ಕರ್ನಾಟಕ

karnataka

ಸಿದ್ದರಾಮಯ್ಯರೇ, 'ದಲಿತ ನಾಯಕರೇ ಮುಂದಿನ ಸಿಎಂ' ಎಂದು ಘೋಷಿಸುವ ಧೈರ್ಯವಿದೆಯೇ?; ಬಿಜೆಪಿ ಪ್ರಶ್ನೆ

By

Published : Jun 7, 2022, 2:50 PM IST

ನಿಮ್ಮ ದಲಿತ ಪ್ರೀತಿ, ದಲಿತ ಪರ ವಾದ ಮತಗಟ್ಟೆಗೋ, ಅಧಿಕಾರದ ಕಟ್ಟೆಗೋ? ದಲಿತ ನಾಯಕರೇ ಮುಂದಿನ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ? ಡಿ.ಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬನ್ನಿ ನೋಡೋಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸವಾಲು ಹಾಕಿದೆ.

bjp tweet against Siddaramaiah
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್

ಬೆಂಗಳೂರು: ಸಿದ್ದರಾಮಯ್ಯನವರೇ, ನಿಮಗೆ ನಿಜಕ್ಕೂ ದಲಿತರ ಶ್ರೇಯೋಭಿವೃದ್ಧಿಯ ಬಗ್ಗೆ ಕಳಕಳಿ ಇದ್ದರೆ, ಈ ಬಾರಿ ಕಾಂಗ್ರೆಸ್ ಗೆದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಸವಾಲು ಹಾಕಿದೆ.

ಒಂದು ತೀರ್ಮಾನಕ್ಕೆ ಬನ್ನಿ:ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ನಿಮ್ಮ ದಲಿತ ಪ್ರೀತಿ, ದಲಿತ ಪರ ವಾದ ಮತಗಟ್ಟೆಗೋ, ಅಧಿಕಾರದ ಕಟ್ಟೆಗೋ? ದಲಿತ ನಾಯಕರೇ ಮುಂದಿನ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ? ಡಿ.ಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬನ್ನಿ ನೋಡೋಣ ಎಂದು ಸವಾಲು ಹಾಕಿದೆ.

ದಲಿತ ವಿರೋಧಿ ನೀತಿ:ದಲಿತ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವೇ ಇದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸ್ವಾತಂತ್ರ್ಯಪೂರ್ವದಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಸ್ವಾತಂತ್ರ್ಯ ನಂತರವೂ ಕಾಂಗ್ರೆಸ್ ದಲಿತ ವಿರೋಧಿ ನೀತಿಯನ್ನೇ ಮುಂದುವರಿಸಿದೆ. ಅಂಬೇಡ್ಕರ್ ಪ್ರಭಾವಳಿಯ ಮುಂದೆ ತಮ್ಮ ವರ್ಚಸ್ಸು ಕುಂದುತ್ತದೆ ಎಂಬ ಭಯ ನೆಹರು ಅವರಿಗೆ ಕಾಡುತ್ತಿತ್ತು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ರೂಪಿಸಿದರು. ಅಂಬೇಡ್ಕರ್ ಗತಿಸಿದಾಗ, ಅವರ ಶವಸಂಸ್ಕಾರಕ್ಕೂ ದಿಲ್ಲಿಯಲ್ಲಿ ಜಾಗ ಒದಗಿಸದೇ ಅವಮಾನಿಸಿದ್ದು ನಾವಲ್ಲ, ಕಾಂಗ್ರೆಸ್ ಎಂದು ಟೀಕಿಸಿದೆ.

ಭಯವೇ? ಕಾಂಗ್ರೆಸ್ ತನ್ನ ದಲಿತ ವಿರೋಧಿ ಅಸ್ತ್ರವನ್ನು ಮೊದಲು ಪ್ರಯೋಗ ಮಾಡಿದ್ದೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ. ಅಂಬೇಡ್ಕರ್ ಅವರನ್ನು ಸಂಚು ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಅದೇ ಕಾಂಗ್ರೆಸ್‌ ಈಗ ಅಂಬೇಡ್ಕರ್ ಜಪ ಮಾಡುತ್ತಿದೆ, ಚೋದ್ಯವಲ್ಲವೇ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲಾಯಿತು. ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವಿ.‌ ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿತು. ದಲಿತ ಸಮುದಾಯದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ‌ ಏಕೆ? ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗಲೆಲ್ಲ ಸಿದ್ದರಾಮಯ್ಯ ಜಾಗೃತರಾಗುತ್ತಿದ್ದಾರೆ, ತನ್ನ ಕನಸಿಗೆ ದಲಿತರು ಅಡ್ಡಬರುತ್ತಾರೆ ಎಂಬ ಭಯವೇ? ಎಂದು ಪ್ರಶ್ನಿಸಿದೆ.

ದಲಿತರ ಮೇಲೆ ದೌರ್ಜನ್ಯ:ನನಗಿಂತ ದೊಡ್ಡ ದಲಿತ ಯಾರಿದ್ದಾರೆ ಎಂಬ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಅವರು "ದಲಿತರನ್ನ ಎಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ" ಎಂಬ ಸಂದೇಶ ರವಾನಿಸಿದ್ದು ಸುಳ್ಳೇ?. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ವಿವರವಿದು: 358 ದಲಿತರು ಕೊಲ್ಲಲ್ಪಟ್ಟರು, 801 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾದರು, 9,081 ದಲಿತ ದೌರ್ಜನ್ಯದ ಪ್ರಕರಣ ನಡೆದಿತ್ತು. ಇಂತಹ ದಲಿತ ವಿರೋಧಿ ಕಾಂಗ್ರೆಸ್‌ ಈಗ ಸಂವಿಧಾನ ಶಿಲ್ಪಿಯ ಜಪ ಮಾಡುತ್ತಿರುವುದೇಕೆ? ಎಂದು ಕುಟುಕಿದೆ.

ಬರೀ ಮೌನ: ಜೆಡಿಎಸ್‌ನಿಂದ ವಲಸೆ ಬಂದಿರುವ ಸಿದ್ದರಾಮಯ್ಯ ಅವರೇ, ನಿಮಗೆ ದಲಿತರು ಏನು ಅನ್ಯಾಯ ಮಾಡಿದ್ದಾರೆ?. ದಲಿತ ನಾಯಕ ಖರ್ಗೆ ಅವರಿಗೆ ರಾಜಕೀಯ ಹಿನ್ನೆಡೆಯಾಗುವಂತೆ ಮಾಡಿದ್ರಿ. ಮುಖ್ಯಮಂತ್ರಿ ಪದವಿಯಿಂದ ಪರಮೇಶ್ವರ್‌ ಅವರನ್ನು‌ ದೂರ ಇಟ್ಟಿರಿ. ದಲಿತ ಶಾಸಕ ಅಖಂಡ ಅವರ ನೋವಿಗೆ ಸ್ಪಂದಿಸದೇ ನಿರ್ಲಕ್ಷಿಸಿದಿರಿ. ಕಾಂಗ್ರೆಸ್‌ ಪಕ್ಷ ದಲಿತರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತದೆ. ಅಧಿಕಾರಕ್ಕೆ ಬಂದರೆ ಬೆನ್ನಿನಿಂದಿಳಿದು, ತುಳಿಯುತ್ತದೆ. ದಲಿತ ಕಾಂಗ್ರೆಸ್ ಶಾಸಕ ಅಖಂಡಗೆ ಅನ್ಯಾಯವಾದಾಗಲೂ ಮೌನ, ದಲಿತ ಯುವಕರ ತಲೆ ಕಡಿದು ಕೊಂದಾಗಲೂ ಮೌನ ಎಂದು ಟೀಕಿಸಿದೆ.

ಇದನ್ನೂ ಓದಿ:ಕರ್ನಾಟಕದ ಸಾರ್ವಕಾಲಿಕ 'ಮುಖ್ಯಮಂತ್ರಿ' ಈಗ ಆಮ್​ ಆದ್ಮಿ.. AAP​ ಸೇರ್ಪಡೆಯಾದ ಹಿರಿಯ ನಟ ಚಂದ್ರು

ದಲಿತರಿಗಿಂತ ಮತಾಂಧರ ಮೇಲೇಕೆ ಹೆಚ್ಚಿನ ಪ್ರೀತಿ. ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜಿದ್ದಿಗೆ ಬಿದ್ದವರಂತೆ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಹಾಗಾದರೆ ಕಾಂಗ್ರೆಸ್‌ ಪಕ್ಷದಲ್ಲಿರುವ ದಲಿತರ ನಾಯಕರ ಪಾಡೇನು? ಎಂದು ಪ್ರಶ್ನಿಸಿದೆ.

ABOUT THE AUTHOR

...view details