ಕರ್ನಾಟಕ

karnataka

By

Published : Jul 16, 2023, 3:37 PM IST

ETV Bharat / state

ಸೇನಾಪತಿಯಿಲ್ಲದೇ ಯುದ್ಧಕ್ಕೆ ಬಂದ ಸ್ಥಿತಿ.. ಪ್ರತಿಪಕ್ಷ ನಾಯಕರಿಲ್ಲದೆ ಉಭಯ ಸದನದಲ್ಲಿ ಆಡಳಿತ ಪಕ್ಷವನ್ನು ಎದುರಿಸಲು ಬಿಜೆಪಿ ಸರ್ಕಸ್

ರಾಜ್ಯದಲ್ಲಿ ಉಭಯ ಸದನಗಳಲ್ಲಿಗೆ ಬಿಜೆಪಿ ಇನ್ನೂ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿಲ್ಲ. ಹೀಗಾಗಿ ಉಭಯ ಸದನಗಳಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕುವಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬ ವಿಮರ್ಶೆಗಳು ವ್ಯಕ್ತವಾಗುತ್ತಿವೆ.

Etv Bharat
Etv Bharat

ಬೆಂಗಳೂರು:ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಬಜೆಟ್ ಅಧಿವೇಶನ ಆರಂಭಗೊಂಡಿದೆ. ರಾಜ್ಯದಲ್ಲಿ ಕಲಾಪ ಆರಂಭಗೊಂಡು ಎರಡು ವಾರವಾದರೂ ಪ್ರತಿಪಕ್ಷ ನಾಯಕರಿಲ್ಲದೆ ಬಿಜೆಪಿ ಸದಸ್ಯರು ಸದನದಲ್ಲಿ ಭಾಗವಹಿಸುತ್ತಿದ್ದಾರೆ. ಆಡಳಿತ ಪಕ್ಷವನ್ನು ಎದುರಿಸಲು ನೇತೃತ್ವವೇ ಇಲ್ಲದೆ ಬಿಜೆಪಿ ಪರದಾಡುತ್ತಿದೆ. ಪ್ರತಿಪಕ್ಷ ನಾಯಕರಿಗೆ ಸಿಗುವ ಸಮಯವಾಕಾಶ ಸದಸ್ಯರಿಗೆ ಇಲ್ಲದ ಕಾರಣ ಆಡಳಿತ ಪಕ್ಷದ ಟೀಕೆ ಎದುರಿಸಲೂ ಪರದಾಡುವಂತಾಗಿದೆ.

ವಿಧಾನಸಭೆ ಮತ್ತು ವಿಧಾನ ಪರಿಷತ್​ನಲ್ಲಿ ಸೇನಾಪತಿಯಿಲ್ಲದೇ ಯುದ್ಧಕ್ಕೆ ಬಂದ ಸ್ಥಿತಿ ಬಿಜೆಪಿಯದ್ದಾಗಿದೆ. ಉಭಯ ಸದನಗಳಲ್ಲಿಯೂ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇದೆ. ಪ್ರತಿಪಕ್ಷ ಕಡೆಯ ಮೊದಲ ಸಾಲಿನ ಮೊದಲ ಆಸನ ಉಪ ಸಭಾಧ್ಯಕ್ಷರದ್ದಾದರೆ, ಎರಡನೇ ಆಸನ ಬಹು ಮುಖ್ಯವಾದ ಪ್ರತಿಪಕ್ಷ ನಾಯಕನ ಸ್ಥಾನವಾಗಿದೆ. ಆದರೆ ಕಳೆದ ಎರಡು ವಾರಗಳಿಂದಲೂ ಆ ಸ್ಥಾನ ಖಾಲಿಯೇ ಇದೆ. ನಾಯಕತ್ವವೇ ಇಲ್ಲದೆ ಸದನದ ಅಖಾಡಕ್ಕೆ ಬಿಜೆಪಿ ದುಮುಕಿದೆ. ಆದರೆ ಪ್ರತಿ ದಿನವೂ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತಲೇ ಇದೆ.

ಪ್ರತಿ ದಿನದ ಕಲಾಪದಲ್ಲಿ ಸರ್ಕಾರವನ್ನು ಎಷ್ಟು ಬಾರಿಯಾದರೂ ಎಷ್ಟು ಸಮಯವಾದರೂ ಟೀಕಿಸುವ ಅವಕಾಶ, ಸಚಿವರು, ಸದಸ್ಯರು ಮಾತನಾಡುವಾಗ ನಡುವೆ ಮಧ್ಯಪ್ರವೇಶ ಮಾಡಿದರೆ ಮಾತನಾಡಲು ಅವಕಾಶ ಸಿಗುವುದು ಪ್ರತಿಪಕ್ಷ ನಾಯಕರಿಗೆ ಮಾತ್ರ. ಸಭಾ ನಾಯಕರಿಗೆ ಸಮಾನವಾದ ಅವಕಾಶ ಪ್ರತಿಪಕ್ಷ ನಾಯಕರಿಗೆ ಇದೆ. ಪ್ರತಿಪಕ್ಷ ಸದಸ್ಯರು ಮಾತನಾಡುವ ವೇಳೆ ಆಡಳಿತ ಪಕ್ಷದ ಸದಸ್ಯರು ಮುಗಿಬಿದ್ದಾಗ ಅವರ ನೆರವಿಗೆ ಧಾವಿಸಲು ಪ್ರತಿಪಕ್ಷ ನಾಯಕರಿಂದ ಮಾತ್ರ ಸಾಧ್ಯ. ಆದರೆ ಪ್ರತಿಪಕ್ಷ ನಾಯಕರಿಲ್ಲದೆ ಈ ಎಲ್ಲಾ ಅವಕಾಶ ಬಿಜೆಪಿಗೆ ತಪ್ಪಿದೆ.

ಸದ್ಯ ವಿಧಾನ ಪರಿಷತ್​ನಲ್ಲಿ ಬಿಜೆಪಿಯ ಹಿರಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಕ್ಷ ನಾಯಕರ ಸ್ಥಾನ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸಭಾಪತಿ ಪೀಠದಿಂದಲೇ ನೀವು ಪ್ರತಿಪಕ್ಷ ನಾಯಕರಲ್ಲ, ಪದೇ ಪದೇ ಎದ್ದು ನಿಲ್ಲಬೇಡಿ ಎನ್ನುವ ಸೂಚನೆಯನ್ನು ಎದುರಿಸಿ ಮುಜುಗರಕ್ಕೂ ಈಡಾಗುತ್ತಿದ್ದಾರೆ. ಆರಂಭದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ಸದಸ್ಯರು ನಂತರದ ದಿನದಲ್ಲಿ ಸಮರ್ಥಿಸಿಕೊಳ್ಳಲು ಪ್ರಯಾಸಪಡಬೇಕಾಯಿತು.

ಸರ್ಕಾರದ ವಿರುದ್ಧದ ಪ್ರತಿ ಹೋರಾಟವನ್ನು ತಾರ್ತಿಕ ಅಂತ್ಯ ಕಾಣಿಸುವಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಪ್ರತಿಪಕ್ಷ ನಾಯಕರಿಲ್ಲದೆ ಇರುವುದು ಪ್ರಮುಖ ಕಾರಣವಾಗಿದೆ. ಮೊದಲ ದಿನವೇ ಗ್ಯಾರಂಟಿಗಳ ವಿಚಾರದಲ್ಲಿ ಬಾವಿಗಿಳಿದು ಧರಣಿ ನಡೆಸಿತು, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿತು. ಜೈನ ಮುನಿ ಹತ್ಯೆ ಕೇಸ್ ಸಿಬಿಐಗೆ ವಹಿಸುವಂತೆ ಸದನದ ಬಾವಿಗಿಳಿದು ಬಿಜೆಪಿ ಧರಣಿ ನಡೆಸಿತು.

ನಾಗರಕಟ್ಟೆ ಪೂಜೆಗೆ ಪೊಲೀಸ್ ಅನುಮತಿ ವಿಚಾರದಲ್ಲಿಯೂ ಸದನದ ಬಾವಿಗಿಳಿದು ಧರಣಿ ನಡೆಸಿತು. ಇಷ್ಟೆಲ್ಲಾ ಹೋರಾಟ ನಾಯಕತ್ವ ಇಲ್ಲದೇ ನಡೆಯಿತು. ಕೇವಲ ಸದಸ್ಯರು ಸೇರಿ ಧರಣಿಗೆ ಇಳಿದರು, ಧರಣಿ ವಾಪಸ್ ಪಡೆದರು, ಧರಣಿಗೆ ಕರೆ ನೀಡುವ, ಧರಣಿ ಕೈ ಬಿಡುವ ನಿರ್ಧಾರ ಕೈಗೊಳ್ಳುವ ವ್ಯಕ್ತಿ ಇಲ್ಲದೇ ಆತುರ ಆತುರವಾಗಿ ಬಿಜೆಪಿ ಧರಣಿ ನಡೆಸಿ ಅಷ್ಟೇ ವೇಗವಾಗಿ ಧರಣಿ ವಾಪಸ್ ಪಡೆದಿದೆ. ಯಾವುದೇ ಒಂದು ಹೋರಾಟವನ್ನು‌ ತಾರ್ತಿಕ ಅಂತ್ಯ ಕಾಣಿಸುವಲ್ಲಿ ವಿಫಲವಾಗಿದೆ.

ಪ್ರತಿಪಕ್ಷ ನಾಯಕರ ಆಯ್ಕೆ ವಿಳಂಬದ ಕುರಿತು ಮಾತನಾಡಿರುವ ಬಿಜೆಪಿ ಹಿರಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಇಷ್ಟರಲ್ಲೇ ಪ್ರತಿಪಕ್ಷ ನಾಯಕರ ಆಯ್ಕೆಯಾಗಬೇಕಿತ್ತು, ವಿಳಂಬವಾಗಿದೆ ಎನ್ನುವುದು ನಿಜ. ಆದರೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, 33 ಸದಸ್ಯರಲ್ಲಿ ಯಾರಿಗೆ ಅವಕಾಶ ನೀಡಿದರೂ ಸಹಮತವಿದೆ, ಸದ್ಯದಲ್ಲೇ ವರಿಷ್ಠರು ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಪ್ರತಿಪಕ್ಷ ನಾಯಕರಿಲ್ಲದೆ ಕಲಾಪ ಎದುರಿಸುತ್ತಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಚುನಾವಣೆಯಲ್ಲಿ ಸೋತಾಗ ಮುಂದಿನ ಎಲ್ಲ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಿದೆ. ಹಾಗಾಗಿ ಪಕ್ಷದ ಹೈಕಮಾಂಡ್ ನಾಯಕರು ಸ್ವಲ್ಪ ವಿಳಂಬ ಮಾಡಿದ್ದಾರೆ. ಆದರೆ ಸಮರ್ಥ ನಾಯಕರನ್ನೇ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು: ಬಸವರಾಜ್​ ಬೊಮ್ಮಾಯಿ

ABOUT THE AUTHOR

...view details