ಕರ್ನಾಟಕ

karnataka

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಹೋಟೆಲ್​ನಿಂದ ನಿರ್ಗಮಿಸಿದ ಯತ್ನಾಳ್​, ಜಾರಕಿಹೊಳಿ

By ETV Bharat Karnataka Team

Published : Nov 17, 2023, 7:22 PM IST

Updated : Nov 17, 2023, 8:23 PM IST

BJP Legislative meeting: ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನವೇ ಹೋಟೆಲ್​ನಿಂದ ನಿರ್ಗಮಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಸಭೆ ಶುರುವಾದರೂ ವಾಪಸ್ಸಾಗಿಲ್ಲ.

BJP Legislative meeting
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಹೋಟೆಲ್​ನಿಂದ ನಿರ್ಗಮಿಸಿದ ಯತ್ನಾಳ್​, ಜಾರಕಿಹೊಳಿ

ಬೆಂಗಳೂರು: ಪ್ರತಿಪಕ್ಷ ನಾಯಕರ ಆಯ್ಕೆ ಹಿನ್ನೆಲೆ ಕರೆಯಲಾಗಿರುವ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಹೈಕಮಾಂಡ್​ನಿಂದ ಆಗಮಿಸಿರುವ ವೀಕ್ಷಕರು ಅಭಿಪ್ರಾಯ ಸಂಗ್ರಹ ಕಾರ್ಯ ನಡೆಸಲಿದ್ದಾರೆ. ನಂತರ ಹೈಕಮಾಂಡ್​ಗೆ ವರದಿ ಸಲ್ಲಿಸಲಿದ್ದು, ನಂತರ ಹೈಕಮಾಂಡ್​ನಿಂದ ಹೆಸರು ಪ್ರಕಟವಾಗಲಿದೆ.

ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಸಭೆ ಆರಂಭಕ್ಕೂ ಮುನ್ನ ಹೋಟೆಲ್​ಗೆ ಬಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅಲ್ಲಿಂದ ನಿರ್ಗಮಿಸಿದ್ದು, ಶಾಸಕಾಂಗ ಸಭೆ ಆರಂಭವಾದರೂ ಮತ್ತೆ ವಾಪಸ್​ ಆಗಿಲ್ಲ. ಮತ್ತೊಬ್ಬರು ಅಸಮಾಧಾನಿತ ಶಾಸಕ ಇನ್ನುಳಿದಂತೆ ದೆಹಲಿ ಪ್ರವಾಸದಲ್ಲಿರುವ ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೈರಾಗಿದ್ದು ಇತರ ನಾಯಕರು ಆಗಮಿಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಬಿಜೆಪಿ ನಾಯಕರು ಉಪಸ್ಥಿತರಿದ್ದಾರೆ.

ಸಭೆ ಕುರಿತು ಮಾಹಿತಿ ನೀಡಿದ ಆರ್.ಅಶೋಕ್, ಇಂದು ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಹೈಕಮಾಂಡ್​ನ ವೀಕ್ಷಕರಾಗಿ ಆಗಮಿಸಿರುವ ನಿರ್ಮಲಾ ಸೀತಾರಾಮನ್ ಮತ್ತು ದುಶ್ಯಂತ್ ಕುಮಾರ್ ಗೌತಮ್ ಶಾಸಕರ ಅಭಿಪ್ರಾಯ ಆಲಿಸಿ ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ದೂರವಾಣಿ ಮೂಲಕ ಸಲ್ಲಿಕೆ ಮಾಡಲಿದ್ದು, ನಡ್ಡಾ ಇಂದು ರಾತ್ರಿಯೇ ಹೆಸರು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಎಕ್ಸ್ ಪೋಸ್ಟ್​ನಲ್ಲಿ ಯತ್ನಾಳ್ ಟಾಂಗ್​:ಬಿಜೆಪಿ ಶಾಸಕಾಂಗ ಸಭೆಗೆ ಗೈರಾದ ಬೆನ್ನಲ್ಲೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಶಾಸಕ ಬಸವ ಗೌಡ ಪಾಟೀಲ್ ಯತ್ನಾಳ್, ''ನ ದೈನಂ, ನ ಪಲಾಯನಂ. ಒಬ್ಬ ಯೋಧ ಯಾವುದರ ಬಗ್ಗೆಯೂ ದೂರಲು ಅಥವಾ ವಿಷಾದಿಸಲು ಸಾಧ್ಯವಿಲ್ಲ. ಅವನ ಜೀವನವು ಅಂತ್ಯವಿಲ್ಲದ ಸವಾಲುಗಳಿಂದ ಕೂಡಿರುತ್ತದೆ. ಸವಾಲುಗಳು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಇರುವುದಿಲ್ಲ. ಸವಾಲೆಂದರೆ ಸವಾಲು'' ಎಂದು ಬರೆದುಕೊಂಡಿದ್ದಾರೆ.

ಅದಕ್ಕೂ ಮುನ್ನ, ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ಹೈಕಮಾಂಡ್ ಪ್ರತಿನಿಧಿಗಳಾಗಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಕುಮಾರ್ ಪಕ್ಷದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ:ಬ್ಲ್ಯಾಕ್​ಮೇಲ್ ಮಾಡುವವರಿಗೆ ನಾನು ಹೆದರಲ್ಲ - ವಿಜಯೇಂದ್ರ, ಬಿಎಸ್​​​ವೈ ಬಗ್ಗೆ ಮಾತಾಡಲ್ಲ: ಯತ್ನಾಳ್

Last Updated : Nov 17, 2023, 8:23 PM IST

ABOUT THE AUTHOR

...view details