ಕರ್ನಾಟಕ

karnataka

By

Published : Aug 14, 2020, 1:38 AM IST

ETV Bharat / state

ಬೆಂಗಳೂರು ಗಲಭೆಯಲ್ಲಿ ಎಸ್​ಡಿಪಿಐ ಪಾತ್ರ ಮೇಲ್ನೋಟಕ್ಕೆ ಸಾಬೀತು... ರಾಜ್ಯದಲ್ಲಿ ಸಂಘಟನೆ ನಿಷೇಧ!?

ಬೆಂಗಳೂರಿನಲ್ಲಿ ನಡೆದಿರುವ ಗಲಭೆಯಲ್ಲಿ ಎಸ್​​ಡಿಪಿಐ ಪಾತ್ರ ಇರುವುದು ಮೇಲ್ನೋಟಕ್ಕೆ ಸಾಬೀತುಗೊಂಡಿರುವ ಕಾರಣ, ಸಂಘಟನೆ ನಿಷೇಧ ಮಾಡಬೇಕು ಎಂಬ ಕೂಗು ಮತ್ತಷ್ಟು ಗಂಭೀರವಾಗಿ ಕೇಳಿ ಬರಲು ಆರಂಭಿಸಿದೆ.

Bengalore voilence
Bengalore voilence

ಬೆಂಗಳೂರು: ಡಿ.ಜಿ ಹಳ್ಳಿ ಹಾಗೂ‌ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಸಂಚು ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್​ ಇಂಡಿಯಾ (ಎಸ್​ಡಿಪಿಐ ) ಪಕ್ಷದ ಪಾತ್ರವಿದೆ ಎಂಬುದು ಮೇಲ್ನೊಟಕ್ಕೆ ಸಾಬೀತಾಗಿದೆ.

ಇದಕ್ಕೆ‌ ಪೂರಕವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ಈ ಸಂಘಟನೆ ನಿಷೇಧಿಸುವ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಈಗಾಗಲೇ ತಿಳಿಸಿದ್ದಾರೆ. ಇದೀಗ ಬೆಂಗಳೂರು ಗಲಭೆ ಸಂಬಂಧಿಸಿದಂತೆ ಎಸ್​ಡಿಆರ್​ಎಫ್ ಪಕ್ಷದ ಮುಖಂಡ ಮೊಹಮ್ಮದ್ ಮುಜಾಮಿಲ್ ಸೇರಿದಂತೆ ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಗಲಭೆಗೆ ಕುಮ್ಮಕ್ಕು ಆರೋಪ: ಎಸ್​ಡಿಪಿಐ ಮುಖಂಡ ಅರೆಸ್ಟ್​!

ವಿವಿಧ ನಾಯಕರ ಆಗ್ರಹ!

ಇನ್ನೊಂದೆಡೆ ಸಂಸದೆ ಶೋಬಾ ಕರಂದ್ಲಾಜೆ, ಕೇಂದ್ರ ಸಚಿವ ಸದಾನಂದಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ವಿಶ್ವನಾಥ್ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ರಾಜ್ಯದಲ್ಲಿ ಎಸ್​ಡಿಆರ್​ಎಫ್​ ನಿಷೇಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಸ್​ಡಿಪಿಐ ಬ್ಯಾನ್​ಗೆ ಈ ಹಿಂದಿನಿಂದಲೂ ಆಗ್ರಹ

ಈ ಮೂಲಕ ರಾಜ್ಯದಲ್ಲಿ ಎಸ್​ಡಿಪಿಐ ಬ್ಯಾನ್ ಮಾಡಬೇಕೆಂಬ ಕೂಗು ಮತ್ತೆ ಮೊಳಕೆಯೊಡದಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು‌ ನಿಷೇಧ ಮಾಡುವ ಕೂಗು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಹಿಂದೂ ಕಾರ್ಯಕರ್ತರ ಮೇಲಿನ ದಾಳಿ, ಕೋಮು ಗಲಭೆ ನಡೆದಂತಹ ಸಂದರ್ಭದಲ್ಲಿ ಎಸ್​ಡಿಆರ್​ಎಫ್ ಪಕ್ಷದ ಕೈವಾಡವಿರುವ ಆರೋಪ ಕೇಳಿ ಬಂದಿದ್ದವು. ಕಳೆದ ವರ್ಷ ಡಿಸೆಂಬರ್​​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹಲವೆಡೆ ದುಷ್ಕರ್ಮಿಗಳು ಕಲ್ಲು ಎಸೆದು ಗಲಭೆ ಎಬ್ಬಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಇಬ್ಬರ ಮೇಲೆ ಮಂಗಳೂರು ಪೊಲೀಸರು ಗೋಲಿಬಾರ್ ಮಾಡಿದ್ದರು. ಹಿಂಸಾಚಾರ ಹಿಂದೆ ‌ಎಸ್ ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

ಹಲವು ಕೃತ್ಯಗಳಲ್ಲಿ ಸಂಘಟನೆ ಕೈವಾಡ ಸಾಬೀತು!

2016ರಲ್ಲಿ ಕರ್ಮಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆರ್​ಎಸ್​ಎಸ್​​ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಪ್ರಮುಖ ನಾಲ್ಕು ಮಂದಿ ಆರೋಪಿಗಳು ಎಸ್​​ಡಿಪಿಐ ಪಕ್ಷದ ಸದಸ್ಯರಾಗಿದ್ದರು.ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

‌ಅದೇ ರೀತಿ ಕಳೆದ ವರ್ಷ ಮೈಸೂರಿನ‌ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಪಾಷಾ ಮೇಲೆ ನಡೆದ ಕೊಲೆ ಯತ್ನ ಪ್ರಕರಣ ಹಿಂದೆ ಎಸ್​​ಡಿಪಿಐ ಪಕ್ಷದ ಕೈವಾಡದ ಆಪಾದನೆ ಕೇಳಿ ಬಂದಿತ್ತು. ಕೋವಿಡ್ ಸಂಬಂಧಿಸಿದಂತೆ ಕಳೆದ ಏಪ್ರಿಲ್​​ನಲ್ಲಿ ಪಾದರಾಯನಪುರದಲ್ಲಿ ನಡೆದ ಗಲಭೆ ಹಿಂದೆ ಇದೇ ಪಕ್ಷದ ಹೆಸರು ಕೇಳಿ ಬಂದಿತ್ತು‌.

ಕೋಮುಗಲಭೆಯಂತಹ ಹಲವು ಘಟನೆ ನಡೆದಾಗ ಎಸ್​​ಡಿಪಿಐ ಕಾರ್ಯಕರ್ತರ ಹೆಸರು ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ‌ ಈ ಪಕ್ಷ ನಿಷೇಧಿಸಬೇಕೆಂಬ ಒತ್ತಾಯ ಪ್ರಬಲವಾಗಿದೆ.ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ ಹಾಗೂ ರಾಜ್ಯದಲ್ಲಿ‌ ಎಸ್​ಡಿಪಿಐ ಸಕ್ರಿಯವಾಗಿದೆ.

2009ರಲ್ಲಿ ಹುಟ್ಟಿಕೊಂಡಿರುವ ಸಂಘಟನೆ

2009 ರಲ್ಲಿ ಎಸ್​​ಡಿಪಿಐ ಜನ್ಮತಾಳಿದ್ದು, ಇದಕ್ಕೂ ಮುನ್ನ ಸ್ಟೂಡೆಂಟ್ ಇಸ್ಲಾಮಿಕ್ ಮೂವೆಂಟ್ ಆಫ್ ಇಂಡಿಯಾ (ಸಿಮಿ) ಪಕ್ಷ ರಾಜ್ಯದಲ್ಲಿ ಬ್ಯಾನ್ ಆಗಿದ್ದ ಪರಿಣಾಮ ಪರ್ಯಾಯವಾಗಿ ಈ ಸಂಘಟನೆ ಹುಟ್ಟಿಕೊಂಡಿದೆ. ಚುನಾವಣೆಯಲ್ಲಿ ಎಸ್​ಡಿಪಿಐನಿಂದ ಸ್ಪರ್ಧಿಸಿದ ಆಭ್ಯರ್ಥಿಗೆ ಅಲ್ಪಸಂಖ್ಯಾತ ಸಮುದಾಯದಿಂದಲೇ ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಕನಿಷ್ಠ 1000 ರಿಂದ 2000 ಸಾವಿರ ಮತಗಳು ಬೀಳಲಿವೆ ಎಂಬುದನ್ನು ಗಮನಿಸಬಹುದಾಗಿದೆ.

ರಾಜ್ಯದಲ್ಲಿ ಸಂಘಟನೆ ನಿಷೇಧಿಸಬೇಕೆಂದು ಬಿಜೆಪಿ ನಾಯಕರು‌ ಮೊದಲಿನಿಂದಲೂ ಒತ್ತಡ ಮಾಡುತ್ತಲೇ ಇದ್ದಾರೆ. ಸದ್ಯ ಬಿಜೆಪಿ‌ ಸರ್ಕಾರ ಅಧಿಕಾರದಲ್ಲಿದೆ. ಇದೀಗ ಈ ಸಂಘಟನೆ ನಿಷೇಧ ಆಗುವುದೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ABOUT THE AUTHOR

...view details