ಬೆಂಗಳೂರು:ಕಾವೇರಿಗಾಗಿ ಸೆ. 26ರಂದು (ಮಂಗಳವಾರ) ಕರೆ ನೀಡಿರುವ 'ಬೆಂಗಳೂರು ಬಂದ್'ಗೆ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿದೆ. ಹೋರಾಟಕ್ಕೆ ಕೈ ಜೋಡಿಸುವಂತೆ ಪಕ್ಷದ ಕಾರ್ಯಕರ್ತರಿಗೂ ಕರೆ ನೀಡಿದೆ. ಬಂದ್ಗೆ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಜೊತೆ ರಾಜಕೀಯ ಪಕ್ಷದ ಬಲವೂ ಸಿಕ್ಕಿದಂತಾಗಿದೆ.
ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, "ಎಲ್ಲರೂ ಸೇರಿ ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದಾರೆ. ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ" ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಹೇಳಿಕೆಗೆ ದನಿಗೂಡಿಸಿದ ಸಿ.ಟಿ.ರವಿ, "ಮಂಗಳವಾರದ ಬೆಂಗಳೂರು ಬಂದ್ಗೆ ಬಿಜೆಪಿ ಬೆಂಬಲ ನೀಡಲಿದೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಸಹ ಈಗಾಗಲೇ ಬೆಂಬಲ ನೀಡುವ ಕುರಿತು ಹೇಳಿದ್ದಾರೆ. ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುವ ಬಂದ್ಗೆ ನಾವು ಬೆಂಬಲ ನೀಡುತ್ತೇವೆ. ಕುಡಿಯುವ ನೀರಿಗೆ, ರೈತರ ಹಿತ ದೃಷ್ಟಿಯಿಂದ ಹೋರಾಟ ಕೈಗೊಂಡಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ನಾವು ಕರೆ ನೀಡುತ್ತೇವೆ. ಬಂದ್ಗೆ ಬಿಜೆಪಿ ಬೆಂಬಲ ಇರಲಿದೆ" ಎಂದರು.
ಇದನ್ನೂ ಓದಿ:Cauvery Water Dispute: ಕಾವೇರಿ ಹೋರಾಟದ ಜಾಗೃತಿ ಸಭೆ : ಸೆ.26ಕ್ಕೆ ಬೆಂಗಳೂರು ಬಂದ್ಗೆ ಕರೆ ನೀಡಿದ ಸರ್ವ ಸಂಘಟನೆ