ಕರ್ನಾಟಕ

karnataka

By

Published : Jul 16, 2019, 11:17 AM IST

Updated : Jul 16, 2019, 2:44 PM IST

ETV Bharat / state

ಬೇಗ್ ಪರ ನಿಂತ ಬಿಜೆಪಿ ಶಾಸಕರು: ಎಸ್‌ಐಟಿ ವಶಕ್ಕೆ ಖಂಡನೆ

ಶಾಸಕ ರೋಷನ್ ಬೇಗ್ ಅವರನ್ನು ಎಸ್.ಐ.ಟಿ ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ರಮಡಾ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಶಾಸಕರು.

ಸುದ್ದಿಗೋಷ್ಠಿ

ಬೆಂಗಳೂರು :ಎಸ್.ಐ.ಟಿ ವಿಚಾರಣೆ ನೆಪದಲ್ಲಿ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆಯುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.

ರಮಡ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಶಾಸಕರು

ಶಾಸಕ ರೋಷನ್ ಬೇಗ್ ಅವರನ್ನು ಎಸ್.ಐ.ಟಿ ವಶಕ್ಕೆ ಪಡೆದಿರುವ ಸಂಬಂಧ ರಮಡಾ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಸಿಎಂ ಎಸ್.ಐ.ಟಿಯನ್ನು ಬಳಸಿಕೊಂಡು ದುರುದ್ದೇಶದಿಂದ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನಾವು ಶಾಸಕರಿಗೆ ಅನ್ಯಾಯವಾದಾಗ ಧ್ವನಿಯೆತ್ತುತ್ತೇವೆ. ಸುಧಾಕರ್ ಮೇಲೆ ಹಲ್ಲೆಯಾದಗಲೂ ನಾವು ಅವರ ಪರವಾಗಿದ್ದೆವು, ಈಗಲೂ ಬೇಗ್ ಪರ ಇದ್ದೇವೆ ಎಂದರು.

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಹಿರಿಯ ಶಾಸಕರ ವಿರುದ್ಧ ಎಸ್.ಐ.ಟಿ. ಅಸ್ತ್ರ ಪ್ರಯೋಗಿಸಿರುವುದನ್ನು ಖಂಡಿಸುತ್ತೇವೆ. ಎಸ್.ಐ.ಟಿ. ಜುಲೈ 19ರಂದು ವಿಚಾರಣೆಗೆ ಹಾಜರಾಗಬೇಕೆಂದು ಮೊದಲೇ ನೋಟೀಸ್ ನೀಡಿದೆ. ಹಾಗಿದ್ದಾಗ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಅವಶ್ಯಕತೆ ಏನಿತ್ತು ಎಂಬುದನ್ನು ಸಿಎಂ ತಿಳಿಸಬೇಕು. ಎಸ್.ಐ.ಟಿ ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ವಿರೋಧವಿಲ್ಲ. ಇನ್ನು ಅವರ ರಾಜೀನಾಮೆ ಅಂಗೀಕರಿಸಿಲ್ಲ. ಅವರ ಹುಟ್ಟುಹಬ್ಬದ ನಿಮಿತ್ತ ಬೇರೆಡೆ ತೆರಳುವ ವೇಳೆ ವಶಕ್ಕೆ ಪಡೆದಿದ್ದಾರೆ. ಸ್ಪೀಕರ್ ಗಮನಕ್ಕೆ ತರದೆ ಎಸ್.ಐ.ಟಿ ವಶಕ್ಕೆ ಪಡೆದಿದೆ. ಈ ಮೂಲಕ ಶಾಸಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸ್ಪೀಕರ್ ಕೂಡಲೇ ರೋಷನ್ ಬೇಗ್ ರಕ್ಷಣೆಗೆ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.

ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಸನ್ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ಉಳಿಸಿಕೊಳ್ಳೋದಕ್ಕೆ ಶಾಸಕರ ಬಂಧಿಸುವ ಮೂಲಕ ವಾಮಾಮಾರ್ಗ ಅನುಸರಿಸುತ್ತಿದ್ದಾರೆ. ತನಿಖೆ ಮಾಡುವುದನ್ನು ತಪ್ಪು ಎಂದು ಹೇಳಲ್ಲ. ಆದರೆ ಎಸ್​ಐಟಿನ ಅಸ್ತ್ರವಾಗಿ ಮಾಡಿಕೊಂಡು ವಶಕ್ಕೆ ಪಡೆದಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಶಾಸಕ ರವಿ ಕುಮಾರ್ ಮಾತನಾಡಿ, ಗುರುವಾರ ಬಹುಮತ ಸಾಬೀತು ಪಡಿಸುವುದಕ್ಕೋಸ್ಕರ ಶಾಸಕರನ್ನ ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಈ ಮೂಲಕ ಕ್ರಿಮಿನಲ್ ತಂತ್ರ ಬಳಸುತ್ತಿದ್ದಾರೆ. ಸಿ.ಎಂ ನಾಡಿಗೆ ಮಾದರಿಯಾಗಿರಬೇಕು ಮನೆಗೆ ಹೋಗುವ ಸಂದರ್ಭದಲ್ಲಿ ಜನ ನಿಮಗೆ ಶಾಪ ಹಾಕಬಾರದು. ಜನತೆ ಹಾದಿ ಬೀದಿಲಿ ಛೀಮಾರಿ ಹಾಕ್ತಾ ಇದ್ದಾರೆ. ಇನ್ನು, ಎಚ್.ಡಿ.ರೇವಣ್ಣನವರು ದೇವಸ್ಥಾನ ಸುತ್ತುತ್ತಿದ್ದಾರೆ. ಅದು ರಾಜ್ಯಕ್ಕೆ ಒಳ್ಳೆದಾಗಲಿ ಅಂತಾ ಅಲ್ಲ, ಅಧಿಕಾರಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದೀರಿ. ವಾಮಾಚಾರ ನಿಮ್ಮನ್ನು ಅಧಿಕಾರದಲ್ಲಿ ಉಳಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಹಾಗೂ ಮುಖ್ಯಮಂತ್ರಿಗಳು ಬೇಸ್ ಲೆಸ್ ಟ್ವೀಟ್ ಮಾಡಿದ್ದಾರೆ. ನಾನು ಸಂತೋಷ್​ ಜೊತೆ ಮಾತಾಡಿದೆ ಅವರು ಅಲ್ಲಿ ಇರಲಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳೇ ಈಗಾಗಲೇ ಬಹುಮತ ಕಳೆದುಕೊಂಡಿದ್ದೀರಿ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಡಿ. ಶಾಸಕರ ರಕ್ಷಣೆಗೆ ಸ್ಪೀಕರ್ ಧಾವಿಸಬೇಕು ಮತ್ತು ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

Last Updated : Jul 16, 2019, 2:44 PM IST

For All Latest Updates

TAGGED:

ABOUT THE AUTHOR

...view details