ಕರ್ನಾಟಕ

karnataka

ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಗೋಹತ್ಯಾ ನಿಷೇಧ ಕಾಯ್ದೆ : ಮಾಜಿ ಸಚಿವ ಮಹಾದೇವಪ್ಪ

By

Published : Dec 13, 2020, 12:21 PM IST

ಸ್ವತಃ ಸ್ವಾಮಿ ವಿವೇಕಾನಂದರೇ ತಮ್ಮ ಪತ್ರವೊಂದರಲ್ಲಿ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನೇ ಅಲ್ಲವೆಂಬ ರೀತಿ ಹೇಳಿದ್ದಾರೆ. ಇದರ ಅರ್ಥ ದನದ ಮಾಂಸದ ಸೇವನೆಗೆ ಬ್ರಾಹ್ಮಣರಲ್ಲಿ ಎಷ್ಟು ಮಹತ್ವವಿತ್ತು ಎಂಬುದಾಗಿದೆ..

ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಟ್ವೀಟ್
ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಟ್ವೀಟ್

ಬೆಂಗಳೂರು : ಕೋಮುವಾದಿ ಬಿಜೆಪಿ ಪಕ್ಷ ರಾಜಕೀಯ ಲಾಭಕ್ಕಾಗಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರುತ್ತಿದೆ ಎಂದು ಮಾಜಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭಾರತ ದೇಶದಲ್ಲಿ ಇಸ್ಲಾಂ ಧರ್ಮ ಪ್ರವೇಶಿಸುವುದಕ್ಕೆ ಮುಂಚೆಯೇ ಹಿಂದೂಗಳು ದನದ ಮಾಂಸವನ್ನು ಭಕ್ಷಿಸುತ್ತಿದ್ದರು. ಈ ಬಗ್ಗೆ ನಮ್ಮ ವೇದ ಪುರಾಣಗಳಲ್ಲೇ ಹಲವಾರು ಉಲ್ಲೇಖಗಳಿವೆ. ಈಗಲೂ ಅವುಗಳನ್ನು ನಾವು ಕಾಣಬಹುದು ಮತ್ತು ಓದಬಹುದು ಎಂದಿದ್ದಾರೆ.

ಹಿಂದೊಮ್ಮೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ "ಹಸಿವು ಮತ್ತು ಶ್ರೇಷ್ಠ ಕತೆ" ಎಂಬ ಕತೆಯೊಂದರಲ್ಲಿ ವಿಶ್ವಾಮಿತ್ರರು ಮಾತನಾಡುತ್ತಾ "ತಿನ್ನುವುದೇ ಶ್ರೇಷ್ಠವಲ್ಲ, ಕನಿಷ್ಠವೂ ಅಲ್ಲ. ತಾಳಲಾರದ ಹಸಿವಾದಾಗ ನಾನೊಮ್ಮೆ ನಾಯಿಯನ್ನೇ ತಿಂದೆ" ಎಂದು ಹೇಳುತ್ತಾರೆ. ಇನ್ನು ವೇದಗಳ ಕಾಲದಲ್ಲಿ ಹಸುವಿನ ಕರುವನ್ನು, ಕುದುರೆಯನ್ನು ಹೋಮ ಹವನಗಳಿಗೆ ಬಳಸಿ ಸೇವಿಸುತ್ತಿದ್ದರೆಂಬ ವಿವರಗಳು ದಾಖಲಾಗಿವೆ.

ಸ್ವತಃ ಸ್ವಾಮಿ ವಿವೇಕಾನಂದರೇ ತಮ್ಮ ಪತ್ರವೊಂದರಲ್ಲಿ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನೇ ಅಲ್ಲವೆಂಬ ರೀತಿ ಹೇಳಿದ್ದಾರೆ. ಇದರ ಅರ್ಥ ದನದ ಮಾಂಸದ ಸೇವನೆಗೆ ಬ್ರಾಹ್ಮಣರಲ್ಲಿ ಎಷ್ಟು ಮಹತ್ವವಿತ್ತು ಎಂಬುದಾಗಿದೆ ಎಂದು ವಿವರಿಸಿದ್ದಾರೆ.

ಸಾಹಿತಿ ಎಸ್ ಎಲ್ ಭೈರಪ್ಪ ಅವರ ಪರ್ವ ಕಾದಂಬರಿಯಲ್ಲಿ ಅರ್ಜುನ, ಭೀಮ ಇವರೆಲ್ಲಾ ಬೇಟೆ ಆಡಿಕೊಂಡು ಬಂದು ಕೋಣದ ಮಾಂಸವನ್ನು ಊಟ ಮಾಡುವಾಗ, ಏನು ಇವತ್ತು ನಮ್ಮ ಅರಮನೆಗಿಂತ ಚೆನ್ನಾಗಿ ಅಡುಗೆ ಮಾಡಿದ್ದಾರೆ, ಯಾರು ಮಾಡಿದ್ದು ಎಂದವರು ಕೇಳುತ್ತಾರೆ. ಇದರ ಅರ್ಥವೇನು ಹಾಗಿದ್ದರೆ? ಎಂದು ಕೇಳಿದ್ದಾರೆ ಮಾಜಿ ಸಚಿವರು.

ಇದನ್ನು ಓದಿ:ಬಿಕ್ಕಟ್ಟು ನಿರ್ವಹಿಸುವುದು ಸದನದಲ್ಲಿ ರೋಮಾಂಚನದ ಚಿತ್ರ ನೋಡಿದಷ್ಟು ಸುಲಭವಲ್ಲ: ಕಾಂಗ್ರೆಸ್ ಲೇವಡಿ

4ನೇ ಶತಮಾನದ ನಂತರ ಭಾರತದಲ್ಲಿ ಬುದ್ಧನ ಪ್ರಭಾವದಿಂದಾಗಿ ಮಾಂಸಹಾರ ನಿಷೇಧವು ಹೆಚ್ಚು ಮುನ್ನಲೆಗೆ ಬಂತು. ಜನರನ್ನು ಹೆಚ್ಚು ಪ್ರೀತಿಯಿಂದ ಕಂಡು ಅವರಿಗಾಗಿಯೇ ಬದುಕನ್ನೇ ಸವೆಸಿ ಸಮಾನತೆಗೆ ತೊಡಕಾಗಿದ್ದ ದುಷ್ಟ ಜನರ ವಿರುದ್ಧ ಹೋರಾಟ ನಡೆಸಿದ್ದ ಬುದ್ಧನ ಮೇಲಿನ ಪ್ರೀತಿಯ ಕಾರಣಕ್ಕೆ ಬಹುತೇಕ ಎಲ್ಲ ಜನರು ಬುದ್ಧನನ್ನು ಬೆಂಬಲಿಸಿದರು.

ಆಗ ಅತ್ತ ಗೋಮಾಂಸ ಸೇವನೆಗೆ ಕಡಿವಾಣ ಬಿದ್ದು ಇತ್ತ ಜನರ ಬೆಂಬಲವೂ ಇಲ್ಲದ ಪರಿಸ್ಥಿತಿಗೆ ತಲುಪಿದ ಕೋಮುವಾದಿಗಳು ಕ್ರಮೇಣ ರಾಜಕೀಯ ಲಾಭದ ಉದ್ದೇಶಕ್ಕಾಗಿ ಗೋಮಾಂಸ ಭಕ್ಷಕರಿಂದ ಗೋ ರಕ್ಷಕರಾಗಿ ಬದಲಾದರು ಎಂದು ಹೇಳಿದ್ದಾರೆ.

ABOUT THE AUTHOR

...view details