ಕರ್ನಾಟಕ

karnataka

By

Published : May 5, 2021, 8:22 PM IST

Updated : May 5, 2021, 8:29 PM IST

ETV Bharat / state

ಬೆಡ್ ಬ್ಲಾಕ್​ ದಂಧೆ ಬಯಲಾದ ನಂತರ ಸಾಫ್ಟ್​ವೇರ್ ಬದಲಿಸಲು ಮುಂದಾದ ಬಿಬಿಎಂಪಿ!

ಬೆಡ್ ಬ್ಲಾಕ್ ಮಾಡುವ ಸಾಫ್ಟ್​ವೇರ್ ಹಳೆಯದಾಗಿದ್ದು, ದೋಷಪೂರಿತವಾಗಿದೆ. ಈ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಸಾಫ್ಟ್​ವೇರ್ ಬದಲಾಯಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. ಬೆಡ್​ ಬ್ಲಾಕ್​ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಚುರುಕು ಪಡೆದಿದೆ ಎಂದು ತಿಳಿಸಿದ್ದಾರೆ.

bed-blocking-software-will-be-changed-by-bbmp
bed-blocking-software-will-be-changed-by-bbmp

ಬೆಂಗಳೂರು:ಬಿಬಿಎಂಪಿ ಕಡೆಯಿಂದ ಬೆಡ್ ಬ್ಲಾಕ್ ಮಾಡುವ ಸಾಫ್ಟ್​ವೇರ್ ಹಳೆಯದಾಗಿದ್ದು, ದೋಷಪೂರಿತವಾಗಿದೆ. ಈ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಸಾಫ್ಟ್​ವೇರ್ ಬದಲಾಯಿಸಲಾಗುವುದು. ಆರೋಪ ಕೇಳಿ ಬಂದಿರುವವರ ಬಗ್ಗೆ ಸೂಕ್ತ ತನಿಖೆ, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತರು ನುಣುಚಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ನಗರದ ದಕ್ಷಿಣ ವಲಯದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬೆಡ್​ಗಳು ಅಕ್ರಮವಾಗಿ ಬುಕ್ ಮಾಡುವ ಮೂಲಕ ನಡೆಸಿರುವ ಹಗರಣವನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಸ್ಥಳೀಯ ಶಾಸಕರು ಬಯಲು ಮಾಡಿದ್ದಾರೆ. ಇದರಲ್ಲಿ ಏಜೆನ್ಸಿ ವತಿಯಿಂದ ಬಂದಿರುವ ಸಿಬ್ಬಂದಿ, ಆಸ್ಪತ್ರೆಗಳು ಹಾಗೂ ಪಾಲಿಕೆಯ ಉನ್ನತ ಅಧಿಕಾರಿಗಳ ಪಾತ್ರ ಇರುವ ಬಗ್ಗೆಯೂ ದೂರಿದ್ದಾರೆ. ಆದರೆ ಈವರೆಗೆ ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು, ಇಂದಿಗೂ ಐಸಿಯು, ವೆಂಟಿಲೇಟರ್ ಬೆಡ್​ಗಳು ಜನಸಾಮಾನ್ಯರಿಗೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯೆ

ಇನ್ನೊಂದೆಡೆ ಪೊಲೀಸ್ ಇಲಾಖೆಯಿಂದ ತನಿಖೆ ಚುರುಕು ಪಡೆದಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಈವರೆಗೆ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಒಂದು ಪ್ರಕರಣದಲ್ಲಿ ರೋಹಿತ್ ಕುಮಾರ್ ಹಾಗೂ ನೇತ್ರಾವತಿ, ಮತ್ತೊಂದು ಪ್ರಕರಣದಲ್ಲಿ ಬೊಮ್ಮನಹಳ್ಳಿ ವಲಯದ ಕೊರೊನಾ ವಾರ್ ರೂಂ ಇನ್ಚಾರ್ಜ್ ಡಾ.ಸುರೇಶ್, ಹಾಗೂ ದಕ್ಷಿಣ ವಲಯದ ವಾರ್ ರೂಂ ಇನ್ಚಾರ್ಜ್ ಡಾ.ರೆಹಾನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡಾ‌ ಸುರೇಶ್​ಗೆ ಕೋವಿಡ್ ಪಾಸಿಟಿವ್ ಹಿನ್ನೆಲೆ ಸದ್ಯ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿದ್ದಾರೆ. ಕೇವಲ ಒಂದೇ ವಲಯ ಅಲ್ಲದೆ, ಎಲ್ಲಾ ಎಂಟು ವಲಯಗಳ ಕೋವಿಡ್ ವಾರ್ ರೂಂನಲ್ಲಿ ಬೆಡ್ ಬುಕ್ಕಿಂಗ್ ದಂಧೆ ನಡೆಯುತ್ತಿದ್ದರೆ ತನಿಖೆ ನಡೆಸಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ಇನ್ನು ಬೆಡ್ ದಂಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಈ ಪ್ರಕರಣದಲ್ಲಿ ನಿಗದಿತ 12 ಜನರ ಮೇಲಿನ ಆರೋಪದ ಬಗ್ಗೆ ದೂರು ಬಂದಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಯೂ ಬೇಕಾಗಿದೆ. ನಂತರ ಅಕ್ರಮದ ಬಗ್ಗೆ ತಿಳಿಸಲು ಸಾಧ್ಯ ಎಂದರು.

ನಗರದಲ್ಲಿ ದಿನಕ್ಕೆ ಸುಮಾರು 800ರಿಂದ 1000 ಜನರಿಗೆ ಬೆಡ್ ನೀಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಬೆಡ್ ನಿಗದಿಪಡಿಸಿದ ಕಡೆ ಜನರು ಹೋಗುವುದಿಲ್ಲ. ಮನೆಯ ಪಕ್ಕದ ಆಸ್ಪತ್ರೆಗೆ ದಾಖಲಾಗ್ತಾರೆ. ಆಗ ಬ್ಲಾಕ್ ಮಾಡಿದ ಬೆಡ್, ಅನ್ ಬ್ಲಾಕ್ ಮಾಡಿ, ಬೇರೆಯವರಿಗೆ ನೀಡಲಾಗುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಅನ್ ಬ್ಲಾಕ್ ಮಾಡುವ ಕಡೆ ಅಕ್ರಮ ನಡೆದಿದೆ ಎಂದು ದೂರು ಬಂದಿದೆ. ಇದು ಎಲ್ಲೆಲ್ಲಿ ನಡೆಯುತ್ತಿದೆ ಎಂದು ಗುರುತು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ವರ್ಷ ಡೆವಲಪ್​ ಮಾಡಿರುವ ಸಾಫ್ಟ್​ವೇರ್ ಅಗಿರುವುದರಿಂದ ಈಗ ಎರಡನೇ ಅಲೆಯಲ್ಲಿ ಸಾವಿರಾರು ಪ್ರಕರಣಗಳು ಬರುತ್ತಿರುವ ಹಿನ್ನೆಲೆ, ಸಾಫ್ಟ್​ವೇರ್ ಅಭಿವೃದ್ಧಿಪಡಿಸುವ ಅಗತ್ಯ ಇದೆ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿಯ ರಚನೆ ಆಗಿದೆ. ಪೊನ್ನುರಾಜ್ ಅವರ ಅಧ್ಯಕ್ಷತೆಯಲ್ಲಿರುವ ಸಮಿತಿ ಇಂದು ರಿಪೋರ್ಟ್ ನೀಡಲಿದೆ. ಜೊತೆಗೆ ಕೆಲವು ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಲಾಗಿನ್ ಪ್ರೊಸೆಸ್, ಕೆಲವೇ ಮಷಿನ್​ಗಳಲ್ಲಿ ಮಾತ್ರ ಲಾಗಿನ್ ಮಾಡುವ ಬಗ್ಗೆ ಅಭಿವೃದ್ಧಿಯಾಗುತ್ತಿದೆ ಎಂದರು.

ಕಳೆದ ವರ್ಷ ವಾರ್ ರೂಂಗಳಲ್ಲಿ ಹಲವಾರು ಐಎಎಸ್, ಕೆ.ಎ.ಎಸ್ ಅಧಿಕಾರಿಗಳು ಇದ್ದರು. ಆದರೆ ಈ ವರ್ಷ ವಾಪಸು ಹೋಗಿದ್ದಾರೆ. ಪ್ರತೀ ವಾರ್ ರೂಂನಲ್ಲಿ ಒಬ್ಬರು ಸರ್ಕಾರಿ ಅಧಿಕಾರಿ, ಒಬ್ಬರು ಕೆ.ಎ.ಎಸ್ ಅಧಿಕಾರಿ ಪ್ರತಿನಿತ್ಯ ಇರುವ ಹಾಗೆ ನೋಡಿಕೊಳ್ಳಲಾಗುವುದು. ಎಲ್ಲಾ ಚಟುವಟಿಕೆಗಳ ಮೇಲುಸ್ತುವಾರಿ ಮಾಡಲಿದ್ದಾರೆ ಎಂದು ವಿವರಿಸಿದರು.

17 ಜನರನ್ನು ಮೊದಲೇ ಕೆಲಸದಿಂದ ತೆಗೆದು ಹಾಕಲಾಗಿತ್ತು. ಅವರು ಸದ್ಯ ಕೆಲಸ ಮಾಡುತ್ತಿಲ್ಲ. ಅವರೆಲ್ಲ ಒಂದು ಗುತ್ತಿಗೆ ಸಂಸ್ಥೆ ಮೂಲಕ ತಾತ್ಕಾಲಿಕವಾಗಿ‌ ನೇಮಕ ಆಗಿರುವ ಸಿಬ್ಬಂದಿ. ವಾರ್ ರೂಂನಲ್ಲಿ ಇತರ ನೂರಾರು ಜನ ಸಿಬ್ಬಂದಿ ಕೂಡಾ ಕೆಲಸ ಮಾಡುತ್ತಿದ್ದಾರೆ. ಇತರರ ಬಗ್ಗೆಯೂ ಸ್ಥಳೀಯ ಮಟ್ಟದಲ್ಲಿ, ವಲಯ ಆಯುಕ್ತರ ಮಟ್ಟದಲ್ಲಿ ತನಿಖೆ ನಡೆಯಲಿದೆ. ನಂತರ ಅಕ್ರಮದ ಬಗ್ಗೆ ತಿಳಿದು ಬರಲಿದೆ. ಜನರು ಪಾಲಿಕೆ ಮೇಲೆ ನಂಬಿಕೆ ಇಡಬೇಕು, ಯಾವುದೇ ಅನುಮಾನ ಪಡಬಾರದು ಎಂದು ಬಿಬಿಎಂಪಿ ಆಯುಕ್ತರು ಮನವಿ ಮಾಡಿದರು.

ನೌಕರರನ್ನು ಒದಗಿಸುತ್ತಿರುವ ಏಜೆನ್ಸಿಯನ್ನು ಬದಲು ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಜೊತೆಗೆ ಸಾಫ್ಟ್ ವೇರ್ ಬದಲಾಯಿಸಿ, ಹೊಸ ಸಮರ್ಪಕವಾದ ಸಾಫ್ಟ್​ವೇರ್ ತರಲಾಗುತ್ತದೆ ಎಂದರು.

ಈ ಮಧ್ಯೆಯೇ ಬೆಡ್ ಲಭ್ಯತೆ ಬಗ್ಗೆ ಮಾಹಿತಿ ನೀಡುತ್ತಿದ್ದ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ ಸಾಫ್ಟ್​ವೇರ್​ನ ವೆಬ್​ಸೈಟ್ ಅನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ಮಾಡಲಾಗಿದೆ.

Last Updated : May 5, 2021, 8:29 PM IST

ABOUT THE AUTHOR

...view details