ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರಕ್ಕೆ ಮರು ಜೀವ ಸಿಕ್ಕಿದ್ದು ಹೇಗೆ? ಬಿಜೆಪಿ ಹೈಕಮಾಂಡ್ ಬಿಎಸ್‌ವೈಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದೇಕೆ? - bjp high command

ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೆ ಕಾಯುತ್ತಾ ಕುಳಿತರೆ ಬಿಜೆಪಿ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಭಾವಿಸಿದ ಹೈಕಮಾಂಡ್ ತಕ್ಷಣವೇ ಸರ್ಕಾರ ರಚಿಸುವಂತೆ ಯಡಿಯೂರಪ್ಪ ಅವರಿಗೆ ನಿನ್ನೆ ಬೆಳಗ್ಗೆ ಸಂದೇಶ ರವಾನಿಸಿತ್ತು.

ಬಿಜೆಪಿ ಹೈಕಮಾಂಡ್

By

Published : Jul 27, 2019, 8:45 PM IST

ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನವಾದರೂ ಕಾಂಗ್ರೆಸ್ ನೇತೃತ್ವದಲ್ಲಿ ಅದಕ್ಕೆ ಮರುಜೀವ ಕೊಡುವ ಪ್ರಯತ್ನ ಶುರುವಾಗುತ್ತಿದ್ದಂತೆಯೇ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿಎಂ ಆಗಲು ಗ್ರೀನ್ ಸಿಗ್ನಲ್ ನೀಡಿ ದೋಸ್ತಿ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ.

ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೆ ಸರ್ಕಾರ ರಚಿಸುವುದು ಬೇಡ ಎಂಬ ಲೆಕ್ಕಾಚಾರದಲ್ಲಿದ್ದ ಹೈಕಮಾಂಡ್, ಒಂದು ವೇಳೆ ಬಹುಮತ ಸಾಬೀತುಪಡಿಸುವ ವೇಳೆ ಹೆಚ್ಚುಕಡಿಮೆ ಆದರೆ ಏನು ಮಾಡಬೇಕು? ಎಂದು ಯೋಚಿಸಿತ್ತು. ಇದೇ ಕಾರಣಕ್ಕಾಗಿ ಬುಧವಾರ ಮತ್ತು ಗುರುವಾರವೂ ಕೂಡಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸದಂತೆ ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ.

ಇದೇ ಕಾರಣಕ್ಕಾಗಿ ರಾಜ್ಯ ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ದೆಹಲಿಯಲ್ಲಿ ಬೀಡುಬಿಟ್ಟು, ಪಕ್ಷದ ವರಿಷ್ಠರೊಂದಿಗೆ ನಿರಂತರ ಮಾತುಕತೆಯಲ್ಲಿ ತಲ್ಲೀನವಾಗಿತ್ತು. ಆದರೆ ಈ ಬೆಳವಣಿಗೆಯ ನಡುವೆಯೇ ರಾಮಲಿಂಗಾ ರೆಡ್ಡಿ ಮೂಲಕ ಅತೃಪ್ತ ಶಾಸಕರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಗಾಳ ಹಾಕಿಸಿದ್ದಲ್ಲದೇ, ಏಳು ಮಂದಿ ಶಾಸಕರು ಪಕ್ಷಕ್ಕೆ ವಾಪಸ್ ಬರಲು ಒಪ್ಪಿಗೆಯನ್ನೂ ನೀಡಿದ್ದರು ಎನ್ನಲಾಗಿದೆ.

ಹೀಗೆ ಹಲವು ಶಾಸಕರು ವಾಪಸ್ ಬಂದ ನಂತರ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿಕೂಟ ಸರ್ಕಾರ ರಚನೆಯಾಗಲು ಕುಮಾರಸ್ವಾಮಿ ಸಹಮತ ನೀಡಿದ್ದರಿಂದ ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ್ ಸಿಎಂ ಹುದ್ದೆಗೇರಲು ಬಿರುಸಿನ ಲಾಬಿ ಆರಂಭಿಸಿದ್ದರು ಎನ್ನಲಾಗಿದೆ. ಈ ಪೈಕಿ ಡಿ.ಕೆ.ಶಿವಕುಮಾರ್ ನಿನ್ನೆ ಸಂಜೆ ತುರ್ತಾಗಿ ದೆಹಲಿಗೆ ದೌಡಾಯಿಸಿದ್ದಲ್ಲದೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಹುದ್ದೆಗೆ ತಮ್ಮನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆದರೆ ಸ್ಪೀಕರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಮೇಲೆದ್ದು ನಿಲ್ಲುವ ಸಾಧ್ಯತೆಗಳನ್ನು ಕಂಡ ಬಿಜೆಪಿ ಹೈಕಮಾಂಡ್ ಇದ್ದಕ್ಕಿದ್ದಂತೆ ತನ್ನ ನಿಲುವು ಬದಲಿಸಿತು. ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೆ ಕಾಯುತ್ತಾ ಕುಳಿತರೆ ಬಿಜೆಪಿ ಕೈಗೆ ಬಂದ ತುತ್ತನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದು ಅಮಿತ್‌ ಷಾಗೆ ಮನವರಿಕೆಯಾಗಿದೆ. ತಕ್ಷಣವೇ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ತಯಾರಾಗಿ ಎಂದು ಯಡಿಯೂರಪ್ಪ ಅವರಿಗೆ ನಿನ್ನೆ ಬೆಳಗ್ಗೆ ಸಂದೇಶ ರವಾನೆ ಮಾಡಿತು. ಅಷ್ಟೇ ಅಲ್ಲದೆ, ಮುಂಬೈಯಲ್ಲಿರುವ ಅತೃಪ್ತ ಶಾಸಕರು ಯಾವ ಕಾರಣಕ್ಕೂ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ಮಾಡಿ ಸಮಾಧಾನದ ನಿಟ್ಟುಸಿರು ಬಿಟ್ಟಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ABOUT THE AUTHOR

...view details