸ್​ನಲ್ಲಿದ್ದ ಕೆ. ಗೋಪಾಲಯ್ಯ, ಹೆಚ್.ವಿಶ್ವನಾಥ್ ಹಾಗೂ ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನದಲ್ಲಿ ಪಾಲುದಾರರಾಗಿದ್ದರು. ಇದರಿಂದಾಗಿ ಈ ಮೂರು ಕ್ಷೇತ್ರಗಳನ್ನು ಜೆಡಿಎಸ್ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆದರೆ, ಅನರ್ಹ ಶಾಸಕರನ್ನು ಎದುರಿಸಬಲ್ಲ ಎಲ್ಲ ರೀತಿಯಿಂದಲೂ ಸಮರ್ಥರಾದ ಅಭ್ಯರ್ಥಿಗಳು ಕೊನೆಗಳಿಗೆವರೆಗೂ ಜೆಡಿಎಸ್​ಗೆ ಸಿಗಲೇ ಇಲ್ಲ. ಇನ್ನು ನಗರದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಕೊನೆ ಕ್ಷಣದವರೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿರಲಿಲ್ಲ. ಜಾತಿ ಸಮೀಕರಣ ಸೇರಿದಂತೆ ಇತರ ಆಯಾಮಗಳನ್ನು ಅಳೆದೂ ತೂಗಿ ಟಿಕೆಟ್ ನೀಡಿದರೂ ಗೆಲ್ಲುವ ಭರವಸೆ ಜೆಡಿಎಸ್ ನಾಯಕರಲ್ಲೇ ಇಲ್ಲ ಎನ್ನಲಾಗಿದೆ.

ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್​ಗೆ ಗೆಲುವಿನ ವಿಶ್ವಾಸವಿಲ್ಲ. ಯಶವಂತಪುರದಲ್ಲಿ ಸಮಬಲ ಹೋರಾಟದ ಸೂಚನೆ ಸಿಕ್ಕಿದೆ. ಆದರೆ, ಈ ಬಗ್ಗೆ ಜೆಡಿಎಸ್​ನಲ್ಲಿಯೇ ನಂಬಿಕೆ ಇಲ್ಲ. ಕೆ.ಆರ್. ಪೇಟೆ ಕ್ಷೇತ್ರದಲ್ಲೂ ಇದೆ ರೀತಿಯ ಅನುಮಾನ ವ್ಯಕ್ತವಾಗಿದೆ. ಯಶವಂತಪುರದಲ್ಲಿ ಜೆಡಿಎಸ್​ನ ಜವರಾಯಿಗೌಡ ಎರಡು ಬಾರಿ ಸೋತ ಅನುಕಂಪದ ಹಿನ್ನೆಲೆಯಲ್ಲಿ ಪೈಪೋಟಿ ನೀಡಬಹುದು. ಆದರೆ, ಗೆಲ್ಲುವುದು ಕಷ್ಟ ಎಂಬ ಭಾವನೆ ಪಕ್ಷದ ವಲಯದಲ್ಲೇ ಕೇಳಿ ಬರುತ್ತಿದೆ.

ಒಂದು ವೇಳೆ ಮತದಾನೋತ್ತರ ಸಮೀಕ್ಷೆ ನಿಜವಾದರೆ ಜೆಡಿಎಸ್​ ಕಿಂಗ್ ಮೇಕರ್ ಕನಸು ಭಗ್ನವಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಬಿಜೆಪಿಗೆ 5 ರಿಂದ 6 ಸ್ಥಾನ ಸಿಕ್ಕರೆ ಮತ್ತೆ ಎರಡನೇ ಹಂತದ ಆಪರೇಷನ್ ಕಮಲ ನಡೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈಗಾಗಲೇ ಜೆಡಿಎಸ್​ನಿಂದ ಬಿಜೆಪಿ ಸೇರಲು ಕೆಲ ಶಾಸಕರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಕಾಂಗ್ರೆಸ್​ನಲ್ಲೂ ಒಂದು ರೀತಿಯ ತಲ್ಲಣ ಆರಂಭವಾಗಿದೆ. ಹದಿನೈದು ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಸೇರಿದಂತೆ ಬೆರಳೆಣಿಕೆಯಷ್ಟು ಮಾತ್ರ ನಾಯಕರು ಪ್ರಚಾರದಲ್ಲಿ ತೊಡಗಿದ್ದರು. ಶಿವಾಜಿನಗರ, ಕೆ.ಆರ್.ಪುರ, ಯಶವಂತಪುರ ಕ್ಷೇತ್ರಗಳಲ್ಲಿ ಪ್ರಚಾರದ ವೇಳೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೊರತುಪಡಿಸಿದರೆ ಇತರ ಕಾಂಗ್ರೆಸ್ ನಾಯಕರು ಕಾಣಿಸಲೇ ಇಲ್ಲ. ಇತರ ಕ್ಷೇತ್ರಗಳಲ್ಲೂ ಈ ಬಿಜೆಪಿ ನಾಯಕರ ಅಬ್ಬರದ ಪ್ರಚಾರದ ಮಧ್ಯೆ ಕಾಂಗ್ರೆಸ್ ನಾಯಕರ ಪ್ರಚಾರ ಸೊರಗಿತ್ತು. ಆದರೂ, ಹುಣಸೂರು, ಹೊಸಕೋಟೆ, ಗೋಕಾಕ್, ರಾಣೆಬೆನ್ನೂರು, ಹಿರೇಕೆರೂರು, ಅಥಣಿ ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಕಾಂಗ್ರೆಸ್​ಗೆ ಇದೆ. ಉಪಚುನಾವಣೆಯಲ್ಲಿ ಮತದಾರನ ನಿಗೂಢನಡೆ ಏನೆಂಬುದು ಸೋಮವಾರ ಹೊರಬೀಳಲಿದೆ.

ABOUT THE AUTHOR

...view details