ಬೆಂಗಳೂರು :ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಸೌಜನ್ಯದಿಂದ ಮತ್ತು ಸಮಾಧಾನವಾಗಿ ವರ್ತಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಸೇವೆಯು ಸಾರ್ವಜನಿಕ ಸೇವೆ ಆಗಿರುವುದರಿಂದ ಅವರು ತಮ್ಮ ಸಮಸ್ಯೆ ಕುರಿತು ವ್ಯವಹರಿಸಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಮತ್ತು ಸಮಾಧಾನವಾಗಿ ವರ್ತಿಸಬೇಕು. ಹೀಗೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್ ಸಿ ಹರ್ಷರಾಣಿ ಅವರು ಸುತ್ತೋಲೆ ಹೊರಡಿಸಿದ್ದಾರೆ.
ತಾರತಮ್ಯ ಮಾಡದೆ ಬಂದವರಿಗೂ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಹೇಳುವಂತೆ ಎಲ್ಲಾ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಗೂ ಅಧೀನ ಇಲಾಖೆಗಳ ಮುಖ್ಯಸ್ಥರ ಮೂಲಕ ಎಲ್ಲಾ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸುವಂತೆ ಸೂಚಿಸಿದ್ದಾರೆ.
ಓದಿ:ಜನವರಿ 1ರಿಂದ ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಯೋಜನೆ ಪುನಾರಂಭ
ತಮ್ಮ ಅಹವಾಲು ತೆಗೆದುಕೊಂಡು ಬರುವ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಲ್ಲಿ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲವೆಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೆ '1978 ಆಕ್ಟ್ ' ಎಂಬ ಸಿನಿಮಾ ಬಂದಿತ್ತು. ಆ ಸಿನಿಮಾದಲ್ಲೂ ಇದೇ ರೀತಿಯ ಕಥೆ ಒಳಗೊಂಡಿದೆ. ಸರ್ಕಾರದ ಆದೇಶದಿಂದ ಖುಷಿಯಾಗಿದೆ ಎಂದು ಈ ಚಿತ್ರ ತಂಡ ಹೇಳಿದೆ.