ಬೆಂಗಳೂರು: ಸಂಕಷ್ಟದಲ್ಲಿರುವ ಪ್ರವಾಸಿ ವಾಹನಗಳಿಗೆ ತೆರಿಗೆ ಮನ್ನಾ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘವು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಭೈರವ ಅವರು ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಕೋವಿಡ್-19 ವೈರಾಣು ಹರಡುವಿಕೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಎಲ್ಲ ವರ್ಗಗಳಲ್ಲಿಯೂ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ನಮ್ಮ ಸಂಘದ ಸಭೆಯನ್ನು ಕರೆದು ಚರ್ಚಿಸಲು ಆಗ್ರಹಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಮಾಕ್ಸಿ ಕ್ಯಾಬ್ ಫೆಬ್ರವರಿ ತಿಂಗಳಿನಿಂದ ಓಡಿಲ್ಲ. ವಾಹನಕ್ಕೆ ಸರ್ಕಾರ ತೆರಿಗೆಯನ್ನು ಹೊಸ ಆದೇಶದಲ್ಲಿ 900 ರೂ. ಮಾಡಿದೆ. ಇದು ಗೆಜೆಟ್ನಲ್ಲಿ ಅನುಮೋದನೆ ಕೂಡ ಆಗಿದೆ. ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಿಂದ ಮನವಿ ಕೊಟ್ಟಾಗ ಅವರು ಆದೇಶವನ್ನು ಮರು ಪರಿಶೀಲಿಸಿ ಒಂದು ಆಸನಕ್ಕೆ 700 ರೂಪಾಯಿ ತೆರಿಗೆಯನ್ನು ಕೊಡುವಂತೆ ಸರ್ಕಾರ ಹಣಕಾಸು ಕಾರ್ಯದರ್ಶಿಯವರಿಗೆ ತಿಳಿಸಿದ್ದರು. ಆದರೆ ಹಣಕಾಸು ಕಾರ್ಯದರ್ಶಿಗಳು ಇದನ್ನು ಇನ್ನೂ ಕಾರ್ಯಗತಗೊಳಿಸಿಲ್ಲ. ನಾವು ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮಾಹಿತಿ ತಲುಪಿಸಿದ್ದು, ಪ್ರತಿಪಕ್ಷದ ನಾಯಕರಾಗಿ ತಾವು ಕೂಡ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಕೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಸಾರಿಗೆ ಸಚಿವರನ್ನು ಭೇಟಿಯಾಗಿ ಈ ವಿಚಾರವಾಗಿ ಸಮಾಲೋಚಿಸುತ್ತೇನೆ. ಸರ್ಕಾರದ ಗಮನ ಸೆಳೆಯಲು ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ. ವಾಹನ ಮಾಲೀಕರು ಹಾಗೂ ಚಾಲಕರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಸದಾ ಕಾಳಜಿ ವಹಿಸುತ್ತಲೇ ಬಂದಿದ್ದು ಈ ಸಾರಿಯೂ ಅದು ಪುನರಾವರ್ತನೆಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.