ಕರ್ನಾಟಕ

karnataka

ETV Bharat / state

ಬಿಜೆಪಿ ಹಿರಿಯರ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ; ಜೆಡಿಎಸ್ ಸಹಕಾರ ಪಡೆಯಲು ನಿರ್ಧಾರ - ಹಿರಿಯ ನಾಯಕರ ಸಭೆ

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ರಾಜ್ಯ ಬಿಜೆಪಿ ವರಿಷ್ಠರ ಸಭೆ ನಡೆಯಿತು.

ಬಿಜೆಪಿ ಹಿರಿಯ ನಾಯಕರ ಸಭೆ
ಬಿಜೆಪಿ ಹಿರಿಯ ನಾಯಕರ ಸಭೆ

By ETV Bharat Karnataka Team

Published : Dec 28, 2023, 4:43 PM IST

ಬೆಂಗಳೂರು: ಮುಂಬರುವ ಲೋಕಸಭೆ ಹಾಗು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹಾಗು ಬಿಜೆಪಿ ಒಟ್ಟಾಗಿ ಹೋಗಿ ರಾಜ್ಯದ ಎಲ್ಲಾ ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ನಿರ್ಧಾರವನ್ನು ರಾಜ್ಯ ಬಿಜೆಪಿ ವರಿಷ್ಠರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು. ಕೇಂದ್ರಿಯ ಸಂಸದೀಯ ಮಂಡಳಿ ಸದಸ್ಯರು ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂಗಳಾದ ಕೆ.ಎಸ್‌.ಈಶ್ವರಪ್ಪ, ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಸೇರಿ ಪ್ರಮುಖರು ಭಾಗಿಯಾಗಿದ್ದರು.

ಲೋಕಸಭಾ ಚುನಾವಣಾ ತಯಾರಿ, ಜೆಡಿಎಸ್ ಜೊತೆ ಸಮನ್ವಯತೆ ಸಾಧಿಸಿಕೊಂಡು ಮುಂದುವರೆಯುವುದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿರತ ಹೋರಾಟ ನಡೆಸಬೇಕು. ಜಿಲ್ಲಾ ಘಟಕಗಳನ್ನು ಸಂಪೂರ್ಣ ಸಕ್ರೀಯಗೊಳಿಸಿ ಚುನಾವಣೆ ಮುಗಿಯುವವರೆಗೂ ನಿರಂತರ ಚಟುವಟಿಕೆಯಿಂದ ಇರಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಿತು.

ಯತ್ನಾಳ್ ಮನವೊಲಿಕೆಗೆ ನಿರ್ಧಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪನವರ ವಿರುದ್ಧ ಮಾಡಿರುವ ಆರೋಪದ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಎಲ್ಲ ನಾಯಕರು ಒಕ್ಕೊರಲಿನಿಂದ ಯತ್ನಾಳ್ ಹೇಳಿಕೆಯನ್ನು ಖಂಡಿಸಿದರು. ಅವರು ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ, ಅದಕ್ಕೆ ಕಡಿವಾಣ ಹಾಕಬೇಕು. ಅಸಮಧಾನಿತ ಯತ್ನಾಳರನ್ನು ಹೈಕಮಾಂಡ್ ನಾಯಕರ ಮೂಲಕ ಮನವೊಲಿಕೆ ಮಾಡಬೇಕು ಎನ್ನುವ ನಿರ್ಧಾರವಾಯಿತು.

ಹಿರಿಯ ನಾಯಕ ಸೋಮಣ್ಣ ಮುನಿಸಿಕೊಂಡಿದ್ದರೂ ಪಕ್ಷ ತೊರೆಯುವ ವದಂತಿ ಇದೆ. ಎಸ್.ಟಿ.ಸೋಮಶೇಖರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರು ನಾಯಕರ ವಿಷಯ ಪ್ರಸ್ತಾಪವಾದರೂ ಹೆಚ್ಚು ಚರ್ಚೆ ಮಾಡಲಿಲ್ಲ ಎನ್ನಲಾಗಿದೆ. ಇನ್ನು ಲೋಕಸಭಾ ಚುನಾವಣೆವರೆಗೂ ನಿರಂತರವಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು, ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ಆರೋಪದ ಕುರಿತು ನಿರಂತರ ಹೋರಾಟ ನಡೆಸಿ ಜನಜಾಗೃತಿ ಮೂಡಿಸಬೇಕು, ಜಿಲ್ಲಾ ಮಟ್ಟದಲ್ಲಿಯೂ ಪ್ರಬಲ ಹೋರಾಟಗಳನ್ನು ಮಾಡಬೇಕೆಂದು ತೀರ್ಮಾನಿಸಲಾಗಿದೆ.

ಸದ್ಯ ಪಕ್ಷದ ಹಿರಿಯ ನಾಯಕರೆಲ್ಲಾ ಒಂದೊಂದು ತೀರದಲ್ಲಿದ್ದಾರೆ. ಅವರನ್ನೆಲ್ಲಾ ಒಂದೇ ಕಡೆ ಸೇರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಒಟ್ಟಾಗಿ ಮುನ್ನಡೆಯುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ ಎನ್ನಲಾಗಿದೆ. ಹಿರಿಯ ನಾಯಕರ ಸಭೆಯ ನಂತರ ಯಡಿಯೂರಪ್ಪ, ಸದಾನಂದ ಗೌಡ, ಗೋವಿಂದ ಕಾರಜೋಳ ಉಪಸ್ಥಿತಿಯಲ್ಲಿ ಸಭೆ ಕುರಿತು ವಿವರ ನೀಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ನಂತರ ಪ್ರಮುಖ ನಾಯಕರೊಂದಿಗೆ ವಿಶೇಷ ಸಭೆ ಕರೆದಿದ್ದರು. ಎಲ್ಲಾ ಪ್ರಮುಖ ನಾಯಕರು ಪಾಲ್ಗೊಂಡಿದ್ದರು ಎಂದರು.

ಇದನ್ನೂ ಓದಿ:ಅನಧಿಕೃತ ಬಡಾವಣೆ, ಕಟ್ಟಡ ನಿರ್ಮಿಸಿದರೆ ದುಪ್ಪಟ್ಟು ದಂಡ, ಜೈಲು ಶಿಕ್ಷೆಗೆ ಖಂಡ್ರೆ ಸಲಹೆ

ABOUT THE AUTHOR

...view details