ಕರ್ನಾಟಕ

karnataka

ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರ.. ಧರಣಿ ಕೈಬಿಟ್ಟ ಬಿಜೆಪಿ ಸದಸ್ಯರು

By

Published : Jul 5, 2023, 12:46 PM IST

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರದ ಬಗ್ಗೆ ಸದನದಲ್ಲಿ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾವಕ್ಕಾಗಿ ನಡೆಸುತ್ತಿದ್ದ ಧರಣಿಯನ್ನು ಬಿಜೆಪಿ ವಾಪಸ್ ಪಡೆದಿದೆ.

bjp-mlas-withdraws-protest-on-congress-guarantee-scheme-in-session
ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರ : ಧರಣಿ ಕೈಬಿಟ್ಟ ಬಿಜೆಪಿ ಸದಸ್ಯರು

ಬೆಂಗಳೂರು :ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರದ ಬಗ್ಗೆ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾವಕ್ಕೆ ಅವಕಾಶ ನೀಡಬೇಕೆಂದು ನಿನ್ನೆಯಿಂದ ಆರಂಭಿಸಿದ್ದ ಧರಣಿಯನ್ನು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಇಂದು ವಾಪಸ್ ಪಡೆದರು. ಬುಧವಾರ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಸದಸ್ಯ ವಿ. ಸುನೀಲ್‍ಕುಮಾರ್ ಮಾತನಾಡಿ, ನಿನ್ನೆ ಬೆಳಗ್ಗೆಯಿಂದಲೇ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾವಕ್ಕೆ ಅವಕಾಶ ನೀಡುವಂತೆ ಕೋರುತ್ತಿದ್ದೇವೆ. ನಿನ್ನೆ ಇಡೀ ದಿನ ಹೋರಾಟ ಮಾಡಿದ್ದೇವೆ. ಆದರೂ ಅವಕಾಶ ಕೊಟ್ಟಿಲ್ಲ. ಇಂದು ಮತ್ತೆ ಹೊಸದಾಗಿ ನಿಲುವಳಿ ಸೂಚನೆ ನೋಟಿಸ್ ಕೊಟ್ಟಿದ್ದೇವೆ. ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಆಗ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ನಿನ್ನೆ ನೀವು ನೀಡಿದ ನಿಲುವಳಿ ಸೂಚನೆ ನೋಟಿಸ್ ನಿಯಾಮವಳಿ ಪ್ರಕಾರ ಇರಲಿಲ್ಲ. ಇಂದು ಕೊಟ್ಟಿರುವ ನಿಲುವಳಿ ಸೂಚನೆ ನೋಟಿಸ್ ನಿಯಾಮವಳಿ ಪ್ರಕಾರವಾಗಿದೆ. ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾವಕ್ಕೆ ಅವಕಾಶ ಮಾಡಿಕೊಡಲಾಗುವುದು. ಧರಣಿ ಕೈಬಿಟ್ಟು ಸುಗಮ ಕಲಾಪ ನಡೆಸಲು ಸಹಕರಿಸುವಂತೆ ಕೋರಿದರು. ಆಗ ಬಿಜೆಪಿ ಸದಸ್ಯರು ಜೈಕಾರ ಕೂಗುತ್ತಾ ಧರಣಿ ಕೈಬಿಟ್ಟು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.

ಪರಿಷತ್​ನಲ್ಲೂ ಧರಣಿ:ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಬೇಷರತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಸದನದ ಒಳಗೆ ಧರಣಿ ಮುಂದುವರೆಸಿದ ಹಿನ್ನೆಲೆಯಲ್ಲಿ ಬುಧವಾರ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಗದ್ದಲದ ಕಾರಣದಿಂದಾಗಿ 10 ನಿಮಿಷ ಮುಂದೂಡಿಕೆಯಾಯಿತು.

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಯಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಸದನದಲ್ಲಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ದಿನಕ್ಕೆ ಕೋಟಿಗಟ್ಟಲೆ ಹಣ ವ್ಯಯ ಎಂದು ಜನ ಮಾತನಾಡುತ್ತಿದ್ದಾರೆ. ಕಲಾಪ ನಡೆಯಲು ಅವಕಾಶ ಕಲ್ಪಿಸಿ, ಧರಣಿ ನಿಲ್ಲಿಸಿ. ನಿನ್ನೆ ಗದ್ದಲಕ್ಕೆ ಕಲಾಪ ಬಲಿಯಾಗಿದೆ ಇಂದಾದರೂ ನಡೆಸಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಟೀಕಿಸಿದ ಶಾಸಕ ಮರಿತಿಬ್ಬೇಗೌಡ :ನಂತರ ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ಕಲಾಪ ನಡೆಸಲು ಅವಕಾಶ ನೀಡಿ, ಧರಣಿ ಬಿಡಿ ಎಂದು ಮನವಿ ಮಾಡಿದರು. ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಹೊಸ ಸರ್ಕಾರ ಬಂದಿದೆ, ಜನ ನಿರೀಕ್ಷೆ ಇರಿಸಿಕೊಂಡಿದ್ದಾರೆ, ಜನರ ನಿರೀಕ್ಷೆ ಹುಸಿಯಾಗಬಾರದು, ಜನರಿಗೂ ಅನುಕೂಲವಾಗಬೇಕು, ಪ್ರತಿಪಕ್ಷ ನಾಯಕನ ನೇಮಕ ಮಾಡದವರು ಅದನ್ನು ಮುಚ್ಚಿಹಾಕಲು ಧರಣಿ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲಾಗದವರು ಜನರ ಪರ ಕೆಲಸ ಹೇಗೆ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಬಿದ್ದಿದೆ, ಇತಿಹಾಸದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಬಿದ್ದ ಉದಾಹರಣೆ ಇದೆಯಾ? ಸಿಎಂ ಎಷ್ಟು ಮುಖ್ಯವೋ ಶ್ಯಾಡೋ ಸಿಎಂ ಆದ ಪ್ರತಿಪಕ್ಷ ನಾಯಕನ ಸ್ಥಾನವೂ ಅಷ್ಟೇ ಮುಖ್ಯ ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಹೊಣೆಗಾರಿಕೆಯಿಂದ ಸಚಿವರು ಮಾತನಾಡಬೇಕಿತ್ತು. ಸಭಾಪತಿ ಮನವಿ ಮಾಡಿದಾಗ ನಾವು ನಮ್ಮ ಹೇಳಿಕೆ ನೀಡುವ ಮೊದಲೇ ಸಚಿವರು ಪ್ರತಿಪಕ್ಷ ಛೇಡಿಸುವ ಕೆಲಸ ಮಾಡಿದ್ದಾರೆ. ಗ್ಯಾರಂಟಿ ಚರ್ಚೆಗೆ ನಿಲುವಳಿ ಮಂಡಿಸಿದ್ದೆವು. ಚರ್ಚೆಗೆ ಬಾರದೆ ಕಾಂಗ್ರೆಸ್ ಸರ್ಕಾರ ಪಲಾಯನವಾದ ಮಾಡುತ್ತಿದೆ. ಜನರಿಗೆ ಮೋಸ ಮಾಡುತ್ತಿದೆ, ಹೊಣೆಗಾರಿಕೆ ಇಲ್ಲ, ಜವಾಬ್ದಾರಿ ಇಲ್ಲ ಎಂದು ತಿರುಗೇಟು ನೀಡಿದರು.

ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರ ವಾಗ್ವಾದ ನಡೆಯಿತು. ಸದನದಲ್ಲಿ ಗದ್ದಲ ಹೆಚ್ಚಾಗಿ ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು 10 ನಿಮಿಷ ಮುಂದೂಡಿದ್ದರು. ಬಳಿಕ ಪುನಃ ಕಲಾಪ ಆರಂಭಗೊಂಡಿದೆ.

ABOUT THE AUTHOR

...view details