ಬೆಂಗಳೂರು: ವಿದ್ಯಾ ವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಕೇಂದ್ರ ಸಚಿವರು, ಸಿಎಂ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.
ದೇಶ ಕಂಡ ಶ್ರೇಷ್ಠ ಬಹುಶ್ರುತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನವು ಆಘಾತ ತಂದಿದೆ. ಅವರ ಅಗಲಿಕೆಯು ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯ ಸೃಷ್ಟಿಸಿದೆ. ಅವರಿಗೆ ಸದ್ಗತಿ ಉಂಟಾಗಲಿ. ಭಗವಂತನು ಕುಟುಂಬಕ್ಕೆ, ಅನುಯಾಯಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸಂತಾಪ ಸೂಚಿಸಿದ್ದಾರೆ.
ಡಿಸಿಎಂ ಸಂತಾಪ: ವೇದ, ಪುರಾಣಗಳ ಕುರಿತ ಅವರ ಪ್ರವಚನಗಳು, ಕೃತಿಗಳು ಹಾಗೂ ಅಸಂಖ್ಯ ಬರಹಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದ್ದವು. ಪ್ರವಚನ, ಸಂಪಾದಿತ ಕೃತಿಗಳು, ಸಂಶೋಧನೆಗಳ ಮೂಲಕ ಗ್ರಂಥಗಳ ಮೂಲಕ ಶ್ರೀ ವೇದವ್ಯಾಸ, ಶ್ರೀಕೃಷ್ಣ, ಮಧ್ವರನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನ ಡಾ. ಬನ್ನಂಜೆ ಗೋವಿಂದಾಚಾರ್ಯರು ಶ್ರೀಹರಿಯ ಪಾದವನ್ನು ಸೇರಿದ್ದಾರೆ. ಅವರ ನಿಧನದಿಂದ ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.