ಕರ್ನಾಟಕ

karnataka

By

Published : Jun 25, 2023, 8:37 PM IST

ETV Bharat / state

ಛಂಬಲ್ ಡಕಾಯಿತರಿಂದ ದೇಗುಲಗಳನ್ನು ಕಟ್ಟಲು ಕಲ್ಲು ಹೊರಿಸಿ ಅವರ ಮನಪರಿವರ್ತನೆಗೆ ಕಾರಣನಾದೆ: ಪುರಾತತ್ವಶಾಸ್ತ್ರಜ್ಞ ಮೊಹಮ್ಮದ್

ಕಮ್ಯುನಿಸ್ಟ್ ಇತಿಹಾಸಕಾರರು ಇಷ್ಟೂ ವರ್ಷ ರಾಮಜನ್ಮಭೂಮಿ ವಿಚಾರದಲ್ಲಿ ಪಠ್ಯಪುಸ್ತಕಗಳಲ್ಲಿ ಮತ್ತು ಮಾಧ್ಯಮ ಮೂಲಕ ಸುಳ್ಳನ್ನು ಹೇಳಿಕೊಂಡು ಬಂದಿದ್ದರು. ಆದರೆ ಮೆಕ್ಕಾ ಮದೀನಾ ಹೇಗೆ ಮುಸ್ಲಿಮರಿಗೆ ಪವಿತ್ರ ಭೂಮಿಯೋ, ಹಾಗೆಯೇ ರಾಮಜನ್ಮಭೂಮಿ ಹಿಂದೂಗಳಿಗೆ ಅಷ್ಟೇ ಪವಿತ್ರ ಸ್ಥಳ. ಇದನ್ನೂ ಮುಸ್ಲಿಮರೂ ಮನಗಾಣಬೇಕು: ಪುರಾತತ್ವಶಾಸ್ತ್ರಜ್ಞ ಮೊಹಮ್ಮದ್

Archaeologist Mohammad spoke in the dialogue program.
ಸಂವಾದ ಕಾರ್ಯಕ್ರಮದಲ್ಲಿ ಪುರಾತತ್ವಶಾಸ್ತ್ರಜ್ಞ ಮೊಹಮ್ಮದ್ ಮಾತನಾಡಿದರು.

ಬೆಂಗಳೂರು: ಛಂಬಲ್ ಡಕಾಯಿತರಿಂದ ದೇಗುಲಗಳನ್ನು ಕಟ್ಟಲು ಕಲ್ಲು ಹೊರಿಸಿ ಅವರ ಮನಃಪರಿವರ್ತನೆ ಕಾರಣನಾದೆ ಎನ್ನುವ ಸಂತೃಪ್ತಿ ನನಗಿದೆ. ನನ್ನ ಪುನರುತ್ಥಾನದ ಕೆಲಸಗಳಿಂದ ನಮ್ಮ ಪೂರ್ವಜರಾದ ಘಜ್ನಿ ಮೊಹಮ್ಮದ್, ಮೊಹಮ್ಮದ್ ಘೋರಿ ತರಹದ ರಾಜರುಗಳು ಭಾರತದ ಜನರ, ಮಂದಿರಗಳ, ಸಂಸ್ಕೃತಿಯ ಮೇಲೆ ಮಾಡಿದ ಅನಾಚಾರಗಳನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿದೆ ಎನ್ನುವ ಕೃತಾರ್ಥ ಭಾವವಿದೆ ಎಂದು ಪುರಾತತ್ವ ಶಾಸ್ತ್ರಜ್ಞ ಕೆ ಕೆ ಮೊಹಮ್ಮದ್ ಹೇಳಿದರು.

ಭಾನುವಾರ ಹುಳಿಮಾವು ಬಳಿಯ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ವಿವೇಕಾನಂದ ವಿಚಾರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧ್ಯಪ್ರದೇಶದ ಪುರಾತತ್ವ ಸರ್ವೇಕ್ಷಣ ಅಧಿಕಾರಿಯಾಗಿ ಕ್ಷೇತ್ರೀಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಪಾಳು ಬಿದ್ದ ಪ್ರಾಚೀನ ಅವಶೇಷಗಳ ಬಗ್ಗೆ ದಾಖಲೆ ಸಂಗ್ರಹಿಸತೊಡಗಿದೆ. ಮುಖ್ಯವಾಗಿ ಮೋರೇನಾ ಜಿಲ್ಲೆಯ ಕಾಡುಗುಡ್ಡದ ನಡುವೆ ದೇವಾಲಯಗಳ ಅವಶೇಷಗಳು ರಾಶಿ ಬಿದ್ದಿವೆ. ಆ ಕಲ್ಲು ಚಪ್ಪಡಿ, ವಿಗ್ರಹ, ಕಂಬ, ಬೋದಿಗೆಗಳ ರಾಶಿಯೇ ಒಂದು ಗುಡ್ಡದಷ್ಟಿದೆ ಎಂದು ಕಚೇರಿಯ ಜವಾನ ಹೇಳಿದ ಮೇಲೆ ಛಂಬಲ್ ಕಣಿವೆಯ ದೇಗುಲಗಳ ಬಗೆಗೆ ವಿಶೇಷ ಆಸಕ್ತಿ ಬೆಳೆಯಿತು ಎಂದು ತಿಳಿಸಿದರು.

ಛಂಬಲ್ ಡಕಾಯಿತರು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ಮೂರೂ ರಾಜ್ಯದ ಪೊಲೀಸರಿಗೆ ಸೆಡ್ಡು ಹೊಡೆದು ತಮ್ಮದೇ ಪಾತಕ ಜಗತ್ತನ್ನು ಕಟ್ಟಿ ಆಳುತ್ತಿದ್ದವರು. ಈ ಪ್ರದೇಶಗಲ್ಲಿ ಹಲವು ಪ್ರಾಚೀನ ದೇಗುಲಗಳು ಪಾಳು ಬಿದ್ದಿವೆ ಎನ್ನುವ ಸಂಗತಿ ತಿಳಿದೆ. ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಭೂತನಾಥ್ ದೇವರ ಮಂದಿರ ಪಾಳು ಬಿದ್ದಿದೆ ಎಂಬುದು ತಿಳಿಯಿತು. ಸ್ಥಳೀಯ ಡ್ರೈವರ್ ಜೊತೆ ಆ ಪ್ರದೇಶ ನೋಡಲು ಹೊರಟೆ. ಅಲ್ಲಿನ ಡಕಾಯಿತರು ಮತ್ತು ಭೂತನಾಥನ ಗಣಗಳು ಅಲ್ಲಿ ಹೋದವರ ಜೀವ ತೆಗೆಯುತ್ತಾರೆ ಎನ್ನುವ ಭಯದಿಂದ ಕಾರು ಚಾಲಕ ಕೂಡ ಛಂಬಲ್ ಪ್ರದೇಶ ಬರುತ್ತಿದ್ದಂತೆ ಹೆದರಿದ ಎಂದು ತಮ್ಮ ವೃತ್ತಿ ಜೀವನದ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸ್ವಾತಂತ್ರ್ಯ ಬಂದ ಕಾಲದಲ್ಲಿ ಮುದಿ ಡಕಾಯಿತ ಮಾನ್​ಸಿಂಗ್ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದ. 1112 ರಾಬರಿ ಮತ್ತು 185 ಕೊಲೆ ಮಾಡಿದ್ದನು. ಅವನ ಕೈಯಲ್ಲಿ ಸತ್ತವರಲ್ಲಿ 32 ಜನ ಪೊಲೀಸರಾಗಿದ್ದರು. ನಂತರ ಛಂಬಲ್ ಕಣಿವೆ ನಿರ್ಭಯ್ ಗುರ್ಜರ್ ಎಂಬ ಮೋಸ್ಟ್ ವಾಂಟೆಡ್ ಡಕಾಯಿತನ ಕೈಯಲ್ಲಿತ್ತು. ಉಳಿದಂತೆ ರಾಂ ಬಾಬು ಗಡಾರಿಯಾ ಮೊದಲಾದವರು ಸಣ್ಣಪುಟ್ಟ ತಂಡ ಕಟ್ಟಿಕೊಂಡು ಛಂಬಲ್ ಕಣಿವೆಯೊಳಗೆ ಕುಳಿತು ಮೂರೂ ರಾಜ್ಯಗಳಲ್ಲಿ ಕಾನೂನಿಗೆ ಸಮಾಧಿ ಕಟ್ಟಿದ್ದರು. ಈ ಡಕಾಯಿತರ ಭಯದಿಂದಾಗಿ ಅಲ್ಲಿನ ಮಂದಿರಗಳ ಪರಿಸರಕ್ಕೆ ಯಾರ ನೆರಳೂ ಬಿದ್ದಿರಲಿಲ್ಲ ಎಂದು ವಿವರಿಸಿದರು.

ಭಾರತದ ಅಂಗ್‍ಕೋರ್‍ವಾಟ್ ಎನ್ನಬಹುದಾದ ಬಟೇಶ್ವರ ದೇಗುಲ ಸಮೂಹ ಸುಮಾರು 24 ಎಕ್ರೆ ವಿಸ್ತೀರ್ಣದಲ್ಲಿತ್ತು. ಕೇವಲ ಕಲ್ಲು ಚಪ್ಪಡಿಗಳ ಅಗಾಧ ರಾಶಿ, ಬೆಲೆಕಟ್ಟಲಾಗದ ಶಿಲ್ಪ ವೈವಿಧ್ಯಗಳು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹರಡಿರುವ ಅವಶೇಷಗಳ ಗುಪ್ಪೆಯನ್ನು ಸುಂದರ ದೇಗುಲವಾಗಿ ನಿರ್ಭಯ್ ಗುರ್ಜರ್ ಮನವೊಲಿಸಿ ಅಲ್ಲಿನ ಡಕಾಯಿತರಿಂದ ಸಹಾಯ ಪಡೆದು ನಿರ್ಮಿಸಿದ್ದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಇದೇ ರೀತಿಯಲ್ಲಿ ಹಲವು ಸ್ಥಳೀಯ ಡಾಕುಗಳ ಮನಃಪರಿವರ್ತನೆ ಮಾಡಿ ಅವರಿಂದ ಸಹಾಯ ಪಡೆದು ಹಲವು ದೇಗುಲಗಳನ್ನು ಪುನರುತ್ಥಾನಗೊಳಿಸಿರುವೆ ಎಂದು ಮೊಹಮ್ಮದ್​ ವಿವರಿಸಿದರು.

ಕಮ್ಯುನಿಸ್ಟ್ ಇತಿಹಾಸಕಾರರಿಂದ ದಾರಿ ತಪ್ಪಿಸುವ ಕೆಲಸ: ಅಯೋಧ್ಯೆ ವಿಚಾರದ ಕುರಿತು ಕೂಡ ಸಂವಾದ ನೆಡೆಸಿ ಮಾತನಾಡಿ, ಮುಖ್ಯವಾಗಿ ಕಮ್ಯುನಿಸ್ಟ್ ಇತಿಹಾಸಕಾರರು ಇಷ್ಟೂ ವರ್ಷ ರಾಮಜನ್ಮಭೂಮಿ ವಿಚಾರದಲ್ಲಿ ಪಠ್ಯಪುಸ್ತಕಗಳಲ್ಲಿ ಮತ್ತು ಮಾಧ್ಯಮಗಳ ಮೂಲಕ ಸುಳ್ಳನ್ನು ಹೇಳಿಕೊಂಡು ಬಂದಿದ್ದರು. ಅವರ ಜೊತೆ ನನ್ನ ಕೆಲಸದುದ್ದಕ್ಕೂ ಸಂಘರ್ಷ ನಡೆಸಿಕೊಂಡು ಬಂದಿದ್ದೇನೆ. ಮೆಕ್ಕಾ ಮದೀನಾ ಹೇಗೆ ಮುಸ್ಲಿಮರಿಗೆ ಪವಿತ್ರ ಭೂಮಿಯೋ, ಹಾಗೆಯೇ ರಾಮಜನ್ಮಭೂಮಿ ಹಿಂದೂಗಳಿಗೆ ಅಷ್ಟೇ ಪವಿತ್ರ ಸ್ಥಳ ಇದನ್ನೂ ಮುಸ್ಲಿಮರೂ ಮನಗಾಣಬೇಕು ಎಂದು ಧೈರ್ಯವಾಗಿ ಹೇಳುತ್ತೇನೆ ಎಂದು ತಿಳಿಸಿದರು.

ಕಮ್ಯುನಿಸ್ಟ್ ವಾದಿಗಳ ಬುದ್ಧ ಸ್ತೂಪಗಳು ಅಲ್ಲಿದ್ದವು. ಇನ್ನೂ ಹಲವು ಧರ್ಮ ಪಂಥಗಳ ವಿಚಾರಗಳನ್ನು ಅಯೋಧ್ಯೆ ರಾಮ ಜನ್ಮಭೂಮಿ ವಿಚಾರದಲ್ಲಿ ತಂದು ಸುಪ್ರೀಂ ಕೋರ್ಟ್ ಅನ್ನು ಕೂಡ ದಾರಿ ತಪ್ಪಿಸುವ ಕೆಲಸವನ್ನು ಮಾಡಿದ್ದರು. ನಾನು ಉತ್ಖನನ ತಂಡದಲ್ಲಿ ಇಲ್ಲವೇ ಇಲ್ಲ ಎಂದು ಸುದ್ದಿ ಮಾಧ್ಯಮಗಳ ಮೂಲಕವೂ ಹಬ್ಬಿಸಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ನಡೆಸಿದ್ದರು. ಎಲ್ಲ ಆಧಾರಗಳು ನನ್ನ ಬಳಿ ಇದ್ದವು ಮತ್ತು ಕೋರ್ಟ್​ ಗೆ ಕೂಡ ಸೂಕ್ತ ಸಮಯದಲ್ಲಿ ಸಲ್ಲಿಸಲಾಯಿತು. ಆದರೆ ಸತ್ಯವೇ ಕೊನೆಗೆ ಗೆದ್ದಿದೆ. ಈಗ ಆ ಜಾಗದಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗುತ್ತಿದೆ ಎಂದು ಅವರು ತಮ್ಮ ಹೋರಾಟದ ಬಗ್ಗೆ ಹೇಳಿದರು.

ಕುತುಬ್ ಮಿನಾರ್ ಸ್ಥಳದಲ್ಲಿ ಹಿಂದೂ ದೇವಾಲಯ ಇರಲಿಲ್ಲ: ರಾಮಮಂದಿರ ವಿಚಾರ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದ್ದು, ಹಿಂದೆ ಹಿಂದೂ ದೇಗುಲ ಇತ್ತು ಎಂಬ ಕಾರಣಕ್ಕೆ. ಆದರೆ ಕೆಲವರ ವಾದದಂತೆ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಗಳು ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ನಿರ್ಮಿಸಲಾಗಿದೆ ಎಂಬುದು ಊಹಾಪೋಹ, ಇದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮವನ್ನು ವಿವೇಕಾನಂದ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀವತ್ಸ ಸುಬ್ರಮಣ್ಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪ್ರಶಾಂತ್ ಕೃಷ್ಣಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಕೆ ಕೆ ಮೊಹಮದ್ ಯಾರು?: 1976-77ರಲ್ಲಿ ಬಾಬರಿ ಮಸೀದಿ ಜಾಗವನ್ನು ಉತ್ಖನನ ಮಾಡಿದ 10 ಸದಸ್ಯರ ಕೇಂದ್ರ ಪುರಾತತ್ವ ಇಲಾಖೆಯ ತಂಡದ ಭಾಗವಾಗಿ ಕೆ ಕೆ ಮೊಹಮ್ಮದ್ ಇದ್ದರು. ಅವರು ತಂಡದ ಏಕೈಕ ಮುಸ್ಲಿಂ ಸದಸ್ಯರಾಗಿದ್ದರು. ಅವರು ಮಸೀದಿಯನ್ನು ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂಓದಿ:ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ಉಪವಾಸ ಕುಳಿತ ರೈತರು: ಸಚಿವರ ಭರವಸೆ ಮೇರೆಗೆ ಉಪವಾಸ ಅಂತ್ಯ

ABOUT THE AUTHOR

...view details