ಬೆಂಗಳೂರು:ರಾಜ್ಯದಲ್ಲಿನ ಬಿಜೆಪಿಯ ಅನೈತಿಕ ಸರ್ಕಾರ, ಆರ್ಥಿಕ ಕುಸಿತ ಎಲ್ಲವನ್ನು ಜನ ನೋಡುತ್ತಿದ್ದಾರೆ. ಬಿಜೆಪಿಯವರು ಕೇವಲ ಭಾಷಣಕ್ಕೆ ಸೀಮಿತ ಆಗಿದ್ದು, 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಪರ ಗುಂಡೂರಾವ್ ಪ್ರಚಾರ ನಡೆಸಿದರು. ಬೋವಿಪಾಳ್ಯದ ಮನೆ, ಬೀದಿಗಳಗಳಲ್ಲಿ ಮತ ಪ್ರಚಾರ ನಡೆಸಿ ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ತೀವ್ರ ಪೈಪೋಟಿಯಲ್ಲಿದ್ದೇವೆ. ಉಪ ಚುನಾವಣೆಯ 15 ಕ್ಷೇತ್ರಗಳಲ್ಲಿಯೂ ಗೆಲುವಿಗೆ ಹೋರಾಟ ಮಾಡುತ್ತಿದ್ದೇವೆ ಎಂದರು.
ಮಹಾಲಕ್ಷ್ಮಿ ಲೇಔಟ್ನಲ್ಲಿ ದಿನೇಶ್ ಗುಂಡೂರಾವ್ ಪ್ರಚಾರ ಬಿಜೆಪಿಯವರಿಗೆ ಕಠಿಣ ಪ್ರತಿಸ್ಪರ್ಧೆ ಇಲ್ಲದೇ ಇದ್ದಿದ್ರೆ ಅವರು ಯಾಕ್ ಇಷ್ಟು ಪ್ರಚಾರ ಮಾಡ್ಬೇಕಿತ್ತು ಎಂದ ಗುಂಡೂರಾವ್, ಜಿ.ಪರಮೇಶ್ವರ್ ಅವರು ಅನಾರೋಗ್ಯ ಹಿನ್ನೆಲೆ ಪ್ರಚಾರಕ್ಕೆ ಬರುತ್ತಿಲ್ಲ. ಹೆಚ್.ಕೆ.ಪಾಟೀಲ್ ಹಿರೇಕೆರೂರಿನಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರದ ಉಸ್ತುವಾರಿ ವಹಿಸಿದ್ದು, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಮಾತನಾಡಿ, ದಿನೇಶ್ ಗುಂಡೂರಾವ್, ರೇವಣ್ಣ ಸೇರಿದಂತೆ ಅನೇಕರು ನನ್ನ ಜೊತೆ ಪ್ರಚಾರ ನಡೆಸುತ್ತಿದ್ದಾರೆ. ಅನರ್ಹರು ಮಾರಾಟ ಆಗಿದ್ದಾರೆ ಅಂತ ಜನರಿಗೆ ಗೊತ್ತಾಗಿದೆ. ಮೂರು ಬಾರಿ ಪಾಲಿಕೆ ಸದಸ್ಯನಾಗಿದ್ದು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಈ ಭಾಗಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇನೆ. ಪ್ರಜ್ಞಾವಂತ ಮತದಾರರು ಅನರ್ಹರಿಗೆ ತಕ್ಕ ಪಾಠ ಕಲಿಸ್ತಾರೆ ಎಂದರು.