ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ಆಪ್ತರಿಗೆ ಕೋಕ್ ನೀಡುವ ಕೆಲಸ ಮುಂದುವರೆದಿದ್ದು, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಶಾಂತಾರಾಮ್ಗೆ ಗೇಟ್ ಪಾಸ್ ನೀಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮೌಖಿಕ ಸೂಚನೆ ಮೇರೆಗೆ ಬಿಜೆಪಿ ಕಚೇರಿಯಲ್ಲಿ ಶಾಂತರಾಮ್ಗೆ ಹುದ್ದೆ ತೊರೆದು ನಿರ್ಗಮಿಸುವಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಬಿಎಸ್ವೈ ಆಪ್ತರಿಗೆ ಬಿಜೆಪಿ ಕಚೇರಿಯಿಂದ ಕೋಕ್ ನೀಡಿರುವ ಸಂಖ್ಯೆ 10 ಕ್ಕೇರಿದಂತಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಆಪ್ತರನ್ನ ಮಾಧ್ಯಮ ಸಂಚಾಲಕ ಹುದ್ದಗೆ ಕರೆತರುವ ಉದ್ದೇಶದಿಂದ ಹಾಲಿ ಮಾಧ್ಯಮ ಸಂಚಾಲಕ ಶಾಂತರಾಮ್ಗೆ ಗೇಟ್ ಪಾಸ್ ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಇನ್ನು ಹುದ್ದೆ ತೊರೆಯುವ ಮೌಖಿಕ ಸೂಚನೆ ಬರುತ್ತಿದ್ದಂತೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾಗೆ ಆಗಮಿಸಿದ ಶಾಂತಾರಾಮ್, ಸಿಎಂ ಜೊತೆ ಚರ್ಚಿಸಿದರು. ನಂತರ ಅಧಿಕೃತ ಆದೇಶ ಹೊರಬೀಳುವುದನ್ನೂ ಕಾಯದೇ ಎಲ್ಲರಿಗೂ ಧನ್ಯವಾದ ಸಂದೇಶವನ್ನು ತಿಳಿಸಿ ಹುದ್ದೆ ತೊರೆಯುತ್ತಿರುವ ಮಾಹಿತಿ ಪ್ರಕಟಿಸಿದ್ದಾರೆ.