ಕರ್ನಾಟಕ

karnataka

BSY: ಸರ್ಕಾರದ ವಿರುದ್ಧ ಹೆಚ್ ​​ಡಿ ಕುಮಾರಸ್ವಾಮಿ ಆರೋಪಗಳಿಗೆ ನಮ್ಮ ಬೆಂಬಲವಿದೆ: ಬಿ ಎಸ್​ ಯಡಿಯೂರಪ್ಪ

By

Published : Jul 4, 2023, 12:18 PM IST

Updated : Jul 4, 2023, 12:49 PM IST

ಸರ್ಕಾರದ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ನಮ್ಮ ಬೆಂಬಲವಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

bsy
ಯಡಿಯೂರಪ್ಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ. ಕುಮಾರಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಹೆಚ್​ಡಿಕೆ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ ಬಹಳ ಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ. ಸರಿಯಾದ ಮಾಹಿತಿ ಇಟ್ಟುಕೊಂಡೇ ಅವರು ಮಾತನಾಡುತ್ತಿದ್ದಾರೆ. ಹಾಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ಪರ ಬಿಎಸ್​ವೈ ಮಾತನಾಡಿದರು.

ಕಾಂಗ್ರೆಸ್​ನವರು ಕೊಟ್ಟ ಐದು ಭರವಸೆಗಳನ್ನು ಷರತ್ತಿಲ್ಲದೇ ಕಾರ್ಯರೂಪಕ್ಕೆ ತರಬೇಕು. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹಿ ಮಾಡಿ‌ಕೊಟ್ಟ ಗ್ಯಾರಂಟಿ ಜಾರಿ ಮಾಡಲಿ. ಇವತ್ತೊಂದೇ ದಿನ ಸಂಜೆ 5 ಗಂಟೆವರೆಗೂ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಲಿ. ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು. ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು ಎನ್ನುವ ವಿಚಾರ ಇರಿಸಿಕೊಂಡು ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಒಂದೇ ದಿನ ಹೋರಾಟ ನಡೆಸುತ್ತಿದ್ದು, ಬೇಡಿಕೆ ಈಡೇರದೆ ಇದ್ದರೆ ಮುಂದೆ ಬೇರೆ ರೀತಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಂದು ಅಥವಾ ನಾಳೆ ಪ್ರತಿಪಕ್ಷ ನಾಯಕನ ಆಯ್ಕೆ:ಇವತ್ತು ಶಾಸಕರೆಲ್ಲ ಬರುತ್ತಿದ್ದಾರೆ. ಅವರ ಜತೆ ಚರ್ಚೆ ಮಾಡಿ ಇವತ್ತು ಅಥವಾ ನಾಳೆ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದು ಯಡಿಯೂರಪ್ಪ ಇದೇ ವೇಳೇ ತಿಳಿಸಿದರು.

ಬಳಿಕ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಇವತ್ತು ಕೇಂದ್ರದಿಂದ ವೀಕ್ಷಕರು ಬರೋರಿದ್ದಾರೆ. ವೀಕ್ಷಕರು ಬಂದ ನಂತರ ಅಭಿಪ್ರಾಯ ಸಂಗ್ರಹ ಮಾಡ್ತಾರೆ. ಅಭಿಪ್ರಾಯ ಸಂಗ್ರಹಿಸಿ ಮತ್ತೆ ಕೇಂದ್ರದ ವರಿಷ್ಠರ ಜತೆ ಚರ್ಚೆ ಮಾಡಲಿದ್ದಾರೆ. ಒಂದೆರಡು ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ. ವರಿಷ್ಠರು ಇನ್ನೂ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ವೀಕ್ಷಕರು ಬಂದ ನಂತರ ನಾಯಕರ ಜತೆ ಚರ್ಚಿಸಿ ಸಭೆ ಕರೆಯಬಹುದು ಎಂದರು.

ಇದನ್ನೂ ಓದಿ:ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಒಬ್ಬ ಅಜಿತ್​ ಪವಾರ್​ ಹುಟ್ಟಿಕೊಳ್ಳಬಹುದು : ಕುಮಾರಸ್ವಾಮಿ ಭವಿಷ್ಯ

ಹೆಚ್​ಡಿಕೆ ದಾಖಲೆ ಕೊಟ್ಟು ಆರೋಪ ಮಾಡಲಿ:ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪದ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್​ ಸಿಡಿದೆದ್ದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಕಚೇರಿಯಲ್ಲೇ ವರ್ಗಾವಣೆ ದಂಧೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಯಾವ ದಂಧೆಯೂ ಇಲ್ಲ, ಯಾವುದು ನಡೀತಾ ಇಲ್ಲ. ಕುಮಾರಸ್ವಾಮಿ ದಾಖಲೆ ಕೊಟ್ಟು ಆರೋಪ ಮಾಡಲಿ. ಅವರ ಆರೋಪಗಳಿಗೆ ದಾಖಲೆ ಇದೇನಾ? ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ಕಂಪ್ಲೇಂಟ್ ಕೊಡಲಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಪ್ರತಿಭಟನೆ ಮೂಲಕ ಕಾಂಗ್ರೆಸ್ ಸರ್ಕಾರದ ಯೊಜನೆಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಒಳ್ಳೆಯದು, ಪ್ರತಿಭಟನೆ ಮಾಡಲಿ. ಜನರಿಗೆ ಮಾತು ಕೊಟ್ಟಂತೆ ಅದನ್ನು ಜಾರಿ ಮಾಡ್ತಿದ್ದೇವೆ. ಆದರೆ, ನಾವೇನು ಮಾಡಿದ್ದೇವೆ ಅಂತ ಪ್ರತಿಭಟನೆ ಮಾಡ್ತಿದ್ದಾರೆ ಅವರು. ಜನರು ಯಡಿಯೂರಪ್ಪ ಅವರಿಗೆ ರೆಸ್ಟ್ ಕೊಟ್ಟಿದ್ದಾರೆ. ಸದ್ಯ ಅವರು ರೆಸ್ಟ್ ಮಾಡಲಿ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಇದನ್ನೂ ಓದಿ:ರಾಜ್ಯಕ್ಕೆ ಬಾರದ ಹೈಕಮಾಂಡ್ ವೀಕ್ಷಕರು: ಬಿಜೆಪಿ ಶಾಸಕಾಂಗ ಸಭೆ ನಾಳೆಗೆ ಮುಂದೂಡಿಕೆ

Last Updated : Jul 4, 2023, 12:49 PM IST

ABOUT THE AUTHOR

...view details