ಕರ್ನಾಟಕ

karnataka

By

Published : Jul 27, 2023, 4:38 PM IST

Updated : Jul 27, 2023, 4:59 PM IST

ETV Bharat / state

ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು

ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯಲು ಬಿಜೆಪಿಯವರನ್ನು ಕೇಳಬೇಕಾ? ಎಂದ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು : ಡಿ.ಜೆ ಹಳ್ಳಿ - ಕೆ.ಜಿ ಹಳ್ಳಿ ಗಲಭೆ ಹಾಗೂ ಉಡುಪಿ ಕಾಲೇಜು ಪ್ರಕರಣದ ಕುರಿತಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ನೀಡಿರುವ ಹೇಳಿಕೆ ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದಾಶಿವನಗರದ ಗೃಹಸಚಿವ ಜಿ. ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ 'ಪರಮೇಶ್ವರ್‌ ಅವರು ತಮ್ಮ ಮಾತು ಹಿಂಪಡೆಯಬೇಕು. ಕಾಂಗ್ರೆಸ್ ಸರ್ಕಾರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ಕಿರಾತಕರು, ಭಯೋತ್ಪಾದಕರಿಗೆ ಬೆಂಬಲ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುತ್ತೇವೆ' ಎಂದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.

ಬಳಿಕ ಮಾತನಾಡಿದ ಗೃಹಸಚಿವ ಜಿ ಪರಮೇಶ್ವರ್, ಡಿ.ಜೆ ಹಳ್ಳಿ - ಕೆ.ಜಿ ಹಳ್ಳಿ ಪ್ರಕರಣದ ಮರು‌ಪರಿಶೀಲನೆ ಕುರಿತು ಪ್ರತಿಕ್ರಿಯಿಸುತ್ತ, 'ಪ್ರಕರಣ ಹಿಂಪಡೆದಿರುವುದಾಗಿ ಹೇಳಿದ್ದು ಯಾರು?. ಅವರು ಹೇಳಿದ್ದೆಲ್ಲ ಕೇಳಿಕೊಂಡು‌ ಕೂರಲು ಸಾಧ್ಯವಿಲ್ಲ. ಯಾವುದೇ ಸಂಘ ಸಂಸ್ಥೆಗಳಾಗಬಹುದು. ವೈಯಕ್ತಿಕವಾಗಿ ಶಾಸಕರು, ಸಂಸದರು ಪತ್ರ ಕೊಟ್ಟಾಗ ಇದರಲ್ಲಿ ಬಹಳಷ್ಟು ಅಮಾಯಕರಿದ್ದಾರೆ, ಅವರ ಬಿಡುಗಡೆ ಆಗಬೇಕು ಎಂದು ಮನವಿ ಬಂದಾಗ ಏಕಾಏಕಿ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ. ಅದಕ್ಕೂ ಒಂದು ವಿಧಾನವಿದೆ. ಪ್ರಕರಣದ ಫೈಲ್ ತರಿಸಿ ನಂತರ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗುತ್ತೆ. ಅಲ್ಲಿ ನಿರ್ಧಾರವಾಗುತ್ತೆ. ನಾನೇ ಹಿಂದೆ ಗೃಹ ಸಚಿವನಾಗಿದ್ದಾಗ ಈ ರೀತಿ ಮಾಡಿದ್ದೇನೆ. ಬೊಮ್ಮಾಯಿ, ಆರಗ ಜ್ಞಾನೇಂದ್ರರೂ ಗೃಹ ಸಚಿವರಾಗಿದ್ದವರು. ಅವರಿಗೆ ಪ್ರಕ್ರಿಯೆ ಗೊತ್ತಿಲ್ವಾ.?' ಅರ್ಜಿ ಬಂದ ತಕ್ಷಣ ನಾವೇನೋ ತಪ್ಪು ಮಾಡಿದ್ದೇವೆ ಎಂದು ರಾಜ್ಯದಲ್ಲಿ ಬಿಂಬಿಸುತ್ತಿದ್ದಾರೆ. ಇದು ತಪ್ಪಲ್ವಾ? ಎಂದು ಪ್ರಶ್ನಿಸಿದರು.

ಉಡುಪಿ ಪ್ರಕರಣದಿಂದ ಪ್ರತಿಭಟನೆ ಎನ್ನುವ ಕುರಿತು ಮಾತನಾಡುತ್ತ 'ನಾನು ಮಕ್ಕಳಾಟ ಎಂದು ಹೇಳಿಲ್ಲ. ನಾನು, ನೀವು ಕಾಲೇಜು ಹೋಗಿದ್ದವರು. ಫ್ರೆಂಡ್ಸ್ ನಡುವೆ ಕೆಲ ಘಟನೆಗಳು ನಡೆಯುತ್ತವೆ. ಅದು ದೊಡ್ಡ ಪ್ರಮಾಣಕ್ಕೆ ಹೋಗುತ್ತಿರಲಿಲ್ಲ. ಇದೂ ಸಹ ಅಂಥದ್ದೇ ಘಟನೆ ಇರಬಹುದು ಎಂಬ ಅರ್ಥದಲ್ಲಿ ನಾನು‌ ಹೇಳಿದ್ದೇನೆ ವಿನಃ ಮಕ್ಕಳಾಟ ಎಂದು ಹೇಳಿಲ್ಲ. ಈ ವಿಚಾರವನ್ನು ಪ್ರಿನ್ಸಿಪಾಲ್‌ಗೆ ಬಿಡಬೇಕು. ಅವರು ಈಗಾಗಲೇ ಆ ವಿದ್ಯಾರ್ಥಿಗಳನ್ನ ಸಸ್ಪೆಂಡ್ ಮಾಡಿದ್ದಾರೆ. ದೊಡ್ಡ ಪ್ರಮಾಣದ ತಪ್ಪಾಗಿದೆ ಅಂತಾದರೆ ಪೋಷಕರನ್ನ ಕರೆಸಿ ಮಾತನಾಡುತ್ತಾರೆ. ದೂರು ಕೊಡುತ್ತಾರೆ. ಅದು ಕಾಲೇಜಿಗೆ ಸಂಬಂಧಿಸಿದ ವಿಚಾರ. ಆ್ಯಂಟಿ ರಾಗಿಂಗ್ ಕಮಿಟಿಯಿದೆ. ಅಲ್ಲಿ ಹ್ಯಾಂಡಲ್ ಮಾಡಬೇಕು' ಎಂದರು.

ಡಾ. ಜಿ ಪರಮೇಶ್ವರ್​ಗೆ ರವಿಕುಮಾರ್ ತಿರುಗೇಟು:ಜನತೆ ನಮಗೂ ಮತ ಹಾಕಿದ್ದಾರೆ. ನಾವು ಕೂಡ ನಾಡಿನ ಜನತೆಯ ಪ್ರತಿನಿಧಿಗಳು. ನಮಗೂ ಧ್ವನಿ ಇದೆ. ಜನತೆಯ ಪರವಾಗಿ ಪ್ರಶ್ನೆ ಮಾಡುವ ಹಕ್ಕಿದೆ. ಹಾಗಾಗಿ, ಪ್ರತಿಪಕ್ಷವಾದ ಬಿಜೆಪಿ ಹೇಳುವುದನ್ನೂ ಸರ್ಕಾರ ಕೇಳಬೇಕು ಎಂದು ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯಲು ಬಿಜೆಪಿಯವರನ್ನು ಕೇಳಬೇಕಾ? ಎಂದ ಗೃಹ ಸಚಿವ ಡಾ. ಜಿ ಪರಮೇಶ್ವರ್​ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಫ್ರೀಡಂ ಪಾರ್ಕ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು, ಬಿಜೆಪಿಯನ್ನು ಕೇಳಿ ನಾವು ನಿರ್ಧಾರ ತೆಗೆದುಕೊಳ್ಳಬೇಕಾ? ಎನ್ನುತ್ತಾರೆ. ಆದರೆ, ಬಿಜೆಪಿಗೆ ಜವಾಬ್ದಾರಿ ಇಲ್ಲವಾ?. ನಾವು ಪ್ರತಿಪಕ್ಷ ಹೌದೋ ಅಲ್ಲವೋ?. ಗೃಹ ಸಚಿವ ಪರಮೇಶ್ವರ್ ಹೇಳಲಿ. ನಮ್ಮ ಬಳಿ ಶಾಸಕರಿಲ್ಲವೇ? ಸಂಸದರಿಲ್ಲವೇ? ನಾವು ಸರ್ಕಾರ ನಡೆಸಿಲ್ಲವೇ? ನಮಗೆ ಜವಾಬ್ದಾರಿ ಇಲ್ಲವೇ? ಹಾಗಾದರೆ ನಾವು ಏನು? ನೀವು ಆಡಳಿತ ಪಕ್ಷದಲ್ಲಿ ಇದ್ದರೆ ಸಾಕೇ?. ಪ್ರತಿಪಕ್ಷ ಬೇಡವಾ? ಎಂದು ಖಾರವಾಗಿ ಪ್ರಶ್ನಿಸಿದರು.

ಬಿಜೆಪಿಗೆ ತನ್ನದೇ ಆದ ಜವಾಬ್ದಾರಿ ಇದೆ. ನಮ್ಮಲ್ಲೂ 66 ಶಾಸಕರಿದ್ದಾರೆ. 25 ಸಂಸದರಿದ್ದಾರೆ. 34 ಪರಿಷತ್ ಸದಸ್ಯರಿದ್ದಾರೆ. ನಿಮಗಿಂತ 18 ಲಕ್ಷ ಮತ ಕಡಿಮೆ ಪಡೆದಿದ್ದೇವೆ ಅಷ್ಟೆ. ಶೇ.36 ರಷ್ಟು ಮತವನ್ನು ನಾವೂ ಪಡೆದಿದ್ದೇವೆ. ಜನ ನಮ್ಮನ್ನೂ ಗುರುತಿಸಿದ್ದಾರೆ. ನಾವೂ ಕೂಡ ಜನತೆಯ ಪ್ರತಿನಿಧಿಗಳು. ನಮಗೂ ಧ್ವನಿ ಇದೆ. ನಾವು ಕೂಡ ನಾಡಿನ ಜನತೆಯ ಪ್ರತಿನಿಧಿಗಳು, ಹಾಗಾಗಿ ನಾವು ಹೇಳುವುದನ್ನು ನೀವೂ ಕೇಳಬೇಕು ಎಂದು ನಿಮ್ಮನ್ನು ಕೇಳಿ ಕೇಸ್ ವಾಪಸ್ ನಿರ್ಧಾರ ಮಾಡಬೇಕಾ? ಎನ್ನುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಟಕ್ಕರ್ ನೀಡಿದರು.

ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ: ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯಿರಿ ಎಂದು ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದು, ಅದಕ್ಕೆ ಗೃಹ ಸಚಿವರು ಸಕಾರಾತ್ಮಕ ಸ್ಪಂದನೆ ಮಾಡಿ ಕೇಸ್ ವಾಪಸ್​ಗೆ ಆರಂಭಿಕ ಹೆಜ್ಜೆ ಇಟ್ಟಿದ್ದಾರೆ. ಆದರೆ, ಆರೋಪಿಗಳು ಅಂದಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯನ್ನು ಸುಟ್ಟು ಹಾಕಿದ್ದರು. ಶಾಸಕರನ್ನು ಹತ್ಯೆ ಮಾಡಲು ಹೋಗಿದ್ದರು. ಇದು ಅಮಾಯಕತನವಾ? ರಾತ್ರಿ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದರು ಎಂದರೆ ಯಾರಾದರೂ ನಂಬುತ್ತಾರಾ? ಅಂದು ರಾತ್ರಿ ಇಡೀ ಪ್ರದೇಶವೇ ಭಯಕ್ಕೆ ಸಿಲುಕಿತ್ತು. ಅಂದು ರಾತ್ರಿ ತನಿಖೆ ವೇಳೆ ಏನೇನೋ ಸಿಕ್ಕಿದೆ. ಇದೆಲ್ಲಾ ಮಾಡುವ ಕೆಲಸವಾ?. ಒಂದು ವೇಳೆ ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಇಂದು ಉಡುಪಿ ಕಾಲೇಜಿನ ಪ್ರಕರಣದ ಬಗ್ಗೆ ಖಂಡಿಸಿ ಹೋರಾಟ ಮಾಡಿದ್ದೇವೆ. ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದೇ ಇದ್ದಲ್ಲಿ, ಗಲಭೆಕೋರರ ಕೇಸ್ ವಾಪಸ್ ಖಂಡಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.

ಇದನ್ನೂ ಓದಿ:G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್‌ ವಾಪಸ್: ಜಿ.ಪರಮೇಶ್ವರ್‌

Last Updated : Jul 27, 2023, 4:59 PM IST

ABOUT THE AUTHOR

...view details