ಬೆಂಗಳೂರು:ತನ್ನ ಸರ್ಕಾರಿ ಉದ್ಯೋಗಿ ಅಂಧ ಪತ್ನಿಗೆ ನ್ಯಾಯ ಕೊಡಿಸಿ ಎಂದು ಅಂಧ ಪತಿ ಸಿಎಂ ಮುಂದೆ ಜನಸ್ಪಂದನ ಕಾರ್ಯಕ್ರಮದಲ್ಲಿ ಮೊರೆ ಇಟ್ಟ ಘಟನೆ ನಡೆಯಿತು. ಸಮಸ್ಯೆ ಹೇಳುವಾಗ ಸಿಎಂ ಅವರನ್ನು ಅಂಕಲ್ ಅಂಕಲ್ ಎಂದು ಉಲ್ಲೇಖಿಸಿರುವುದು ನೆರೆದಿದ್ದವರ ಗಮನ ಸೆಳೆಯಿತು.
ಅಂಕಲ್ ನನ್ನ ಹೆಂಡತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಿಡಿಪಿಒ ಆಗಿದ್ದಾರೆ. ಅವರಿಗೆ ಮೇಲಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂಕಲ್. ಹೀಗೆ ಸಿಎಂ ಅವರನ್ನು ಅಂಕಲ್ ಅಂಕಲ್ ಎಂದು ಸಂಬೋಧಿಸುತ್ತ ಸಮಸ್ಯೆ ವಿವರಿಸಿದ್ದು, ಗ್ರಾಮೀಣ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿರುವ ಅಂಧ ವ್ಯಕ್ತಿ ಮಹೇಂದರ್ ಎಂಬುವರು. ಇವರ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯ ಕೂಡ ಬಹಳ ಸಹನೆಯಿಂದ ಕೇಳಿಸಿಕೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಕಿರುಕುಳ ಆರೋಪ: ''ನಮ್ಮ ಹೆಂಡತಿ ಜಯಲಕ್ಷ್ಮಿಗೆ ಕೂಡ ಕಣ್ಣು ಕಾಣಿಸಲ್ಲ. 2019 ರಿಂದ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅವಳಿಗೆ ಪ್ರಾಮಾಣಿಕ ಕೆಲಸ ಮಾಡಲು ಆಗಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು. ಪತ್ನಿಯು ಅಂಗನವಾಡಿಗೆ ಪೂರೈಸಲಾಗುತ್ತಿದ್ದ ಆಹಾರ ಜಪ್ತಿ ಮಾಡಿದ್ದರು. ಗುಣಮಟ್ಟದ ಆಹಾರ ಕೊಡಿ ಎಂದು ಹಾಸನ ಜಿಲ್ಲೆಯಲ್ಲಿ ಹೋರಾಟ ಮಾಡಲು ಪ್ರಾರಂಭಿಸಿದ್ದರು. ಇದರಿಂದ ಉದ್ದೇಶಪೂರ್ವಕವಾಗಿ ಅವರ ಮೇಲೆ ಎರಡು ಎಫ್ಐಆರ್ ಹಾಕಿ, ಎರಡು ಬಾರಿ ವರ್ಗಾವಣೆ ಮಾಡಲಾಗಿದೆ'' ಎಂದು ಆರೋಪಿಸಿದರು.