ಕರ್ನಾಟಕ

karnataka

By

Published : Jul 26, 2023, 11:06 AM IST

Updated : Jul 26, 2023, 2:16 PM IST

ETV Bharat / state

Suspected Terrorists: ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ಅಂತ್ಯ: ಇಂದು ಕೋರ್ಟ್​ಗೆ ಹಾಜರು

Suspected Terrorists arrest case: ಬೆಂಗಳೂರಿನಲ್ಲಿ ಇತ್ತೀಚೆಗೆ ಬಂಧಿಸಲಾಗಿರುವ ಶಂಕಿತ ಉಗ್ರರ ಪೊಲೀಸ್​ ಕಸ್ಟಡಿ ಇಂದು ಮುಕ್ತಾಯಗೊಳ್ಳುತ್ತಿದೆ.

ಶಂಕಿತ ಉಗ್ರರು
ಶಂಕಿತ ಉಗ್ರರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾಗುತ್ತಿದೆ. ಸಿಸಿಬಿ ಪೊಲೀಸರು ಇಂದು ಶಂಕಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ 7 ದಿನಗಳ ಕಾಲ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಏಳು ದಿನಗಳ ಕಾಲ ತೀವ್ರ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ತಲೆಮರೆಸಿಕೊಂಡಿರುವ ಜುನೈದ್ ಹಾಗೂ ಗ್ರೆನೇಡ್ ತಂದುಕೊಟ್ಟ ವ್ಯಕ್ತಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ಕೆಲವರು ಶಂಕಿತರ ಜೊತೆ ಸಂಪರ್ಕದ ಶಂಕೆ ಇದ್ದು ಮತ್ತೆ ಏಳು ದಿನಗಳ ಕಾಲ ಕಸ್ಟಡಿಗೆ ಕೇಳಲು ಸಿಸಿಬಿ ಸಿದ್ದತೆ ನಡೆಸುತ್ತಿದೆ. ಪ್ರಕರಣದ ಎ1 ಆರೋಪಿ ಉಗ್ರ ಟಿ.ನಜೀರ್‌ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಕಾರ್ಯಪ್ರವೃತ್ತವಾಗಿದ್ದು, ಜೈಲಿನಲ್ಲಿರುವ ಉಗ್ರ ನಜೀರ್​ನ ವಿಚಾರಣೆ ನಡೆಸಿದರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ. ಪ್ರಕರಣದ ಎರಡನೇ ಆರೋಪಿ ಜುನೈದ್​ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್‌ವಾಶ್ ಮಾಡಿದ್ದ ನಜೀರ್ 2008ರ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ.

ಜು. 19ರಂದು ಬೆಂಗಳೂರಿನಲ್ಲಿ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬ ಉಗ್ರರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೇಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮಡಿವಾಳ ಟೆಕ್ನಿಕಲ್ ಸೆಲ್​​ನಲ್ಲಿ ಶಂಕಿತರ ತೀವ್ರ ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಮೊಬೈಲ್ ಫೋನ್​ಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಇನ್ನಿಬ್ಬರು ಇವರ ಜೊತೆ ನಂಟು ಹೊಂದಿರುವ ಮಾಹಿತಿ ಸಿಕ್ಕಿತ್ತು. ತನಿಖಾ ತಂಡಗಳು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಅವರು ರೂಪಿಸಿದ ಪ್ರಮುಖ ದುಷ್ಕೃತ್ಯಗಳಿಗೆ ಕಡಿವಾಣ​ ಹಾಕಿದ್ದರು. ಆರೋಪಿಗಳು ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಪಿಸ್ತೂಲ್ ಸೇರಿದಂತೆ ಸ್ಫೋಟಕ್ಕೆ ಕಚ್ಚಾ ವಸ್ತುಗಳನ್ನು ಸಿದ್ಧಪಡಿಸಿಕೊಂಡಿದ್ದರು.

2008ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಬಾಂಬ್​ ಸ್ಫೋಟ ಪ್ರಕರಣದ ರುವಾರಿ ಟಿ.ನಜೀರ್​ ಹಾಗೂ 2017ರ ಕೊಲೆ ಪ್ರಕರಣದ ಆರೋಪಿ ಜುನೈದ್​ ಇಬ್ಬರೂ ಸೇರಿ ಬಂಧಿತ ಸಯ್ಯದ್ ಸೋಹೆಲ್, ಮುದಾಸಿರ್, ಉಮರ್ ಮತ್ತು ಜಾಹಿದ್​ಗೆ ತರಬೇತಿ ನೀಡಿದ್ದರು. ದುಷ್ಕೃತ್ಯ ಎಸಗಲು ಶಂಕಿತರು ಏನೆಲ್ಲ ಪ್ಲಾನ್ ಮಾಡಿದ್ದರು ಎಂಬ ಬಗ್ಗೆ ತನಿಖೆ ನಡೆಸಲು ಬಂಧಿತರನ್ನು 15 ದಿನ ಕಸ್ಟಡಿಗೆ ಪಡೆಯಲಾಗಿತ್ತು.

ಇದನ್ನೂ ಓದಿ:ಅಸಲಿ ಪಾಸ್ ಪೋರ್ಟ್ ಬಳಸಿಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ ಶಂಕಿತ ಉಗ್ರ ಜುನೈದ್!

Last Updated : Jul 26, 2023, 2:16 PM IST

ABOUT THE AUTHOR

...view details