ಬೆಂಗಳೂರು : ಬೆಂಗಳೂರು ನಗರದಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಇಂದು ಸಿಎಂ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಿದ ಬಳಿಕ ಸ್ಥಳದಲ್ಲಿಯೇ ಅಗತ್ಯ ಸೂಚನೆ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ಹಿರಿಯ ಅಧಿಕಾರಿಗಳ ಸಭೆ ನಡಿಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಬೊಮ್ಮನಹಳ್ಳಿ, ಮಹದೇವಪುರ ವಲಯಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಈ ಎರಡು ವಲಯಗಳಲ್ಲಿ ತೀವ್ರ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಲಾಗಿದೆ. ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಬಹಳ ದೊಡ್ಡ ಪ್ರಮಾಣದ ಹಾನಿಯಾಗಿದೆ. ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಅಲ್ಲಿ ಚರಂಡಿಗಳ ಮುಂದುವರಿಕೆ ಇಲ್ಲ. ಮುಖ್ಯ ಚರಂಡಿ ಬಡಾವಣೆಯಲ್ಲಿ ಕೊಣೆಯಾಗಿದೆ. ಅದನ್ನೂ ಕೂಡ ತೆರವು ಮಾಡಿ ನೀರಿಗೆ ತನ್ನದೇ ಸಹಜ ಮಾರ್ಗಗಳನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದರು.
ಓಆರ್ಆರ್ ರಸ್ತೆಯಲ್ಲಿ ನೀರು ನಿಂತು, ಕೆಳಗಿನ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನವಸತಿಗೆ ತೊಂದರೆಯಾಗಿದೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ, ಮಹದೇವಪುರ ವಲಯದಲ್ಲಿ 9 ಕಡೆ, ಹಾಗೂ ಬೊಮ್ಮನಹಳ್ಳಿಯಲ್ಲಿ 11 ಕಡೆ ತೊಂದರೆಯಾಗಿದೆ. ಅಲ್ಲಿನ ಸವಳಕೆರೆ ತುಂಬಿ ಹರಿದಿದ್ದು, ಬಹಳ ಸಮಸ್ಯೆಯಾಗಿದೆ. ಓಆರ್ಆರ್ ರಸ್ತೆಯಾಗುವ ಹಂತದಲ್ಲಿ ಮುಖ್ಯ ಕಾಲುವೆ ಒಂದೆಡೆ ಕಟ್ಟಿಕೊಂಡಿದೆ. ನೀರು ನಿಲ್ಲಲು ಇರುವ ಎಲ್ಲಾ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದು, ಪೈಪ್ಲೈನ್ ಅಳವಡಿಸಬೇಕು. ಹಾಗೂ ಓಆರ್ಆರ್ ರಸ್ತೆಯಲ್ಲಿ ನಿಂತಿರುವ ನೀರನ್ನು ಹೊರಚೆಲ್ಲಬೇಕೆಂದು ಸೂಚಿಸಿರುವುದಾಗಿ ಹೇಳಿದರು.