ಕರ್ನಾಟಕ

karnataka

ಮೋಟಮ್ಮ ಆತ್ಮಕಥನದಲ್ಲಿ ಸಿದ್ದರಾಮಯ್ಯ ಖಳನಾಯಕ: ಬಿಜೆಪಿ ವ್ಯಂಗ್ಯ

By

Published : Jun 12, 2022, 7:14 PM IST

ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ಹೇಗೆ ದಲಿತ ವಿರೋಧಿಯಾಗಿ ಬೆಳೆದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಆತ್ಮಕಥೆಯಲ್ಲಿ ಕಂಬನಿ ಮಿಡಿದಿದ್ದಾರೆ. ಸಿದ್ದರಾಮಯ್ಯ ಅವರೇ, ಅಹಿಂದ ರಾಜಕಾರಣದಲ್ಲಿ ಈಗ ದಲಿತರನ್ನು ಹೊರಗಿಟ್ಟಿದ್ದೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.

bjp-tweet-against-siddaramaiah
ಮೋಟಮ್ಮ ಆತ್ಮಕಥನದಲ್ಲಿ ಸಿದ್ದರಾಮಯ್ಯ ಖಳನಾಯಕ: ಬಿಜೆಪಿ ವ್ಯಂಗ್ಯ

ಬೆಂಗಳೂರು:ನಿಮ್ಮ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ. ದಲಿತ ನಾಯಕ ಪರಮೇಶ್ವರ್ ಅವರನ್ನು ಕುತಂತ್ರದಿಂದ ಸೋಲಿಸಿದಿರಿ. ದಲಿತ ಶಾಸಕ ಅಖಂಡ ಮನೆ ಮೇಲೆ ದಾಳಿಯಾದಾಗ, ದಾಳಿ ಮಾಡಿದ ಮತಾಂಧರ ಪರವಾಗಿ ನಿಂತಿರಿ. ಈಗ ದಲಿತ ನಾಯಕಿ ಮೋಟಮ್ಮ ಅವರ ಆತ್ಮಕಥನದಲ್ಲಿ ಖಳನಾಯಕನಾಗಿದ್ದೀರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟೀಕಿಸಿದೆ.

ದಲಿತ ವಿರೋಧಿ ಸಿದ್ದರಾಮಯ್ಯ ಹ್ಯಾಷ್ ಟ್ಯಾಗ್​ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರು ಹುಟ್ಟು ನೀಡಿದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವಲ್ಲಿ ಮೋಟಮ್ಮ ಅವರ ಶ್ರಮ ಮಹತ್ವದ್ದು. ಅಂತಹ ಮೋಟಮ್ಮ ಅವರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡಿದೆ. ಇದು ದಲಿತ ಹಾಗೂ ಮಹಿಳಾ ಸಮುದಾಯಕ್ಕೆ ನೀವು ಮಾಡಿದ ಅವಮಾನ. ದಲಿತ ವರ್ಗದಿಂದ ಬಂದ ಮಹಿಳಾ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೆ, ಅವರನ್ನು ಮಂತ್ರಿ ಮಂಡಲದಲ್ಲಿ ತೆಗೆದುಕೊಳ್ಳದೆ, ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದರು. ದಲಿತರಿಗೆ ಅನ್ಯಾಯ ಮಾಡುವಾಗ ಸಿದ್ದರಾಮಯ್ಯ ಅವರ ಅಹಿಂದ ಮಂತ್ರ ಎಲ್ಲಿತ್ತು? ಎಂದು ಪ್ರಶ್ನಿಸಿದೆ.

ರಾಜಕೀಯವಾಗಿ ಮೋಟಮ್ಮ ಮೂಲೆಗುಂಪು: ಸಿದ್ದರಾಮಯ್ಯರಿಂದಾಗಿ ಕಾಂಗ್ರೆಸ್ ಹೇಗೆ ದಲಿತ ವಿರೋಧಿಯಾಗಿ ಬೆಳೆದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಆತ್ಮಕಥೆಯಲ್ಲಿ ಕಂಬನಿ ಮಿಡಿದಿದ್ದಾರೆ. ಸಿದ್ದರಾಮಯ್ಯ ಅವರೇ, ಅಹಿಂದ ರಾಜಕಾರಣದಲ್ಲಿ ಈಗ ದಲಿತರನ್ನು ಹೊರಗಿಟ್ಟಿದ್ದೀರಾ? ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಕಟ್ಟಾಳುವಾಗಿದ್ದ ಮೋಟಮ್ಮ ಅವರನ್ನು ಸಿದ್ದರಾಮಯ್ಯ ರಾಜಕೀಯವಾಗಿ ಮೂಲೆಗುಂಪು ಮಾಡಿದರು. ಮೋಟಮ್ಮ ಅವರನ್ನು ಸಚಿವರನ್ನಾಗಿ ಮಾಡುವ ಸಂದರ್ಭ ಬಂದಾಗ ವಿಧಾನಪರಿಷತ್ ಸದಸ್ಯರು ಎಂದು ಕಡೆಗಣಿಸಲಾಗಿತ್ತು. ಸಿದ್ದರಾಮಯ್ಯ ಈಗ ದಲಿತ ವಿರೋಧಿ ಸಿದ್ದರಾಮಯ್ಯ ಆಗಿ ಬದಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ದಲಿತ ದ್ರೋಹ:ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಮೋಟಮ್ಮ ಅವರು ಸಚಿವೆಯಾಗುವುದಕ್ಕೆ ಎಲ್ಲ ಅರ್ಹತೆ ಹೊಂದಿದ್ದರು. ಆದರೆ ಮೈಸೂರು "ಜಲದರ್ಶಿನಿ" ಬಳಗಕ್ಕೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಅರ್ಹ ಮೋಟಮ್ಮ ಅವರನ್ನು ಮೂಲೆಗುಂಪು ಮಾಡಿದರು. ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಸಿದ್ದರಾಮಯ್ಯ ಅವರ ಬಗ್ಗೆ ಮಾಡಿದ ವ್ಯಾಖ್ಯಾನಕ್ಕೆ ಮೋಟಮ್ಮ ಆತ್ಮಕಥನ ಇನ್ನಷ್ಟು ಪುಷ್ಠಿ ಒದಗಿಸಿದೆ. ಅಧಿಕಾರಕ್ಕಾಗಿ ನಾನೇ ದಲಿತ ಎಂದವರು, ರಾಜಕೀಯದುದ್ದಕ್ಕೂ ಮಾಡಿದ್ದು ದಲಿತ ದ್ರೋಹ ಎಂದು ಕುಟುಕಿದೆ.

ಸಿದ್ದರಾಮಯ್ಯ ಅವರ "ಅಹಿಂದ" ಹೋರಾಟ ಈಗ ಅಕ್ಷರಶಃ ಬೆತ್ತಲಾಗಿದೆ. ಅಹಿಂದದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಒಳ ಏಟು ಮಾತ್ರ! ಸಿದ್ದರಾಮಯ್ಯ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಕೊನೆಮೊದಲಿಲ್ಲದ ಪಟ್ಟಿಯೇ ಇದೆ. ಮಲ್ಲಿಕಾರ್ಜುನ‌ ಖರ್ಗೆ, ಡಾ.ಜಿ. ಪರಮೇಶ್ವರ್, ಮೋಟಮ್ಮ, ಶ್ರೀನಿವಾಸ್ ಪ್ರಸಾದ್, ಇನ್ನೆಷ್ಟು ದಲಿತರ ಬಲಿ ಪಡೆಯುತ್ತೀರಿ? ಎಂದು ಬಿಜೆಪಿಯು ಸಿದ್ದರಾಮಯ್ಯ ನಡೆಯನ್ನು ಟೀಕಿಸಿದೆ.

ಇದನ್ನೂ ಓದಿ:ಪರಿಷತ್ ಚುನಾವಣೆ: ಕ್ಲೀನ್ ಸ್ವೀಪ್​ನತ್ತ ಬಿಜೆಪಿ ಚಿತ್ತ

ABOUT THE AUTHOR

...view details