ಕರ್ನಾಟಕ

karnataka

ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸುವ ಪರಿಜ್ಞಾನವಿಲ್ಲ, ಧಮ್ಮು ತಾಕತ್ತಿನ ಭಾಷಣ ಮಾಡುವ ಸಿಎಂ: ಜೆಡಿಎಸ್

ಶಾಲಾ ಮಕ್ಕಳಿಗೆ ಅಗತ್ಯ ಸಮವಸ್ತ್ರ ಪೂರೈಕೆಯಲ್ಲಿ ವೈಫಲ್ಯ, ಹೈಕೋರ್ಟ್ ಛೀಮಾರಿ ಪ್ರಸ್ತಾಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್‌ ವ್ಯಂಗ್ಯವಾಡಿದೆ.

By

Published : Feb 1, 2023, 9:38 PM IST

Published : Feb 1, 2023, 9:38 PM IST

ETV Bharat / state

ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸುವ ಪರಿಜ್ಞಾನವಿಲ್ಲ, ಧಮ್ಮು ತಾಕತ್ತಿನ ಭಾಷಣ ಮಾಡುವ ಸಿಎಂ: ಜೆಡಿಎಸ್

jds party symbol
ಜೆಡಿಎಸ್ ಪಕ್ಷದ ಚಿಹ್ನೆ

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುವ ಕಾರ್ಯಕ್ರಮವನ್ನೂ ಸರಿಯಾಗಿ ನಿರ್ವಹಿಸದೇ, ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವ ಮಟ್ಟಕ್ಕೆ ಇಳಿಯಿತೇ ನಿಮ್ಮ ಬಿಜೆಪಿ ಸರ್ಕಾರ? ಧಮ್ಮು-ತಾಕತ್ತು ಎಂದು ಭಾಷಣಗೈಯುವ ಸಿಎಂಗೆ ಶಾಲಾ ಮಕ್ಕಳಿಗೆ ಅಗತ್ಯ ಸಮವಸ್ತ್ರ ಪೂರೈಸುವ ಪರಿಜ್ಞಾನವಿಲ್ಲದೆ ಹೋಯಿತೇ ಎಂದು ಜೆಡಿಎಸ್ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯ ಆಗದ ಅತಿ ಕೆಟ್ಟ ಸರ್ಕಾರವಿದು. ಶಿಕ್ಷಣ ಸಚಿವರು ಬಿ.ಸಿ.ನಾಗೇಶ್ ಅವರೇ, ಸರ್ಕಾರಿ ಶಾಲಾ ಮಕ್ಕಳ ವಿಷಯವೆಂದರೆ ಅಷ್ಟು ನಿರಾಧಾರವೇ? ನ್ಯಾಯಾಂಗ ನಿಂದನೆಯ ಜತೆಗೆ ಈ ಉದಾಸೀನ ಧೋರಣೆ ಖಂಡನೀಯ ಎಂದಿದೆ.

ಉತ್ಸವ ಮಾಡಿ ಧಮ್ಮು-ತಾಕತ್ತಿನ ಪ್ರದರ್ಶನ ಮಾಡುವುದಕ್ಕೆ ಶಕ್ತಿ-ಯುಕ್ತಿ ವ್ಯಯ ಮಾಡುವುದೇ ಸಾಧನೆ ಮಾಡಿಕೊಂಡಿರುವ ಈ ರಾಜ್ಯ ಬಿಜೆಪಿಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡು, ಹಿಂದೆ ನೀಡಿದ ಆದೇಶವನ್ನು ಎರಡು ವಾರದಲ್ಲಿ ಪಾಲಿಸುವಂತೆ ಸೂಚಿಸಿದೆ. ಈ ದೆಸೆಯಲ್ಲಾದರೂ ಮಾನ-ಮರ್ಯಾದೆ ಇಲ್ಲದ ಆಡಳಿತಕ್ಕೆ ಬಿಸಿ ಮುಟ್ಟಲೇಬೇಕಿತ್ತು ಎಂದು ಕಿಡಿಕಾರಿದೆ. "ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು" ಎಂದ ಕುಮಾರವ್ಯಾಸನ ಸಾಲುಗಳಂತೆ ಇಡೀ ಆಡಳಿತವು ಜನತೆಯ ರಕ್ತ ಹೀರುವ ಜಿಗಣೆಯಂತಾಗಿದೆ. ಜನತೆಯ ಆಕ್ರೋಶದ ಕೆಂಡದಲ್ಲಿ ಈ ಸಲದ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸುಟ್ಟುಹೋಗುವುದು ಖಚಿತ ಎಂದು ಎಚ್ಚರಿಸಿದೆ.

ರಮೇಶ ಜಾರಕಿಹೊಳಿ, ಡಿಕೆಶಿ ವಿರುದ್ಧ ವಾಗ್ದಾಳಿ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಮತ್ತೆ ಸಿಡಿ-ಮಿಡಿಗೊಂಡಿದ್ದಾರೆ. ಇಬ್ಬರು ಹಿರಿಯ ರಾಜಕಾರಣಿಗಳ ಈ ಜಂಗೀ ಕುಸ್ತಿ ಮಾಧ್ಯಮದ ಸರಕು ಆಗಿದೆ. ಇವರ ಬಂಡವಾಳದ ಅಸಲು ಮತ್ತು ಬಡ್ಡಿ ಎರಡೂ ರಾಜ್ಯದ ಜನತೆಯ ಮುಂದೆ ಅನಾವರಣವಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

ಕಾಂಗ್ರೆಸ್ ಪಕ್ಷದಿಂದ ಜಿಗಿತಗೊಂಡು ಬಿಜೆಪಿಯ ಮನೆಯಲ್ಲಿರುವ ರಮೇಶ್ ಹಾಗೂ ಕಾಂಗ್ರೆಸ್​ನ ಶಿವಕುಮಾರ ಅವರು ರಾಜಕಾರಣವನ್ನು ವೈಯಕ್ತಿಕ ತೆವಲಿಗೆ ಬಳಸುತ್ತಿರುವುದು ಲಜ್ಜೆಗೇಡಿನ ಸಂಕೇತ. ಇವರ ಸಿಡಿ ಆಡಿಯೊಗಳನ್ನು ನೋಡುವ-ಕೇಳುವ ದೌರ್ಭಾಗ್ಯ ಕನ್ನಡಿಗರದ್ದು. ಖಾಸಗಿ ಬದುಕಿನ ಸಾರ್ವಜನಿಕ ಚರ್ಚೆ ಅಸಹ್ಯದ ಮಟ್ಟ ಮುಟ್ಟಿದೆ ಎಂದು ಅಪಾದಿಸಿದೆ.

ಸಮ್ಮಿಶ್ರ ಸರ್ಕಾರ ಕೆಡವಿ ಪರಾಕ್ರಮ ಮೆರೆದೆ ಎಂದು ಎದೆಯುಬ್ಬಿಸಿದ್ದ ರಮೇಶ್ ಅವರು, ನಿಮ್ಮ ರಾಜಕೀಯ ಜೀವನ ಹಾಳಾಯ್ತು ಎಂದು ಈಗ ಅಳಲು ತೋಡಿಕೊಂಡರೆ ಹೇಗೆ? ಶಿವಕುಮಾರ್ ಅವರ ವಿರುದ್ಧ ಛೂ ಬಾಣಗಳನ್ನು ಬಿಡುತ್ತಾ ಹಣಿಯಬೇಕೆಂದು ಹೊರಟಿದ್ದೀರಿ. ನಿಮ್ಮಿಬ್ಬರ ವೈಯಕ್ತಿಕ ವೈರತ್ವದಿಂದ ರಾಜ್ಯಕ್ಕೆ ಏನು ಉಪಯೋಗ ಎಂದು ಕೇಳಿದೆ ಜೆಡಿಎಸ್.

ಇದನ್ನೂಓದಿ:5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತ ಮುನ್ನುಗ್ಗುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ABOUT THE AUTHOR

...view details