ಕರ್ನಾಟಕ

karnataka

By

Published : Jul 22, 2021, 2:24 PM IST

ETV Bharat / state

CM ರಾಜೀನಾಮೆ ವದಂತಿಗೆ ಶಕ್ತಿ ಸೌಧದಲ್ಲಿ ಬಿಜೆಪಿ ನಾಯಕರು ಹೇಳಿದ್ದೇನು?

ಸಿಎಂ ರಾಜೀನಾಮೆ ವದಂತಿ ಬೆನ್ನಲೇ ಸಂಪುಟದ ನಾಯಕರು ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಇನ್ನು ವಿಧಾನಸೌಧಕ್ಕೆ ಆಗಮಿಸಿದ ಸಚಿವ ಕೆಎಸ್ ಈಶ್ವರಪ್ಪ ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದಾಗ ನೋ ಕಮೆಂಟ್ ಎಂದಷ್ಟೇ ಹೇಳಿ ಕೈಮುಗಿದು ತೆರಳಿದ್ದಾರೆ

bjp-leaders
ಶಕ್ತಿ ಸೌಧದಲ್ಲಿ ಬಿಜೆಪಿ ನಾಯಕರ ಪ್ರತಿಕ್ರಿಯೆ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಬಲವಾಗಿ ನಾವಿದ್ದೇವೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇವತ್ತು ಕ್ಯಾಬಿನೆಟ್ ಸಭೆ ಇದೆ. ನಾವೆಲ್ಲ ಸಿಎಂ ಜೊತೆ ಮಾತನಾಡುತ್ತೇವೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಹೈಕಮಾಂಡ್ ಭೇಟಿ ಮಾಡಲು ನಾವೆಲ್ಲ ಒಟ್ಟಾಗಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ನಾವೆಲ್ಲ ವಲಸಿಗರಲ್ಲ, ಬಿಜೆಪಿಯವರು. ಹೈಕಮಾಂಡ್ ‌ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧ. ಸದ್ಯ ಇಂದು ಸಂಜೆ ಕ್ಯಾಬಿನೆಟ್ ಸಭೆ ಇದೆ. ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತೇವೆ ಎಂದು ಹೇಳಿದರು.

ಗೊಂದಲ ಬೇಡ:ವಿಧಾನಸೌಧದಲ್ಲಿ ಮಾತನಾಡಿದ ರಾಜುಗೌಡ, ಸಿಎಂ ಭೇಟಿ ಮಾಡಿದ್ದೇವೆ. ಆ ಸಂದರ್ಭದಲ್ಲಿ ಬಿಎಸ್​ವೈ ಅವರು ನನಗೆ ಯಾವುದೇ ಸಂದೇಶ ಬಂದಿಲ್ಲ. ರಾಜೀನಾಮೆ ಕೇಳಿದರೆ ಕೊಡುವೆ. ಯಾರು ನನ್ನ ಪರ ಹೇಳಿಕೆ, ಪ್ರತಿಭಟನೆ ಮಾಡದಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು. ಇನ್ನು ಈ ಬಗ್ಗೆ ಗೊಂದಲ ಬೇಡ ಎಂದು ರಾಜುಗೌಡ ಹೇಳಿದ್ದಾರೆ.

ಸಿಎಂ ಹೇಳಿದ ಮೇಲೆ ಮುಗಿಯಿತು:ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಸಿಎಂ ಹೇಳಿದ ಮೇಲೆ ಮುಗಿಯಿತು. ನಮಗೇನು ಆತಂಕ ಇಲ್ಲ. ಹೈಕಮಾಂಡ್ ಹೇಳಿದಂತೆ ನಿಯಮ ಅನುಸರಿಸಬೇಕು ಎಂದು ಹೇಳಿದರು.

ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗುತ್ತೇನೆ:ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಉಮೇಶ ಕತ್ತಿ, ನಾನು ಸಹ ಎಂಟು ಸಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಡಿಯೂರಪ್ಪಗೆ ಸರಿಸಮಾನವಾದ ಅನುಭವ ನನಗೂ ಇದೆ.

ಅಲ್ಲದೇ ನಾನು ವಯಸ್ಸಿನಲ್ಲಿ ಚಿಕ್ಕವನಿದ್ದೇನೆ. ಮುಂದಿನ ಹದಿನೈದು ವರ್ಷ ರಾಜಕೀಯದಲ್ಲಿ ಇರುವ ಅವಕಾಶ ಇದ್ದು ನನಗೂ ಸಿಎಂ ಸ್ಥಾನ ಸಿಗುವ ನಿರೀಕ್ಷೆಯಿದೆ. ಎಲ್ಲರ ಬೆಂಬಲವೂ ಸಿಗಲಿದೆ. ಬೆಂಬಲ ಇರುವವರೇ ಮುಖ್ಯಮಂತ್ರಿ ಆಗಲು ಸಾಧ್ಯ. ಮುಖ್ಯಮಂತ್ರಿಗಳ ಮಠಮಾನ್ಯಗಳ ಹಾಗೂ ಪ್ರತಿಪಕ್ಷದ ನಾಯಕರುಗಳ ಸಹಕಾರ ಸಿಕ್ಕರೆ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ.

ವಿಧಾನಸೌಧಕ್ಕೆ ಆಗಮಿಸಿದ ಸಚಿವ ಕೆಎಸ್ ಈಶ್ವರಪ್ಪ ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದಾಗ ನೋ ಕಮೆಂಟ್ ಎಂದಷ್ಟೇ ಹೇಳಿ ಕೈಮುಗಿದು ತೆರಳಿದ್ದಾರೆ. ಇನ್ನು ವಿಧಾನಸೌಧ ಆವರಣಕ್ಕೆ ಆಗಮಿಸಿದ ಸಚಿವ ಆರ್ ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕೆಲ ಹೊತ್ತು ನಿಂತು ಅಲ್ಲಿಂದ ವಾಪಸ್ ತೆರಳಿದ್ದಾರೆ.

ABOUT THE AUTHOR

...view details