ಕರ್ನಾಟಕ

karnataka

By

Published : Jul 4, 2023, 12:38 PM IST

Updated : Jul 4, 2023, 2:06 PM IST

ETV Bharat / state

BJP protest: ವಿಧಾನಸಭೆ, ಪರಿಷತ್ ಅಧಿವೇಶನ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರ ಪ್ರತಿಭಟನೆ

ಎರಡನೇ ದಿನ ಕಲಾಪ ಆರಂಭದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಬಿಜೆಪಿ ಅನುಮತಿ ಕೇಳಿದ್ದು, ನೀಡದ ಕಾರಣ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದೆ.

ಬಿಜೆಪಿ ಸದಸ್ಯರ ಪ್ರತಿಭಟನೆ
ಬಿಜೆಪಿ ಸದಸ್ಯರ ಪ್ರತಿಭಟನೆ

ಸದನದ ಬಾವಿಗಿಳಿದು ಬಿಜೆಪಿ ಸದಸ್ಯರ ಪ್ರತಿಭಟನೆ

ಬೆಂಗಳೂರು:ಚುನಾವಣಾ ಪೂರ್ವ ಜನತೆಗೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲ ವಿಚಾರವನ್ನು ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಇಂದು ಪ್ರಸ್ತಾಪ ಮಾಡಲು ಮುಂದಾಗಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದು ಕೋಲಾಹಲದ ವಾತಾವರಣ ಉಂಟಾಗಿತ್ತು. ಬಳಿಕ ಬಿಜೆಪಿ ಸದ್ಯರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಸದನದ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಮರುದಿನವೇ ವಿಧಾನಸಭೆ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಾರ್ಯಸೂಚಿಯಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡರಿಗೆ ಪ್ರಶ್ನೆ ಕೇಳಲು ಆಹ್ವಾನಿಸಿದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಏಕಾಏಕಿ ಎದ್ದುನಿಂತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸುನೀಲ್ ಕುಮಾರ್ ಸರ್ಕಾರ ನೀಡಿರುವ ಗ್ಯಾರಂಟಿಗಳ ವಿಚಾರದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ನಾವು ನಿಲುವಳಿ ಸೂಚನೆ ನೀಡಿದ್ದೇವೆ. ಇದಕ್ಕೆ ಪ್ರಸ್ತಾವಿಕವಾಗಿ ಮಾತನಾಡಲು ಅವಕಾಶ ನೀಡಬೇಕೆಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಈಗಾಗಲೇ ಪ್ರಶ್ನೋಿತ್ತರ ಕಲಾಪ ನಡೆಯುತ್ತಿದೆ. ಶಾಸಕರ ಪ್ರಶ್ನೆಗೆ ಗೃಹ ಸಚಿವರು ಉತ್ತರ ನೀಡುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಬರುವುದಿಲ್ಲ. ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಮುಗಿದ ನಂತರ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಬೊಮ್ಮಾಯಿ ಹಾಗೂ ಇತರ ಬಿಜೆಪಿ ಸದಸ್ಯರು, ಪ್ರಶ್ನೋತ್ತರ ಮುಂದೂಡಿ ರೂಲಿಂಗ್ ನೀಡುವ ಮೂಲಕ ನಿಲುವಳಿಗೆ ಪ್ರಸ್ತಾವಿಕವಾಗಿ ಮಾತನಾಡಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು.

ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸದಸ್ಯರು ಉತ್ಸಾಹದಲ್ಲಿದ್ದಾರೆ. ಅವರ ನುಡಿಮುತ್ತುಗಳನ್ನು ಕೇಳಲು ನಾವು ಸಹ ಕಾತರರಾಗಿದ್ದೇವೆ. ಐದು ಗ್ಯಾರಂಟಿಗಳನ್ನು ನೀಡಿರುವುದು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಕಳೆದ 45 ದಿನಗಳಿಂದ ಅವರು ಸಂಕಟ ಅನುಭವಿಸುತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಉಚಿತ, ನಿಶ್ಚಿತ, ಖಚಿತಗಳ ಬಗ್ಗೆ ಚರ್ಚೆ ಆಗಲೇಬೇಕು. ನಿಲುವಳಿಗೆ ಪೂರ್ವಭಾವಿಯಾಗಿ ಪ್ರಸ್ತಾಪ ಮಾಡಲು ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದರು. ಗದ್ದಲದ ನಡುವೆಯೇ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟಿಸ್ ಅನ್ನು ಓದಲಾರಂಭಿಸಿದರು. ನಿಯಮ 60 ರ ಮೇರೆಗೆ ನಿಲುವಳಿ ಸೂಚನೆಯಡಿ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ನಂತರ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಅವರೇ ಕೇಳಿದ್ದಾರೆ. ಪ್ರಶ್ನೋತ್ತರ ನಂತರ ಚರ್ಚೆ ಮಾಡಬಹುದಾಗಿದೆ. ಅದರ ಬದಲು ಮೊಂಡಾಟ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ , ಮೊಂಡಾಟ ಎಂಬ ಪದವನ್ನು ಆಡಿದ್ದು ಸಿದ್ದರಾಮಯ್ಯಅವರಿಗೆ ಶೋಭೆ ತರುವುದಿಲ್ಲ. ಈ ಪದವನ್ನು ಕಡತದಿಂದ ತೆಗೆಸಬೇಕೆಂದು ಒತ್ತಾಯಿಸಿದರು. ಇದೇ ಹಂತದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸಿದ್ದರಾಮಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ನಾನು ಐದು ವರ್ಷ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಪ್ರಶ್ನೋತ್ತರಕ್ಕೂ ಮುನ್ನ ನಿಲುವಳಿ ಸೂಚನೆ ಕುರಿತು ಚರ್ಚೆಗೆ ಹಿಂದಿನ ಸಭಾಧ್ಯಕ್ಷರು ಎಂದೂ ಕಾಲಾವಕಾಶ ಕೊಟ್ಟಿಲ್ಲ. ಆ ರೀತಿ ಏನಾದರೂ ಆಗಿರುವ ಒಂದು ನಿದರ್ಶನ ತೋರಿಸಲಿ, ನಾನು ಈ ಬಗ್ಗೆ ಮಾತನಾಡುವುದಿಲ್ಲ. ಹಿಂದಿನ ಸಭಾಧ್ಯಕ್ಷರು ನಾವು ಕೊಟ್ಟ ನಿಲುವಳಿ ಸೂಚನೆಗಳನ್ನು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆ ಎಂದು ಪ್ರತಿಪಕ್ಷದ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಸಿಎಂ ಯತ್ನಿಸಿದರು. ಪ್ರತಿಪಕ್ಷಗಳು ಎತ್ತುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧರಾಗಿದ್ದೇವೆ. ಹೆದರಿಕೊಂಡು ಹೋಗುವುದಿಲ್ಲ ಎಂದು ಹೇಳಿದರು.

ಬಳಿಕ ಬಸವರಾಜ ಬೊಮ್ಮಾಯಿ ಮಾತನಾಡಿ, ನಿಲುವಳಿಗೆ ಪೂರ್ವಭಾವಿ ಪ್ರಸ್ತಾಪಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಪೂರ್ಣಪ್ರಮಾಣದ ಚರ್ಚೆಗೆ ಪ್ರಶ್ನೋತ್ತರ ನಂತರವೇ ಸಭಾಧ್ಯಕ್ಷರು ಅವಕಾಶ ಕೊಡಲಿ, ಅದು ಅವರ ಪರಮಾಧಿಕಾರ ಎಂದರು. ಈ ನಡುವೆ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಕ್ರಿಯಾಲೋಪ ಎತ್ತಲು ಮುಂದಾದರು.

ಇದಕ್ಕೂ ಜಗ್ಗದ ಬಿಜೆಪಿ ಸದಸ್ಯರು, ಸಭಾಧ್ಯಕ್ಷ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಈ ನಡುವೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಎದ್ದು ನಿಂತು, ನಿಮಗೆ ಪ್ರತಿಪಕ್ಷದ ನಾಯಕರೇ ಇಲ್ಲವೆಂದು ಬಿಜೆಪಿ ವಿರುದ್ಧ ಮೂದಲಿಸಿದರು. ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಬಿಜೆಪಿ ಸದಸ್ಯರ ಧೋರಣೆಯನ್ನು ಆಕ್ಷೇಪಿಸಿ, ನಿಮ್ಮ ಅನುಚಿತ ವರ್ತನೆ ಸರಿಯಲ್ಲ. ರಾಜ್ಯದ ಜನ ನೋಡುತ್ತಿದ್ದಾರೆ. ನಿಮ್ಮ ನೋಟಿಸ್​​ನಲ್ಲೇ ಪ್ರಶ್ನೋತ್ತರ ನಂತರ ನಿಲುವಳಿ ಸೂಚನೆಗೆ ಅವಕಾಶ ಕೊಡಿ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ರೀತಿ ಧರಣಿ ಮಾಡುವುದು ಸರಿಯಲ್ಲ. ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಕಲಾಪ ನಿಯಮಾವಳಿ ಪ್ರಕಾರ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸ್ಪೀಕರ್ ಮನವಿಗೆ ಓಗೊಡದ ಬಿಜೆಪಿ ಸದಸ್ಯರು ಧರಣಿ ನಡೆಸಿ ಗದ್ದಲ ಎಬ್ಬಿಸಿದರು. ಇದರ ನಡುವೆಯೇ ಸಭಾಧ್ಯಕ್ಷರು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಕಲಾಪ ನುಂಗಿದ ಬಿಜೆಪಿ ಪ್ರತಿಭಟನೆ: ವಿಧಾನ ಪರಿಷತ್ ಕಲಾಪ ಮೂರನೇ ಸಾರಿ ಸಮಾವೇಶಗೊಂಡಾಗಲೂ ಬಿಜೆಪಿ ನಾಯಕರ ಗದ್ದಲ ಮುಂದುವರಿಯಿತು. ಬೆಳಗ್ಗೆ ಪರಿಷತ್​ನಲ್ಲಿ ಬಿಜೆಪಿ ನಾಯಕರು ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಪಟ್ಟು ಹಿಡಿದು ಗದ್ದಲ ನಡೆಸಿದ ಹಿನ್ನೆಲೆ ಕೆಲಕಾಲ ಕಲಾಪವನ್ನು ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್ ಮುಂದೂಡಿದ್ದರು. ಎರಡನೇ ಬಾರಿ ಸಮಾವೇಶಗೊಂಡಾಗಲೂ ವಿಧಾನ ಪರಿಷತ್ ಬಿಜೆಪಿ ನಾಯಕರ ಗದ್ದಲ ಮುಂದುವರಿದ ಹಿನ್ನೆಲೆ ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್ ಅವರು ಕಲಾಪವನ್ನು ಮಧ್ಯಾಹ್ನ 1 ಕ್ಕೆ ಮುಂದೂಡಿದ್ದರು.

ನಿಲ್ಲಿಸಿ ನಿಲ್ಲಿಸಿ ಮೋಸ ನಿಲ್ಲಿಸಿ ಎಂದು ಬಿಜೆಪಿ ನಾಯಕರು ಬಾವಿಯಲ್ಲಿದ್ದು ಗದ್ದಲ ಮುಂದುವರಿಸಿದರು. ದಯವಿಟ್ಟು ಕಲಾಪ ನಡೆಸಲು ಅವಕಾಶ ಮಾಡಿಕೊಡಿ ಎಂದು ಸಭಾಪತಿಗಳು ಮನವಿ ಮಾಡಿದರು. ಆದರೂ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದಾಗ ಅನಿವಾರ್ಯವಾಗಿ ಕಲಾಪವನ್ನು ಮುಂದೂಡಿದ್ದರು. ಮೂರನೇ ಬಾರಿ ಮಧ್ಯಾಹ್ನ ಒಂದು ಗಂಟೆಗೆ ಸಮಾವೇಶಗೊಂಡ ಕಲಾಪದಲ್ಲಿ ಬಿಜೆಪಿ ಸದಸ್ಯರು, ಈ ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿ ಈಗ ನಿಯಮಗಳನ್ನು, ಕಟ್ಟುಪಾಡುಗಳನ್ನು ವಿಧಿಸಲಾಗುತ್ತಿದೆ. ನಿರ್ಬಂಧ ಹೇರಲಾಗುತ್ತದೆ. ಈ ಸರ್ಕಾರ ಹೇಳಿದಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಕಲಾಪ ಸಹಜ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿ ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ನಿರಂತರವಾಗಿ ನಡೆದ ಬಿಜೆಪಿ ನಾಯಕರ ಪ್ರತಿಭಟನೆ ಅರ್ಧ ದಿನದ ಕಲಾಪವನ್ನು ನುಂಗಿ ಹಾಕಿತು. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹಲವು ಭಾಗ್ಯಗಳನ್ನು ಘೋಷಿಸಿ ಎಲ್ಲರಿಗೂ ಉಚಿತವಾಗಿ ನೀಡುವುದಾಗಿ ತಿಳಿಸಿತ್ತು. ಇದೇ ಭರವಸೆಯ ಮೇಲೆ ಜನ ಇವರನ್ನು ಅಧಿಕಾರಕ್ಕೆ ತಂದಿದ್ದು ಈಗ ನಿಯಮಾವಳಿಗಳನ್ನ ಅಳವಡಿಸುತ್ತಿದೆ. ಸರ್ಕಾರದ ಈ ಕ್ರಮ ಸರಿಯಲ್ಲ. ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿರುವಂತೆ ಎಲ್ಲವನ್ನು ಉಚಿತವಾಗಿ ನೀಡಬೇಕು ಮತ್ತು ಎಲ್ಲರಿಗೂ ಉಚಿತ ಭಾಗ್ಯದ ಅವಕಾಶ ಸಿಗಬೇಕು ಎಂದು ಒತ್ತಾಯಿಸಿದರು.

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಒತ್ತಡ ಹೇರಲು ಆರಂಭಿಸಿದ ಬಿಜೆಪಿ ನಾಯಕರು ನಂತರ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಸಭಾಪತಿ ಪೀಠದಲ್ಲಿದ್ದ ಎಂಕೆ ಪ್ರಾಣೇಶ್ ಅವರು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು ಫಲ ಕೊಡದ ಹಿನ್ನೆಲೆ ಕಲಾಪವನ್ನು ಅನಿವಾರ್ಯವಾಗಿ ಮುಂದೂಡಿದರು.

ಬಿಜೆಪಿ ಗದ್ದಲದ ಹಿನ್ನೆಲೆ ಬೆಳಗ್ಗಿನಿಂದ ಮೂರು ಸಾರಿ ಕಲಾಪವನ್ನು ಮುಂದೂಡಿದರು ಗದ್ದಲ ಶಮನವಾಗುವ ರೀತಿ ಕಾಣಿಸುತ್ತಿಲ್ಲ. ಮಧ್ಯಾಹ್ನದ ನಂತರವೂ ವಿಧಾನಪರಿಷತ್​​ನಲ್ಲಿ ಪ್ರತಿಭಟನೆ ಮುಂದುವರಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಎಲ್ಲರಿಗೂ ಉಚಿತ ಭಾಗ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಹುತೇಕ ಹಿಂದಿನ ಕಲಾಪವನ್ನೇ ನುಂಗಿ ಹಾಕುವ ಸಾಧ್ಯತೆ ಗೋಚರಿಸುತ್ತಿದೆ.

ಇದನ್ನು ಓದಿ:ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ: ಫ್ಲೈಓವರ್, ಸುರಂಗ ಮಾರ್ಗ ನಿರ್ಮಾಣಕ್ಕೆ ಚಿಂತನೆ

Last Updated : Jul 4, 2023, 2:06 PM IST

ABOUT THE AUTHOR

...view details