ಕರ್ನಾಟಕ

karnataka

ಭಾರತ್ ಬಂದ್​​ ಬೆಂಬಲಿಸಿ ಬೆಂಗಳೂರಲ್ಲಿ ರೈತರಿಂದ ಬೃಹತ್​ ರ‍್ಯಾಲಿ: ರಾರಾಜಿಸಿದ ಭಗತ್​ಸಿಂಗ್​ ಚಿತ್ರಗಳು!

By

Published : Sep 27, 2021, 12:49 PM IST

Updated : Sep 27, 2021, 1:30 PM IST

ಭಾರತ್ ಬಂದ್​​ ಬೆಂಬಲಿಸಿ ಬೆಂಗಳೂರಿನಲ್ಲಿ ದಲಿತ, ಕಾರ್ಮಿಕ, ವಕೀಲರ, ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ಟೌನ್ ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್​ವರೆಗೆ ಬೃಹತ್ ರ‍್ಯಾಲಿ, ತಮಟೆ ಚಳವಳಿ ನಡೆಸಿದರು. ಈ ವೇಳೆ ಕಾರ್ಯಕರ್ತರ ಕೈಯಲ್ಲಿ ಭಗತ್​ ಸಿಂಗ್​ ಪೋಸ್ಟರ್​ಗಳು ರಾರಾಜಿಸಿದವು.

bharat-bandh-farmers-rally-in-bengaluru
ಭಾರತ್ ಬಂದ್​​ ಬೆಂಬಲಿಸಿ ಬೆಂಗಳೂರಿನಲ್ಲಿ ರೈತರಿಂದ ಬೃಹತ್​ ರ‍್ಯಾಲಿ, ತಮಟೆ ಚಳವಳಿ

ಬೆಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​​ ಬೆಂಬಲಿಸಿ ನಗರದಲ್ಲಿ ದಲಿತ, ಕಾರ್ಮಿಕ, ವಕೀಲರ, ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ಟೌನ್ ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್​ವರೆಗೆ ಬೃಹತ್ ರ‍್ಯಾಲಿ, ತಮಟೆ ಚಳವಳಿ ನಡೆಸಿದರು. ಇಂದು ಭಗತ್​ ಸಿಂಗ್​ ಅವರ 114ನೇ ಜನ್ಮದಿನವಾಗಿದ್ದು, ಪ್ರತಿಭಟನೆಯಲ್ಲಿ ಭಗತ್​ ಸಿಂಗ್​ ಪೋಸ್ಟರ್​ಗಳು ರಾರಾಜಿಸಿದವು.

ಕಾರ್ಪೊರೇಟ್ ಏಜೆಂಟ್ ಮೋದಿ, ರೈತ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು. ತರಕಾರಿ ಮಾಲೆ ಹಾಕಿ ರೈತರನ್ನು ಉಳಿಸಿ ಎಂದು ಆಗ್ರಹಿಸಿದರು. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಟೌನ್ ಹಾಲ್​ ಬಳಿ ಬಂದಿದ್ದ ನಮ್ಮ ಕರುನಾಡ ಯುವಸೇನೆ ಕಾರ್ಯಕರ್ತರು, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಅಲ್ಲದೇ ಪ್ರಧಾನಿ ಮೋದಿ ಅವರನ್ನು ರಾವಣನಂತೆ ಬಿಂಬಿಸಿ ಬ್ಯಾನರ್ ಪ್ರದರ್ಶನ ಮಾಡಿ, ನಂತರ ಥಳಿಸಿ ಬೆಂಕಿ ಹಚ್ಚಿದರು. ಬೆಲೆ ಏರಿಕೆ ಇಳಿಸಿ ದೇಶದ ಜನರನ್ನು ಉಳಿಸಿ ಎಂದು ಒತ್ತಾಯಿಸಿದರು.

ರೈತ ಸಂಘಟನೆಗಳಲ್ಲಿ ಯಾವುದೇ ಒಡಕಿಲ್ಲ

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಸಂಘಟನೆಗಳಲ್ಲಿ ಯಾವುದೇ ಒಡಕಿಲ್ಲ .ಹಳ್ಳಿ ಹಳ್ಳಿಗಳಲ್ಲೂ ಬಂದ್​ಗೆ ಬೆಂಬಲ ಸಿಕ್ಕಿದೆ . ಇಂದು ಸೋಮವಾರವಾದರೂ ಎಲ್ಲ ಖಾಲಿ ಖಾಲಿ ಇದೆ. ರಾಜ್ಯ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೆಲವೊಂದು ಸಂಘ ಸಂಸ್ಥೆಗಳನ್ನ ಕರೆಸಿ ಬೆಂಬಲ ನೀಡಬೇಡಿ ಅಂತ ಹೇಳಿದೆ. ನಮ್ಮ ಪ್ರತಿಭಟನೆಗೆ ನವೆಂಬರ್ 26ಕ್ಕೆ ಒಂದು ವರ್ಷ ಆಗಲಿದ್ದು, ಅಂದು ನಾವು 5 ಕೋಟಿ ಜನರು ಸೇರಿಕೊಂಡು ದೆಹಲಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಗೆ ಪೊಲೀಸರ ಅಡ್ಡಿ - ಚಂದ್ರಶೇಖರ್​​​​ ಕಿಡಿ

ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈಗಾಗಲೇ ನಗರದ ವಿವಿಧ ಭಾಗಗಳಿಂದ ರ‍್ಯಾಲಿಯಲ್ಲಿ ಇಲ್ಲಿಗೆ ಬರ್ತಿದ್ದಾರೆ. ಪೊಲೀಸರು ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆ. ಮೆರವಣಿಗೆ ಹೊರಟ ನಂತರ ಸಂಪೂರ್ಣ ಬಂದ್ ಆಗುತ್ತೆ. ಸರ್ಕಾರ ಬಸ್​​ಗಳನ್ನ ಓಡಿಸಲಾಗುತ್ತಿದೆ. ಜನಸಾಮಾನ್ಯರಿಂದ ಬಂದ್​ಗೆ ಬೆಂಬಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಕೇಳಿಸಿಕೊಳ್ಳಬೇಕು. ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ದೇಶಾದ್ಯಂತ ಚಳವಳಿ ನಡೆಯುತ್ತಿದೆ, ಜನರಿಂದ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

ಇದನ್ನೂ ಓದಿ:ಬಂದ್ ಎಫೆಕ್ಟ್​.. ದೆಹಲಿ - ನೋಯ್ಡಾ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ, ಟ್ರಾಫಿಕ್​ ಜಾಮ್​: Video

Last Updated : Sep 27, 2021, 1:30 PM IST

ABOUT THE AUTHOR

...view details