ಬೆಂಗಳೂರು :ರಾಜ್ಯದೊಳಗೆ ನಗರ ಸಾರಿಗೆ ಬಸ್ಗಳು ಹೊರ ಸೂಸುವ ಹೊಗೆಯಿಂದಲೇ ಹೆಚ್ಚು ವಾಯುಮಾಲಿನ್ಯ ಆಗ್ತಿದೆ ಅನ್ನೋ ಆರೋಪ ಮುಂಚಿನಿಂದಲೂ ಇದೆ. ಹೀಗಾಗಿಯೇ, ಮಾಲಿನ್ಯ ಮುಕ್ತ ಸಾರಿಗೆ ಮಾಡಲು ಈಗಾಗಲೇ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳ ಮೊರೆ ಹೋಗಿದೆ.
ಇದರೊಟ್ಟಿಗೆ ಶೇ. 80ರಷ್ಟು ವಾತಾವರಣದ ಮಾಲಿನ್ಯವನ್ನ ಕಡಿಮೆ ಮಾಡುವ ಬಿಎಸ್-6 ಬಸ್ಗಳನ್ನ(BS6 bus)ಖರೀದಿಸಲು ಸಂಸ್ಥೆ ಮುಂದಾಗಿದೆ. ಈ ಕುರಿತು ಈಗಾಗಲೇ ಸಂಸ್ಥೆಯ ಬಿಎಂಟಿಸಿ(BMTC) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ ಅಂತ್ಯದಲ್ಲಿ ಬಿಎಸ್-6ನ 50 ಬಸ್ಗಳು ಬರಲಿವೆ. ಬಳಿಕ ಹಂತ ಹಂತವಾಗಿ ಬಸ್ಗಳು ರಸ್ತೆಗಿಳಿಯಲಿವೆ. ಈ ಬಸ್ಗಳನ್ನು 2017-18ರಲ್ಲಿ ಬಸ್ಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ.
ನವೆಂಬರ್ ಅಂತ್ಯದಲ್ಲಿ ಬಿಎಸ್-6 ಬಸ್ಗಳ ಸಂಚಾರ 2019ರಲ್ಲೇ ಬಿಎಸ್-4 ಮಾದರಿಯ 800 ಬಸ್ ಖರೀದಿ ಮಾಡಲಾಗಿತ್ತು. ಆದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿ ಟಿ) ಬಿಎಸ್ 4 ಬಸ್ಗಳನ್ನ ಖರೀದಿ ಮಾಡದಂತೆ ಸೂಚಿಸಿತ್ತು. ಬದಲಿಗೆ ಬಿಎಸ್-6 ಬಸ್ಗಳನ್ನೇ ಓಡಿಸಬೇಕು ಅಂತಾ ಸೂಚನೆ ನೀಡ್ತು. ಹೀಗಾಗಿ, ಹಳೇ ಟ್ರೆಂಡ್ ರದ್ದು ಮಾಡಲಾಯ್ತು.
ಬಳಿಕ ಎಮೆಷನ್ ಕಡಿಮೆ ಮಾಡುವ ದೃಷ್ಟಿಯಿಂದ ಹೊಸ ಟೆಂಡರ್ ಕರೆಯಲು ಮುಂದೆ ಬಂದಾಗ ಕೊರೊನಾ ಬಂದು ಅದು ಅರ್ಧಕ್ಕೆ ನಿಂತಿತ್ತು. ಇದೀಗ ಟೆಂಡರ್ ಅಂತಿಮ ಮಾಡಿದ್ದು, ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಎಸ್ 6 ವಾಹನ ಖರೀದಿಸಲು ಬಿಎಂಟಿಸಿ ಮುಂದಾಗಿದೆ.
ಸಂಸ್ಥೆಯು BSVI ಮಾದರಿಯ ಒಟ್ಟು 565 ಬಸ್ಗಳನ್ನು M/s Ashok Leyland pvt. Ltd ಅವರಿಂದ ಖರೀದಿಸಲು ಟೆಂಡರ್ ನೀಡಿದೆ. ಮೊದಲ ಭಾಗವಾಗಿ ಈ ತಿಂಗಳ ಅಂತ್ಯದಲ್ಲಿ 50, ಮುಂದಿನ ತಿಂಗಳು 150 ಬಸ್ಗಳು ರಸ್ತೆಗಿಳಿಯಲಿವೆ. ಉಳಿದ ಎಲ್ಲಾ ಬಸ್ಗಳನ್ನು ಮುಂದಿನ ಫೆಬ್ರುವರಿ 2022ರೊಳಗಾಗಿ ಸಂಸ್ಥೆಗೆ ಪೂರೈಸಲಿದ್ದಾರೆ.
ಬಿಎಸ್-6 ಬಸ್ಗಳ ಸ್ಪೆಷಾಲಿಟಿ ಏನು?:ಬಿಎಸ್6 ಬಸ್ ಪರಿಸರ ಸ್ನೇಹಿಯಾಗಿದ್ದು(eco friendly) ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತೆ. ಅಂದರೆ ಶೇ. 80ರಷ್ಟು ಮಾಲಿನ್ಯ ಮುಕ್ತವಾಗಿದೆ.
ಈ ವಾಹನವು ಬಿಎಸ್4 ವಾಹನಗಳಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ(197HP). ಇತರೆ ಬಸ್ಗಳಲ್ಲಿ ಸಂಭವಿಸುತ್ತಿದ್ದ ಅಗ್ನಿ ಅವಘಡಗಳು, ಇದರಲ್ಲಿ ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರಲಿದೆ.
ನೌಕರ ಸಂಘಟನೆ ವಿರೋಧ :ಕೊರೊನಾದಿಂದ ಪಾತಾಳಕ್ಕೆ ಇಳಿದಿರುವ ಬಿಎಂಟಿಸಿ, ತನ್ನ ನೌಕರರಿಗೆ ಅರ್ಧ ವೇತನವನ್ನ ಪಾವತಿಸುತ್ತಾ ಬಂದಿದೆ. ಜೊತೆಗೆ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿದೆ.
ಹೀಗಾಗಿ, ಹೊಸ ಬಸ್ಗಳ ಖರೀದಿ ಅಗತ್ಯವಿದ್ಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ಈಗಿರೋ ಬಸ್ಗಳೇ ರಸ್ತೆಗಿಳೀತಿಲ್ಲ. ಹೊಸ ಬಸ್ ಯಾಕೆ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.
ಆದರೆ, ಈ ಸಂಬಂಧ ಅಧಿಕಾರಿಗಳನ್ನ ಕೇಳಿದರೆ, ಬಸ್ ಖರೀದಿಗೆ ಮೀಸಲಿಟ್ಟ ಹಣವನ್ನ ಬೇರೆ ಯಾವುದೇ ಯೋಜನೆಗೂ ಬಳಸಲು ಕಾನೂನು ಕ್ರಮವಿಲ್ಲ. ಹೀಗಾಗಿ, ಬಸ್ ಖರೀದಿಗಾಗಿ ಮೀಸಲಿಟ್ಟ ಹಣದಲ್ಲಿ ಬಸ್ಗಳನ್ನೇ ಖರೀದಿಸಿ ಲೆಕ್ಕ ನೀಡಬೇಕಿದೆ ಎಂದು ತಿಳಿಸಿದರು.