ಕರ್ನಾಟಕ

karnataka

By

Published : Oct 17, 2020, 12:11 AM IST

ETV Bharat / state

ಲಂಚ ಸ್ವೀಕಾರ ಆರೋಪ: ಬಳ್ಳಾರಿ ಪಾಲಿಕೆ ಆಯುಕ್ತೆ ತುಷಾರಮಣಿ ಅಮಾನತು

ಲಂಚ ಸ್ವೀಕರಿಸುವ ಮೂಲಕ ಆಯುಕ್ತರ ಪದವಿಯ ಘನತೆಗೆ ಧಕ್ಕೆ ತಂದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

Bribery case; State govt suspend Ballari city corporation commissioner
ಸಾಂದರ್ಭಿಕ ಚಿತ್ರ

ಬೆಂಗಳೂರು:ಲಂಚ ಸ್ವೀಕರಿಸಿದ ಆರೋಪಕ್ಕೆ ಒಳಗಾದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿಯನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಫಾರಂ ನಂಬರ್ 3 ಕೊಡಲು ಅರ್ಜಿದಾರರಿಂದ ಅಂದಾಜು 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಇದೀಗ ಎಂ.ವಿ. ತುಷಾರಮಣಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಅ.9 ರಂದು ಭ್ರಷ್ಟಾಚಾರ ನಿಗ್ರಹ ದಳದ ದಾಳಿಯಲ್ಲಿ ಪಾಲಿಕೆ ಆಯುಕ್ತರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಎಸ್ ಪಾಟೀಲ್ ಮತ್ತು ಹೊರಗುತ್ತಿಗೆ ಅಟೆಂಡರ್‌ ಎಸ್.ಭಾಷರನ್ನು 50,000 ರೂ.‌ಲಂಚ ಪಡೆಯುವಾಗ ದಸ್ತಗಿರಿ ಮಾಡಲಾಗಿತ್ತು. ಇದೇ ವೇಳೆ ಬಳ್ಳಾರಿಯ ನವ ಕರ್ನಾಟಕ ಯುವಶಕ್ತಿ ಅಧ್ಯಕ್ಷರು ದೂರು ನೀಡಿದ್ದು, ಅದರಲ್ಲಿ ಫಾರಂ-3 ಪಡೆಯಲು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಎಂ.ವಿ.ತುಷಾರಮಣಿ ಲಂಚದ ಬೇಡಿಕೆ ಇಟ್ಟು ಲಂಚ ಸ್ವೀಕರಿಸಿ ಆಯುಕ್ತರ ಪದವಿಯ ಘನತೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಆದೇಶ ಪತ್ರ

ಜೊತೆಗೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ರೂ.5 ಲಕ್ಷ ಹಣದ ಬಗ್ಗೆ (ವಾಟ್ಸಪ್​ ಸಂದೇಶಗಳಲ್ಲಿ) ಮಾತುಕತೆ ನಡೆಸಿರುವ ಆಡಿಯೋ ಸಂಭಾಷಣೆ ಮತ್ತು ಹಣವನ್ನು ಪಡೆಯಲು ಆಯುಕ್ತರ ಅಧಿಕೃತ ಸರ್ಕಾರಿ ವಾಹನ ಬಳಸಿರುವುದು ಸಮಾಜಿಕ‌ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿನ್ನೆಲೆ, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾಗಿರುವ ಎಂ.ವಿ. ತುಷಾರಮಣಿ ವಿರುದ್ಧ ಬಳ್ಳಾರಿ ಜಿಲ್ಲೆ ಡಿಸಿ ನೀಡಿರುವ ವರದಿಯಲ್ಲಿ, ಆಯುಕ್ತೆ ಮೇಲಿನ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದನ್ನು ಮನಗಂಡಿರುವುದಾಗಿ ತಿಳಿಸಿದ್ದಾರೆ. ಡಿಸಿ ವರದಿ ಆಧಾರದಲ್ಲಿ ಎಂ.ವಿ. ತುಷಾರಮಣಿ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ಈ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details