ಕರ್ನಾಟಕ

karnataka

ಬಿಜೆಪಿ ಪ್ರಚಾರ, ನಿರ್ವಹಣಾ ಸಮಿತಿ ಸಭೆ: ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ..!

By

Published : Mar 11, 2023, 3:22 PM IST

Updated : Mar 11, 2023, 3:28 PM IST

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಪ್ರಚಾರ ಕಾರ್ಯ, ತಾರಾ ಪ್ರಚಾರಕರ ಪಟ್ಟಿ,ಸಮಾವೇಶಗಳ ಆಯೋಜನೆ ಕುರಿತು ಮಹತ್ವದ ಸಮಾಲೋಚನೆ ಮಾಡಲಾಯಿತು.

bjp campaign management committee meeting
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು.

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಚನೆಯಾಗಿರುವ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಹಾಗು ಚುನಾವಣಾ ನಿರ್ವಹಣಾ ಸಮಿತಿಗಳ ಮೊದಲ ಸಭೆ ಇಂದು ನಡೆದಿದ್ದು,ಪ್ರಚಾರ ಕಾರ್ಯ, ತಾರಾ ಪ್ರಚಾರಕರ ಪಟ್ಟಿ,ಸಮಾವೇಶಗಳ ಆಯೋಜನೆ ಕುರಿತು ಮಹತ್ವದ ಸಮಾಲೋಚನೆ ಮಾಡಲಾಯಿತು.

ಪ್ರಚಾರ,ನಿರ್ವಹಣಾ ಸಮಿತಿ ಸಭೆ:ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೇಂದ್ರ ಸಚಿವ ಭಗವಂತ್ ಖೂಬಾ, ಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಚಲವಾದಿ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿಗಳು ನಿನ್ನೆಯಷ್ಟೇ ರಚನೆಯಾಗಿದ್ದು, ಇಂದು ಉಭಯ ಸಮಿತಿಗಳ ಮೊದಲ ಜಂಟಿ ಸಭೆ ನಡೆಯಿತು.ರಾಜಕೀಯ ನಾಯಕರ ಮತ್ತು ಸಂಘಟನಾತ್ಮಕ ಜವಾಬ್ದಾರಿ ಹೊತ್ತ ನಾಯಕರ ಪ್ರತ್ಯೇಕ ಸಮಿತಿ ರಚನೆಯಾಗಿ ಜಂಟಿಯಾಗಿ ಮುಂದುವರೆಯಬೇಕಿರುವ ಹಿನ್ನಲೆಯಲ್ಲಿ ಇಂದು ಮಹತ್ವದ ಸಮಾಲೋಚನೆ ನಡೆಸಲಾಯಿತು.

ಚುನಾವಣಾ ಪ್ರಚಾರ ತಂಡ ಯಾವ ರೀತಿ ಕಾರ್ಯ ನಿರ್ವಹಿಸಬೇಕು. ಹೇಗೆ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಸ್ಟಾರ್ ಕ್ಯಾಂಪೆನರ್ ಗಳ ಪಟ್ಟಿ ತಯಾರಿಕೆ, ಯಾರಿಗೆಲ್ಲಾ ತಾರಾ ಪ್ರಚಾರಕರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಬೇಕು. ಎಷ್ಟು ಜನರಿಗ ಅವಕಾಶ ಕೊಡಬೇಕು. ಪ್ರಾಂತ್ಯವಾರು ಪ್ರಚಾರ ಕಾರ್ಯ ಹೇಗಿರಬೇಕು ಎನ್ನುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.

ಪೂರ್ವಭಾವಿ ಸಭೆಗೆ ಬಿಎಸ್​ವೈ ,ಸಿಎಂ ಬೊಮ್ಮಾಯಿ ಗೈರು:ಇನ್ನು ಈಗಾಗಲೇ ವಿಜಯ ಸಂಕಲ್ಪ ಯಾತ್ರೆ ನಾಲ್ಕು ದಿಕ್ಕಿನಿಂದ ನಡೆಯುತ್ತಿದ್ದು, ಅಲ್ಲಲ್ಲಿ ಸಮಾವೇಶಗಳನ್ನು ನಡೆಸಲಾಗುತ್ತಿದೆ ಇದರ ಮುಂದುವರೆದ ಭಾಗ ಯಾವ ರೀತಿ ಇರಬೇಕು, ಮಾರ್ಚ್ 23ಕ್ಕೆ ರಥಯಾತ್ರೆ ಮುಗಿಯಲಿದ್ದು ನಂತರದ ಪ್ರಚಾರ ಕಾರ್ಯ ಯಾವ ರೀತಿ ಇರಬೇಕು ಎನ್ನುವ ಕುರಿತು ಮೊದಲ ಹಂತದ ಸಮಾಲೋಚನೆ ನಡೆಸಲಾಯಿತು.

ಇಂದಿನ ಸಭೆಗೆ ಪ್ರಚಾರ ಸಮಿತಿ ಅಧ್ಯಕ್ಷ ಬಸವರಾಜ ಬೊಮ್ಮಾಯಿ‌, ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೇರಿ ಹಿರಿಯ ಸದಸ್ಯರು ಗೈರಾಗಿದ್ದು, ಒಂದು ರೀತಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಎಲ್ಲ ನಾಯಕರನ್ನು ಒಳಗೊಂಡ ಸಭೆ ಸದ್ಯದಲ್ಲೇ ನಡೆಸಲಾಗುತ್ತದೆ ಎನ್ನಲಾಗಿದೆ.

ಮಾಡಾಳ್ ವಿರೂಪಾಕ್ಷಪ್ಪಗೆ ಕಾನೂನು ರೀತಿ ಶಿಕ್ಷೆ ಆಗಲಿದೆ:ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ತಪ್ಪು ಮಾಡಿದ್ದಾರೆ. ತಪ್ಪು ಮಾಡಿದ್ದಕ್ಕೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗುತ್ತದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನಂತೆ ಏನು ಕ್ರಮ ಆಗಬೇಕೋ ಅದು ಆಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮ ಪಕ್ಷ ಹಲವಾರು ಬಾರಿ ಉತ್ತರ ಹೇಳಿದೆ. ಅವರು ತಪ್ಪು ಮಾಡಿದ್ದಾರೆ, ತಪ್ಪು ಮಾಡಿದ್ದಕ್ಕೆ ಅವರಿಗೆ ಅವರದ್ದೇ ಆದ ರೀತಿಯಲ್ಲಿ ಹಾಗೂ ಕಾನೂನು ರೀತಿಯಲ್ಲಿ ಶಿಕ್ಷೆ ಆಗಲಿದೆ. ಈ ಘಟನೆ ಬಹಿರಂಗವಾದಗಿನಿಂದ ಹಲವಾರು ಪ್ರಶ್ನೆಗಳನ್ನ ನಮ್ಮ ನಾಯಕರಿಗೆ ಮಾಧ್ಯಮದವರು ಕೇಳಿದ್ದಾರೆ. ಎಲ್ಲದಕ್ಕೂ ಪಕ್ಷ ಸ್ಪಷ್ಟೀಕರಣ ನೀಡಿದೆ ಎಂದರು.

ಇದನ್ನೂಓದಿ:ರಾಜಕೀಯ ಭಾಷಣಗಳಿಂದ ಹೊಟ್ಟೆ ತುಂಬುವುದಿಲ್ಲ : ಸಿಎಂ ಬೊಮ್ಮಾಯಿ

Last Updated : Mar 11, 2023, 3:28 PM IST

ABOUT THE AUTHOR

...view details