ಕರ್ನಾಟಕ

karnataka

ಇಂದೇ ಪ್ರತಿಪಕ್ಷ ನಾಯಕರ ಹೆಸರು ಪ್ರಕಟ.. ಯಾರಿಗೇ ಅವಕಾಶ ನೀಡಿದರೂ ಸ್ವಾಗತ: ಬಿ ಎಸ್​ ಯಡಿಯೂರಪ್ಪ

By

Published : Jul 5, 2023, 12:25 PM IST

Updated : Jul 5, 2023, 2:24 PM IST

ಬಿಜೆಪಿಯಿಂದ ಪ್ರತಿಪಕ್ಷ ನಾಯಕರು ಹಾಗೂ ನೂತನ ರಾಜ್ಯಾಧ್ಯಕ್ಷರ ಹೆಸರುಗಳು ಇಂದು ಪ್ರಕಟವಾಗಲಿವೆ ಎಂದು ಬಿಎಸ್​ವೈ ತಿಳಿಸಿದ್ದಾರೆ.

ಬಿ ಎಸ್​ ಯಡಿಯೂರಪ್ಪ
ಬಿ ಎಸ್​ ಯಡಿಯೂರಪ್ಪ

ಬಿ ಎಸ್​ ಯಡಿಯೂರಪ್ಪ

ಬೆಂಗಳೂರು: ಉಭಯ ಸದನಗಳ ಪ್ರತಿಪಕ್ಷ ನಾಯಕರು ಮತ್ತು ನೂತನ ರಾಜ್ಯಾಧ್ಯಕ್ಷರ ನೇಮಕ ಕುರಿತು ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿ ವಾಪಸಾಗಿದ್ದು ಇಂದೇ ಹೈಕಮಾಂಡ್ ಹೆಸರುಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸ ಧವಳಗಿರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಯಾರಾಗಬೇಕು ಅಂತಾ ಕೇಂದ್ರದ ನಾಯಕರು ಬಂದು ಅಭಿಪ್ರಾಯ ತೆಗೆದುಕೊಂಡು ಹೋಗಿದ್ದಾರೆ. ಬಹುಶಃ ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬಹುದು ಅಂತಾ ನಾವೆಲ್ಲಾ ಭಾವಿಸಿದ್ದೇವೆ. ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ, ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ, ಬಹುಶಃ ಇವತ್ತು ಘೋಷಣೆ ಆಗಬಹುದು ಎಂದರು.

ನಿನ್ನೆ ದಿನ ವಿಧಾನಸಭೆಯಲ್ಲಿ ಬಿಜೆಪಿ ಸದ್ಯರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಿದ್ದ ವೇಳೆ ಮೊಂಡಾಟ ಬಿಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ಮಾತಾಡುವುದನ್ನು ನಿಲ್ಲಿಸಬೇಕು. ಗ್ಯಾರಂಟಿ ಕಾರ್ಡ್ ಕೊಟ್ಟಿರುವುದನ್ನು ಜಾರಿ ಮಾಡಿ ಅಂತಾ ಹೇಳುತ್ತಿದ್ದೇವೆ. ಅವರು ಮನಬಂದಂತೆ ಮಾತಾಡುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ತಿರುಗೇಟು ನೀಡಿದರು.

ನಾವು ಹೊಸದಾಗಿ ಏನೂ ಕೇಳುತ್ತಾ ಇಲ್ಲ, ಅವರೇ ಕೊಟ್ಟಿರುವ ಭರವಸೆ ಈಡೇರಿಸಬೇಕು ಅಂತಾ ಒತ್ತಾಯಿಸುತ್ತಿದ್ದೇವೆ ಅಷ್ಟೇ. ನಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ ಜಿಲ್ಲೆಗಳಿಗೆ ಹೋಗಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ಲಿಂಗಾಯತ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒತ್ತಾಯ ಬರುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ಒತ್ತಾಯ ಯಾರು ಮಾಡುತ್ತಿದ್ದಾರೋ ಗೊತ್ತಿಲ್ಲ, ಅದು ಅವರಿಗೆ ಬಿಟ್ಟ ವಿಚಾರ. ಯಾರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೂ ಸಹ ನಾವು ಸ್ವಾಗತಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸೋಮವಾರವೇ ಬಿಜೆಪಿ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದು ಬಿಎಸ್​ವೈ ಹೇಳಿದ್ದರು. ಆದರೆ ಕೆಲ ಕಾರಣಗಳಿಂದ ಕೇಂದ್ರದ ವೀಕ್ಷಕರ ಬರದ ಕಾರಣ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ:Deputy Speaker: ಡೆಪ್ಯುಟಿ ಸ್ಪೀಕರ್ ಹುದ್ದೆಗೆ ನಾಳೆ ಚುನಾವಣೆ; ಶಾಸಕ ರುದ್ರಪ್ಪ ಲಮಾಣಿ ಆಯ್ಕೆ ಖಚಿತ

Last Updated : Jul 5, 2023, 2:24 PM IST

ABOUT THE AUTHOR

...view details