ಬೆಂಗಳೂರು : ಪಂಚ ಗ್ಯಾರಂಟಿಗಳಿಗೆ ಬಜೆಟ್ನಲ್ಲಿ ಅಗತ್ಯ ಅನುದಾನ ಇರಿಸಿದ್ದು, ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದೇನೆ. ಐದು ಗ್ಯಾರಂಟಿಗಳೂ ಜಾರಿಯಾಗಲಿದ್ದು, 1.30 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿವೆ. ಜನ ಸಂತೋಷದಿಂದ ಇದ್ದಾರೆ, ನಮ್ಮದು ನುಡಿದಂತೆ ನಡೆದ ಪಕ್ಷವಾದರೆ, ಬಿಜೆಪಿ ಜನರಿಗೆ ದ್ರೋಹ ಮಾಡಿದ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಗೈರಿನ ನಡುವೆ ಉತ್ತರಿಸಿದ ಸಿಎಂ, ಐದು ಗ್ಯಾರಂಟಿಗಳನ್ನ ಬಡವರಿಗಾಗಿ ಜಾರಿಗೆ ತಂದಿದ್ದೇವೆ. ಇವಕ್ಕೆಲ್ಲಾ 52,058 ಕೋಟಿ ವಾರ್ಷಿಕ ವೆಚ್ಚವಾಗಲಿದ್ದು, 35,419 ಕೋಟಿ ಈ ವರ್ಷ ಬೇಕಿದೆ. ಆನೇಕರು ಇದನ್ನು ಎಲ್ಲಿಂದ ತರಲಿದ್ದಾರೆ. ರಾಜ್ಯ ದಿವಾಳಿಯಾಗಲಿದೆ ಎನ್ನುತ್ತಿದ್ದಾರೆ. ತೆರಿಗೆ ಸೋರಿಕೆ ತಡೆದು ಅನೇಕ ಇಲಾಖೆಗೆ ತೆರಿಗೆ ಸಂಗ್ರಹ ಹೆಷ್ಚಳ ಮಾಡಿ ಗುರಿ ನೀಡಿದ್ದೇವೆ. ವಾಣಿಜ್ಯ 4 ಸಾವಿರ ಕೋಟಿ, ಅಬಕಾರಿ 36 ಸಾವಿರ ಕೋಟಿ, ಮುದ್ರಾಂಕದಿಂದ 6 ಸಾವಿರ ಕೋಟಿ, ಮೋಟಾರ್ ವಾಹನದಿಂದ 1 ಸಾವಿರ ಕೋಟಿ, ಗಣಿಗಾರಿಕೆಯಿಂದ 1500 ಕೋಟಿ,ಇತರ ಸಂಪನ್ಮೂಲಗಳಿಂದ 13,500 ಕೋಟಿ 8068 ಕೋಟಿ ಸಾಲದಿಂದ ಸೇರಿ ಒಟ್ಟು 36,653 ಕೋಟಿ ಹೆಚ್ಚುವರಿ ಸಂಗ್ರಹವಾಗಲಿದೆ. ಈ ಬಾರಿಯ ಗ್ಯಾರಂಟಿಗೆ ಬೇಕಾದ ಹಣದ ಕೊರತೆ ಭರಿಸಬಹುದಾಗಿದೆ ಎಂದರು.
ನಾವು ಯಾವಾಗಲೂ ನುಡಿದಂತೆ ನಡೆಯುವವರು, ಬಸವಾದಿ ಶರಣರಂತೆ ನುಡಿದಂತೆ ನಡೆದುಕೊಳ್ಳುತ್ತೇವೆ. 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆವು. 30 ಹೊಸ ಕಾರ್ಯಕ್ರಮ ಮಾಡಿದೆವು, ಬಿಜೆಪಿಯವರು 600 ಭರವಸೆ ನೀಡಿದರು ಅದರಲ್ಲಿ ಶೇ.10 ರಷ್ಟೂ ಈಡೇರಿಸಿಲ್ಲ. ಇವತ್ತು ರಾಜ್ಯದ ಜನ ತೀರ್ಮಾನ ಮಾಡಬೇಕು. ಯಾರು ನುಡಿದಂತೆ ನಡೆದಿದ್ದಾರೆ ಯಾರು ದ್ರೋಹ ಮಾಡಿದ್ದಾರೆ ಎಂದು, ಬಿಜೆಪಿ ಜನರಿಗೆ ದ್ರೋಹ ಮಾಡಿದ ಪಕ್ಷ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಮೂರು ಗ್ಯಾರಂಟಿ ಜಾರಿ : ಈಗಾಗಲೇ ಐದು ಗ್ಯಾರಂಟಿಗಳ ಪೈಕಿ ಮೂರು ಜಾರಿಯಾಗಿವೆ. ಶಕ್ತಿ ಯೋಜನೆಯಡಿ 23 ಕೋಟಿ ಮಹಿಳೆಯರು ಇಲ್ಲಿಯವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರವಾಸಿತಾಣ, ಧಾರ್ಮಿಕ ಸ್ಥಳ ಇತ್ಯಾದಿಗೆ ಜನ ಹೆಚ್ಚು ತೆರಳುತ್ತಿದ್ದು ವಹಿವಾಟು ಹೆಚ್ಚಾಗಿದೆ. ನಿಜವಾದ ಧಾರ್ಮಿಕ ಆಚರಣೆ ನಮ್ಮ ಕಾಲದಲ್ಲಿ ಆಗುತ್ತಿದೆ. ಇವರ ಕಾಲದಲ್ಲಿ ಜಾತ್ರೆಗಳಿಗೆ ಅವರು ಅಂಗಡಿ ಇಡಬಾರದು, ಇರುವ ಅಂಗಡಿ ಇಡಬಾರದು ಎಂದು ತಾರತಮ್ಯ ಮಾಡಿದ್ದರು. ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದು, ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನನಗೆ ನಮ್ಮ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಇದನ್ನು ಸಹಿಸದೆ ಹೊಟ್ಟೆ ಉರಿಯಿಂದ ಸದನದಿಂದ ಹೊರಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಗೃಹಜ್ಯೋತಿ ಯೋಜನೆ ಜುಲೈನಿಂದ ಶುರು ಮಾಡಿದ್ದು, ಆಗಸ್ಟ್ನಲ್ಲಿ ಬರುವ ಬಿಲ್ ನಿಂದ ಅನ್ವಯವಾಗಲಿದೆ. ಇದರಲ್ಲಿಯೂ ಬಿಜೆಪಿಯವರು ತಪ್ಪು ಹುಡುಕಲು ಹೊರಟಿದ್ದಾರೆ. ಎಲ್ಲರಿಗೂ 200 ಯೂನಿಟ್ ಕೊಡಿ ಎನ್ನುತ್ತಿದ್ದಾರೆ, ಹೇಗೆ ಕೊಡಲಾಗುತ್ತದೆ. ವಾರ್ಷಿಕ ಸರಾಸರಿ ಬಳಕೆಗೆ ತಕ್ಕಂತೆ ಶೇ.10 ಹೆಚ್ಚಿಸಿ ಕೊಡಲಾಗಿದೆ ಅದನ್ನೂ ಸಹಿಸುತ್ತಿಲ್ಲ. ಮೂರನೆಯ ಯೋಜನೆ ಅನ್ನ ಭಾಗ್ಯ ತಂದಿದ್ದೇವೆ. ಅದರಂತೆ ಕೇಂದ್ರದ ಐದು ಕೆಜಿ ಜೊತೆ ನಾವು ಐದು ಕೆಜಿ ಕೊಡಬೇಕಿದೆ. ಆದರೆ ಎಫ್ಸಿಐ ಅಕ್ಕಿ ಕೊಡುತ್ತೇವೆ ಎಂದು ನಂತರ ಕೊಡಲಾಗಲ್ಲ ಎಂದರು.
ಬೇರೆ ರಾಜ್ಯಗಳ ಬಳಿಯೂ ನಮಗೆ ಬೇಕಾದ ಪ್ರಮಾಣದ ಅಕ್ಕಿ ಲಭ್ಯವಿಲ್ಲ. ಕೇಂದ್ರದ ಏಜೆನ್ಸಿ ಮೂಲಕ ಪ್ರಯತ್ನ ನಡೆಸಿದರೂ ಅಕ್ಕಿ ಸಿಕ್ಕಿಲ್ಲ. ಹಾಗಾಗಿ ನಾವು ತಾತ್ಕಾಲಿಕ ವ್ಯವಸ್ಥೆಯಾಗಿ ಅಕ್ಕಿ ಸಿಗುವವರೆಗೂ ಪ್ರತಿ ಸದಸ್ಯನಿಗೆ 170 ರೂ.ಗಳ ಡಿಬಿಟಿ ಮೂಲಕ ಪಡಿತರದಾರರಿಗೆ ನೀಡುತ್ತಿದ್ದೇವೆ. ಇಲ್ಲಿಯವರೆಗೂ 57,51,000 ಕುಟುಂಬಗಳ 4.42 ಕೋಟಿ ಕುಟುಂಬಗಳಿಗೆ 137.08 ಕೋಟಿ ಹಣ ಹಾಕಿದ್ದೇವೆ. ಗೃಹಲಕ್ಷ್ಮಿಗೆ 34 ಸಾವಿರ ಕೋಟಿ ಬೇಕು,18 ಸಾವಿರ ಕೋಟಿ ಈ ಬಾರಿ ಬೇಕು. ಆಗಸ್ಟ್ನಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಐದನೇ ಗ್ಯಾರಂಟಿ ಯುವ ನಿಧಿಯಡಿ ಪದವೀಧರರಿಗೆ ಮೂರು ಸಾವಿರ, ಡಿಪ್ಲೊಮಾ ನಿರುದ್ಯೋಗಿಗಳಿಗೆ 1.5 ಸಾವಿರ ಕೊಡುತ್ತೇವೆ. ಕೆಲಸ ಸಿಕ್ಕ ತಕ್ಷಣ ನಿಲ್ಲಿಸುವ ಷರತ್ತಿನಲ್ಲಿ ಗ್ಯಾರಂಟಿ ಜಾರಿ ಮಾಡುತ್ತಿದ್ದೇವೆ. ಇದರಿಂದ ಜನ ಸಂತೋಷದಿಂದ ಇದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ವಿರೋಧ ಪಕ್ಷದಲ್ಲೇ ಇರಬೇಕು : ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ನರೇಂದ್ರ ಮೋದಿಯವರಿಗೆ ಸ್ಕಿಲ್ ಜಾಸ್ತಿ ಇದೆಯಲ್ಲ ಅದಕ್ಕೆ ಉದ್ಯೋಗ ಕೊಡಲಾಗಿಲ್ಲ. ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತದಂತೆ ನಾವು ಬಿಜೆಪಿ ಮುಕ್ತ ಎನ್ನಲ್ಲ. ಬಿಜೆಪಿ ಇರಬೇಕು ಆದರೆ ಯಾವತ್ತು ಅಧಿಕಾರಕ್ಕೆ ಬರಬಾರದು. ವಿರೋಧ ಪಕ್ಷದಲ್ಲೇ ಇರಬೇಕು. ಬೊಮ್ಮಾಯಿ ಧಮ್ಮು, ತಾಕತ್ತು ಎಂದಿದ್ದರು. ಅವರೆಲ್ಲಾ ಈಗ ಎಲ್ಲಿದ್ದಾರೆ ಈಗ ಅವರಲ್ಲಿ ಧಮ್ಮು ಇಲ್ಲ ತಾಕತ್ತು ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಗ್ಯಾರಂಟಿ ಜಾರಿಗೆ ತೊಂದರೆ ಇಲ್ಲ. ಬಜೆಟ್ನಲ್ಲಿ ಅನುದಾನ ಒದಗಿಸಿದ್ದೇನೆ. 2022 ರ ಬಜೆಟ್ಗೆ ಹೋಲಿಸಿದರೆ ಶೇ.23 ರಷ್ಟು ಬಜೆಟ್ ನ ಗಾತ್ರದಲ್ಲಿ ಹೆಚ್ಚಾಗಿದೆ. 62027 ಕೋಟಿ ಅವರ ಹಿಂದಿನ ಬಜೆಟ್ಗೂ ನಮ್ಮ ಬಜೆಟ್ ಗೂ ವ್ಯತ್ಯಾಸವಿದೆ. 2023 ರಲ್ಲಿ ಚುನಾವಣಾ ಬಜೆಟ್ ಮಂಡಿಸಿದ್ದರು. ಅದಕ್ಕೆ ಹೋಲಿಸಿದರೂ 18 ಸಾವಿರ ಹೆಚ್ಚು ಮೊತ್ತದ ಬಜೆಟ್ ಮಂಡಿಸಿದ್ದೇವೆ. ಆದರೆ, ಐದು ಗ್ಯಾರಂಟಿ ಕಾರಣಕ್ಕಾಗಿ ಕೊರತೆ ಬಜೆಟ್ ಮಂಡಿಸಬೇಕಾಯಿತು ಎಂದರು.