ಕರ್ನಾಟಕ

karnataka

ETV Bharat / state

ಬೆಂಗಳೂರು ಮೈಸೂರು ನಡುವೆ ರಾಜ್ಯದ ಮೊದಲ ಅಂತರ ನಗರ ಎಲೆಕ್ಟ್ರಿಕ್ ಬಸ್ ಸಂಚಾರ... ಐರಾವತ್ ಬಸ್​ಗಿಂತ ಕಡಿಮೆ ದರ! - EV Bus in karnataka

ಜನವರಿ 16 ರಂದು ಬೆಂಗಳೂರು ಮೈಸೂರು ನಡುವೆ ಸಂಚರಿಸಲಿದೆ ಮೊದಲ ಅಂತರ ನಗರ ಎಲೆಕ್ಟ್ರಿಕ್ ಬಸ್. ಫೆಬ್ರವರಿಯಲ್ಲಿ ಬೆಂಗಳೂರಿಂದ ರಾಜ್ಯದ ಪ್ರಮುಖ ನಗರಗಳಿಗೂ ಇ ಬಸ್ ಸಂಚರಿಸಲಿವೆ.

e bus
ಇ ಬಸ್

By

Published : Jan 14, 2023, 7:11 AM IST

Updated : Jan 14, 2023, 7:38 AM IST

ಬೆಂಗಳೂರು:ಕೆಎಸ್​​ಆರ್​​ಟಿಸಿ ಪ್ರಥಮ ಅಂತರ-ನಗರ (Prototype ) ಎಲೆಕ್ಟ್ರಿಕ್ ಬಸ್​ನ (EV Bus) ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿದ್ದು, ಜನವರಿ 16 ರಿಂದ ಬೆಂಗಳೂರು ಮೈಸೂರು ನಡುವೆ ಇ ಬಸ್ ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ. ಟಿಕೆಟ್ ದರವೂ ಕ್ಲಬ್ ಕ್ಲಾಸ್ ದರಕ್ಕಿಂತ ಕಡಿಮೆ ನಿಗದಿಪಡಿಸಲಾಗಿದೆ‌.

ಇಂದು ಇವಿ ಪವರ್ ಪ್ಲಸ್‌ ಬಸ್ ಪ್ರಾಯೋಗಿಕ ಚಾಲನೆ ಕೂಡ ಬೆಂಗಳೂರು - ರಾಮನಗರ ನಡುವೆ ನಡೆಸಲಾಯಿತು. ನಿರೀಕ್ಷೆಯಂತೆಯೇ ಎಲ್ಲಾ ತಪಾಸಣೆಯಲ್ಲಿಯೂ ಇ ಬಸ್ ಸಕಾರಾತ್ಮಕ ಫಲಿತಾಂಶ ನೀಡಿದ್ದು, ಸೋಮವಾರದಿಂದ ಬೆಂಗಳೂರು ಮೈಸೂರು ನಡುವೆ ಬಸ್ ಕಾರ್ಯಾಚರಣೆ‌ ನಡೆಸಲಿದೆ. ಐರಾವತ ಕ್ಲಬ್ ಕ್ಲಾಸ್ ಪ್ರಯಾಣ ದರಕ್ಕಿಂತ ರೂ.30 ಕಡಿಮೆ ದರವನ್ನು ‌ನಿಗದಿಪಡಿಸಲಾಗಿದೆ. ಮುಂದಿನ 49 ಬಸ್​​ಗಳು ಫೆಬ್ರವರಿ ಎರಡನೇ ವಾರದಲ್ಲಿ ಸೇರ್ಪಡೆಯಾಗಲಿದ್ದು, ಬೆಂಗಳೂರು ದಾವಣಗೆರೆ, ಬೆಂಗಳೂರು ಚಿಕ್ಕಮಗಳೂರು, ಬೆಂಗಳೂರು ಶಿವಮೊಗ್ಗ, ಬೆಂಗಳೂರು ಮಡಿಕೇರಿ, ಬೆಂಗಳೂರು ವಿರಾಜಪೇಟೆ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್​​ಗಳನ್ನು ಕಾರ್ಯಾಚರಣೆಗೊಳಿಸಲಿದೆ. ಸದ್ಯ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ಮುಕ್ತಾಯವಾಗಿದ್ದು, ಮೈಸೂರಿಗೆ ಮೊದಲ ಇ ಬಸ್ ಸೇವೆ ಒದಗಿಸಲಿದೆ.

ಪ್ರಾಯೋಗಿಕ ಚಾಲನೆಯಲ್ಲಿ ಯಶಸ್ವಿಯಾದ ಎಲೆಕ್ಟ್ರಿಕ್ ಬಸ್​

ದರ ನಿಗದಿ:ಇ ಬಸ್ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಸ್ತುತ ಐರಾವತ ಬಸ್ ದರ 291 ರೂ. ಇದ್ದು ಐರಾವತ ಕ್ಲಬ್ ಕ್ಲಾಸ್​​ನಲ್ಲಿ 331 ರೂ. ಇದೆ .ಆದರೆ ಹೊಸದಾಗಿ ರಸ್ತೆಗಿಳಿಯುತ್ತಿರುವ ಇವಿ ಪವರ್ ಪ್ಲಸ್ ಬಸ್ ದರ 301 ರೂ. ಗಳಾಗಿದ್ದು, ಕ್ಲಬ್ ಕ್ಲಾಸ್​​ಗಿಂತ 30 ರೂ. ಕಡಿಮೆ ಇರಲಿದೆ.

ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ , ಚಿಕ್ಕಮಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರ ನಿರ್ಮಾಣ ಪ್ರಗತಿಯಲ್ಲಿದೆ. ಆ ಕಾಮಗಾರಿ ಮುಗಿಯುತ್ತಿದ್ದಂತೆ ಹಂತ ಹಂತವಾಗಿ ಇ ಬಸ್ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ನಗರ ಸಾರಿಗೆ:ಈಗಾಗಲೇ ಮೈಸೂರಿನಲ್ಲಿ ಕೆಎಸ್ಆರ್‌ಟಿಸಿ ಇ ಬಸ್​​ಗಳನ್ನು ನಗರ ಸಂಚಾರಕ್ಕೆ ಬಳಸುತ್ತಿದೆ. ಬೆಂಗಳೂರಿನಲ್ಲಿಯೂ ಬಿಎಂಟಿಸಿ ಇ ಬಸ್​​ಗಳನ್ನು ರಸ್ತೆಗಿಳಿಸಿದೆ. ಇ ಬಸ್​​ಗಳ ಉತ್ತೇಜನಕ್ಕೆ ಸಾರಿಗೆ ನಿಗಮಗಳು ಮುಂದಾಗಿದೆ. ಆದರೆ ಇದೀಗ ನಗರ ಸಾರಿಗೆ ಸೇವೆ ನಂತರ ಅಂತರ ನಗರಕ್ಕೂ ಇ ಬಸ್ ಸೇವೆಯನ್ನು ಒದಗಿಸಲು ಕೆಎಸ್ಆರ್‌ಟಿಸಿ ಮುಂದಾಗಿದ್ದು, ಪರಿಸರ ಸ್ನೇಹಿ ಸಮೂಹ ಸಾರ್ವಜನಿಕ ಸಾರಿಗೆ ಸೇವೆ ನೀಡಲು ಮುಂದಾಗಿದೆ.

ರಾಜ್ಯ ರಾಜಧಾನಿಯಲ್ಲಿ ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರಕ್ಕೆ ಲಕ್ಷಾಂತರ ಪ್ರಯಾಣಿಕರ ಆಗಮನದಿಂದ ಸಂಚರಿಸಲು ವಾಹನಗಳು ಹೆಚ್ಚಾಗುತ್ತಲೇ ಇರುತ್ತದೆ. ಪರಿಣಾಮ ಅತಿಯಾದ ವಾಹನಗಳಿಂದ ಮಾಲಿನ್ಯವೂ ಹೆಚ್ಚಾಗುತ್ತಲೇ ಇದೆ. ವರದಿ ಪ್ರಕಾರ ಶೇಕಡಾ 6 ರಷ್ಟು ಮಾಲಿನ್ಯ ಕೇವಲ ಬಸ್​ಗಳಿಂದ ಉಂಟಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ ಇ-ಬಸ್​ಗಳು ರಸ್ತೆಗೆ ಇಳಿದಿವೆ. ಈ ಪರಿಸರ ಸ್ನೇಹಿ ಇ ಬಸ್​ನ ನಗರ​ ಸಂಚಾರಕ್ಕೆ ಸಚಿವ ಶ್ರೀರಾಮುಲು ಇತ್ತೀಚೆಗೆ ಚಾಲನೆ ನೀಡಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಇ ಕ್ರಾಂತಿಗೆ ಮುನ್ನುಡಿ ಬರೆದ ಕೆಎಸ್ಆರ್‌ಟಿಸಿ.. ಶೂನ್ಯ ಮಾಲಿನ್ಯದತ್ತ ಸಾರಿಗೆ ಸಂಸ್ಥೆ ಚಿತ್ತ

Last Updated : Jan 14, 2023, 7:38 AM IST

ABOUT THE AUTHOR

...view details