ಕರ್ನಾಟಕ

karnataka

By

Published : Apr 15, 2023, 4:14 PM IST

ETV Bharat / state

ಬಿಜೆಪಿ ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡ್ತಿದೆ : ಎಂ.ಬಿ. ಪಾಟೀಲ್

ಬಿಜೆಪಿ ಹೈಕಮಾಂಡ್​ ಲಿಂಗಾಯತ ನಾಯಕರನ್ನು ಮತ್ತು ಸಮುದಾಯವನ್ನು ಮೂಲೆಗುಂಪು ಮಾಡುತ್ತಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್​ ಹೇಳಿದ್ದಾರೆ.

bjp-high-command-targeting-lingayat-leaders-says-mb-patil
ಬಿಜೆಪಿ ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡ್ತಿದೆ : ಎಂ.ಬಿ.ಪಾಟೀಲ್

ಬೆಂಗಳೂರು: ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯವನ್ನು ಮೂಲೆಗುಂಪು ಮಾಡುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಸತ್ಯ ಅನ್ನಿಸುತ್ತದೆ. ಲಿಂಗಾಯತ ಸಮುದಾಯ ಬಿಟ್ಟು ಬೇರೆ ಸಮುದಾಯಕ್ಕೆ ಮನ್ನಣೆ ಕೊಡಲು ಬಿಜೆಪಿ ತಯಾರಿ ನಡೆಸುತ್ತಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕ ಯಡಿಯೂರಪ್ಪ ಯಾಕೆ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಯಾಕೆ ಅವರನ್ನು ಸೈಡ್‌ ಲೈನ್ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಬಸವರಾಜ ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಲಿಂಗಾಯತ ಸಮುದಾಯದವನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿದೆ. ಬಿಜೆಪಿ ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಈಗ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಇಳಿಸಿ ಬೇರೆಯವರನ್ನು ಸಿಎಂ ಮಾಡಲು ಹೊರಟಿದ್ದರು. ಆದರೆ ಬ್ಯಾಕ್ ಫೈರ್ ಆಗುತ್ತದೆ ಎಂಬ ಕಾರಣಕ್ಕೆ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಈ ಹಿಂದೆ ಕುಮಾರಸ್ವಾಮಿ ಒಂದು ಹೇಳಿಕೆ ಕೊಟ್ಟಿದ್ದರು. ಇದನ್ನು ನೋಡ್ತಿದ್ರೆ ಅದು ನಿಜ ಅನ್ನಿಸುತ್ತದೆ. ಆ ಹೇಳಿಕೆ ಏನು ಅನ್ನೋದನ್ನು ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.

ಲಕ್ಷ್ಮಣ್​ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ಸವದಿ ಅವರ ಬಗ್ಗೆ ರಮೇಶ್ ಜಾರಕಿಹೊಳಿ ಹಾಗೆ ಮಾತನಾಡಬಾರದು. ಅವರ ಮೇಲೆ ಅವರೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಿದ್ದಾರೆ. ಅವರ ಹೇಳಿಕೆಯಿಂದ ಅವರಿಗೆ ನಷ್ಟ ಉಂಟಾಗಲಿದೆ ಎಂದು ತಿರುಗೇಟು ನೀಡಿದರು.

ಲಕ್ಷ್ಮಣ್ ಸವದಿ ಲಿಂಗಾಯತ ಗಾಣಿಗ ಸಮಾಜದ ಹಿರಿಯ ನಾಯಕರು. ಬಾಗಲಕೋಟೆ, ಕಲಬುರಗಿ, ಕೊಪ್ಪಳ ಸೇರಿ ಹತ್ತನ್ನೆರಡು ಕ್ಷೇತ್ರಗಳಲ್ಲಿ ಜ‌ನ ಇದ್ದಾರೆ. ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು. ಡಿಸಿಎಂ ಮಾಡಿ ಹೇಳದೇ ಕೇಳದೇ ತೆಗೆದು ಹಾಕಿದರು. ಟಿಕೆಟ್ ಕೊಡ್ತೀವಿ ಎಂದು ಹೇಳಿ ಅನ್ಯಾಯ ಮಾಡಿದರು. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್​ಗೆ ಇದರಿಂದ ಹೊಸ ಶಕ್ತಿ ಬಂದಿದೆ. ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಿದರು. ನಾಳೆ ಕೋಲಾರದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ಇದೆ. ಸೋಮವಾರ ಬಾಲ್ಕಿ, ಹುಮ್ನಾಬಾದ್ ಭಾಗದಲ್ಲಿ ನಡೆಯುವ ಸಮಾವೇಶದಲ್ಲಿ ರಾಹುಲ್​ ಗಾಂಧಿ ಭಾಗಿಯಾಗುತ್ತಾರೆ ಎಂದರು.

ಡಿಕೆಶಿ ನಿವಾಸದ ಬಳಿ ಪ್ರತಿಭಟನೆ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಸದಾಶಿವನಗರದ ಡಿ.ಕೆ. ಶಿವಕುಮಾರ್ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ವಿನಯ್ ಕುಲಕರ್ಣಿಗೆ ಟಿಕೆಟ್ ಕೊಡುವಂತೆ ಅವರ ಪರ ಶಿಗ್ಗಾಂವಿ ಕಾರ್ಯಕರ್ತರು ಘೋಷಣೆ ಕೂಗಿದರು.

ಈ ವೇಳೆ ಮಲ್ಲಪ್ಪ ಜಗ್ಗಿ ಎಂಬವರು ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕಬೇಕು. ವಿನಯ್ ಕುಲಕರ್ಣಿ ಅವರೇ ಪ್ರಬಲ ಅಭ್ಯರ್ಥಿ. ನಮ್ಮ ಖಾದ್ರಿ ಅವರು ಸಹ ಮೂರು ಬಾರಿ ಸ್ಪರ್ಧೆ ಮಾಡಿ ಟಫ್ ಫೈಟ್ ಕೊಟ್ಟಿದ್ದಾರೆ. ಈ ಬಾರಿ ಅವರು ಸಹ ಕುಲಕರ್ಣಿಗೆ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದ್ದಾರೆ. ಕುಲಕರ್ಣಿ ಅವರೇ ಅಭ್ಯರ್ಥಿ ಆಗಬೇಕು. ಇಲ್ಲದಿದ್ದರೆ ನಾವು ನೋಟಾ ಮಾಡ್ತೀವಿ. ನಾವು ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ :ಸಿದ್ದರಾಮಯ್ಯ ಮನವೊಲಿಸಿದ ಹೈಕಮಾಂಡ್​; ಕೋಲಾರ ಕ್ಷೇತ್ರದಿಂದ ಕೊತ್ತೂರು ಮಂಜುನಾಥ್ ಕಣಕ್ಕೆ

ABOUT THE AUTHOR

...view details