ಕರ್ನಾಟಕ

karnataka

Brand Bengaluru: ಬ್ರ‍್ಯಾಂಡ್ ಬೆಂಗಳೂರು ಕುರಿತ ಪ್ರಮುಖ ಶಿಫಾರಸುಗಳು ಶೀಘ್ರವೇ ಕಾರ್ಯರೂಪಕ್ಕೆ: ಬಿಬಿಎಂಪಿ ವಿಶೇಷ ಆಯುಕ್ತ

By

Published : Jul 27, 2023, 9:12 AM IST

BBMP on Brand Bengaluru: ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ ಶಿಫಾರಸುಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು ಎಂದು ಬಿಬಿಎಂಪಿ ಪಾಲಿಯ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು. ಗೃಹ ಲಕ್ಷ್ಮೀ ಯೋಜನೆಗಾಗಿ 198 ವಾರ್ಡ್​ಗಳಲ್ಲಿ ಸಹಾಯಕ ಕೇಂದ್ರ ಸ್ಥಾಪನೆ ಮಾಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಬ್ರ‍್ಯಾಂಡ್ ಬೆಂಗಳೂರು Brand bengaluru bbmp
ಬ್ರ‍್ಯಾಂಡ್ ಬೆಂಗಳೂರು

ಬೆಂಗಳೂರು: ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ ಜನಹಿತ ಮತ್ತು ಆಕರ್ಷಕ ಬೆಂಗಳೂರು ವಿಷಯಾಧಾರಿತವಾಗಿ ಬರುವ ಪ್ರಮುಖ ಶಿಫಾರಸುಗಳನ್ನು ಪರಿಗಣಿಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದೆಂದು ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹಾಗೂ ಆಕರ್ಷಕ ಬೆಂಗಳೂರಿನ ನೋಡಲ್ ಅಧಿಕಾರಿ ಜಯರಾಮ್ ರಾಯಪುರ ತಿಳಿಸಿದರು. ಬ್ರ‍್ಯಾಂಡ್ ಬೆಂಗಳೂರು ಯೋಜನೆಯಡಿ ರಚಿಸಿರುವ ಸಮಿತಿಯಲ್ಲಿ ಬರುವ ಜನಹಿತ ಮತ್ತು ಆಕರ್ಷಕ ಬೆಂಗಳೂರು ವಿಷಯಾಧಾರಿತ ರಚಿಸಿರುವ ಪ್ರತ್ಯೇಕ ಸಮಿತಿಯ ಜೊತೆ ಬುಧವಾರ ಮೊದಲ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಬ್ರ್ಯಾಂಡ್‌ ಬೆಂಗಳೂರಿಗೆ ಸೌಲಭ್ಯಗಳು: ಆಕರ್ಷಕ ಬೆಂಗಳೂರು ವಿಷಯದಲ್ಲಿ ಮೇಲುಸೇತುವೆಗಳ ಕೆಳಗಿರುವ ಜಾಗವನ್ನು ಜನರ ಅನುಕೂಲಕ್ಕಾಗಿ ಹೇಗೆ ಬಳಸಿಕೊಳ್ಳಬೇಕು, ರಸ್ತೆ ಬದಿ ಆಸನಗಳ ವ್ಯವಸ್ಥೆ, ನಗರದ ಗೋಡೆಗಳ ಮೇಲೆ ನಗರದ ಸಂಸ್ಕೃತಿಯ ಬಗ್ಗೆ ಕಲಾತ್ಮಕವಾಗಿ ಚಿತ್ರಿಸುವುದು, ಪಾರಂಪರಿಕ ತಾಣಗಳ ಚಿತ್ರಣ, ಬೆಂಗಳೂರು/ಸಾಂಸ್ಕೃತಿಕ ಹಬ್ಬಗಳನ್ನು ಮಾಡುವುದು, ಪಾರಂಪರಿಕ ತಾಣಗಳನ್ನು ಪ್ರದರ್ಶಿಸುವ ಆಂಪಿ–ಥಿಯೇಟರ್‌ಗಳ ನಿರ್ಮಾಣ, ಸಾರ್ವಜನಿಕ ಚರ್ಚೆ/ಸಂವಾದಗಳಿಗೆ ತೆರೆದ ಪ್ರದೇಶಗಳ ಬಳಕೆ, ಜನರ ಓದುವ ಹವ್ಯಾಸವನ್ನು ಹೆಚ್ಚಿಸಲು ಪಾಲಿಕೆಯು ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ವಾಚನಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಇನ್ನಿತರ ಆಕರ್ಷಕ ವಿಷಯಗಳ ಕುರಿತು ಶಿಫಾರಸುಗಳನ್ನು ನೀಡಲು ಸಭೆಯಲ್ಲಿ ಮನವಿ ಮಾಡಿದರು.

ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ರೂಪಿಸುವ ಸಲುವಾಗಿ ಬರುವಂತಹ ಶಿಫಾರಸುಗಳನ್ನು ಒಂದು ತಿಂಗಳ ಅವಧಿಯಲ್ಲಿ ಪರಿಗಣಿಸಿ, ಕನಿಷ್ಠ 20 ಯೋಜನೆಗಳನ್ನು ನಿಗದಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಆಕರ್ಷಕ ಬೆಂಗಳೂರನ್ನಾಗಿಸುವ ಸಲುವಾಗಿ ಬರುವಂತಹ ಶಿಫಾರಸುಗಳಲ್ಲಿ ಶಾರ್ಟ್ ಟರ್ಮ್, ಮೀಡಿಯಮ್ ಟರ್ಮ್, ಲಾಂಗ್ ಟರ್ಮ್ ಎಂದು ವಿಂಗಡಿಸಿ ಅದನ್ನು ಇಂತಿಷ್ಟು ದಿನಗಳಲ್ಲಿ ಮುಗಿಸುವ ಯೋಜನೆ ರೂಪಿಸಿಕೊಳ್ಳಬೇಕು. ಈ ಸಂಬಂಧ ಆಕರ್ಷಕ ಬೆಂಗಳೂರಿಗಾಗಿ ರಚಿಸಿರುವ ಪ್ರತ್ಯೇಕ ಸಮಿತಿ ಜೊತೆ 2ನೇ ಸಭೆಯನ್ನು ಆಗಸ್ಟ್ 8 ರಂದು ನಿಗದಿಪಡಿಸಲಾಗಿದ್ದು, ಆ ಸಭೆಯಲ್ಲಿ ಅಂತಿಮವಾದ ಶಿಫಾರಸುಗಳನ್ನು ಸರ್ಕಾರದ ಮುಂದಿದ್ದು, ಅದಕ್ಕೆ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಲಾಗುವುದು ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರಮುಖ ಶಿಫಾರಸುಗಳು:

  • ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್ ನಿರ್ಮಿಸುವುದು. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಪಾರಂಪರಿಕ ಕಾರಿಡಾರ್ ನಿರ್ಮಿಸುವುದು.
  • ಬೆಂಗಳೂರಿನ ಉದ್ಯಮಗಳ ಬಗ್ಗೆ ತಿಳಿಸಲು ವಿಜೃಂಭಣೆಯಿಂದ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಬೆಂಗಳೂರು ಹಬ್ಬವನ್ನು ಆಚರಿಸುವುದು. ಅದೇ ರೀತಿಯಲ್ಲಿ ಜೂನ್ ಅಂತ್ಯದಲ್ಲಿ 7 ದಿನಗಳ ಸಾಂಸ್ಕೃತಿಕ ಉತ್ಸವ ನಡೆಸುವುದು. ಬೆಂಗಳೂರಿನಲ್ಲಿ ಮಾರ್ಚ್ ಮೊದಲ ವಾರದಲ್ಲಿ ಹೂ ಹಬ್ಬ ಆಚರಣೆ.
  • ಜೆ.ಸಿ ರಸ್ತೆಯಲ್ಲಿರುವ ಪಾಲಿಕೆ ಸ್ಥಳದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಸಭಾಂಗಣ ಹಾಗೂ ಆರ್ಟ್ ಗ್ಯಾಲರಿ ನಿರ್ಮಾಣ.
  • ನಗರದಲ್ಲಿ ಪ್ರಮುಖ ಪಾರಂಪರಿಕ ಕಟ್ಟಡ, ಪರಿಸರ ತಾಣಗಳು, ಪ್ರವಾಸಿ ತಾಣಗಳನ್ನು ಗುರುತಿಸುವುದು ಹಾಗೂ ಇವುಗಳ ಐತಿಹಾಸಕತೆಯ ಪರಿಚಯ ಹೇಳುವುದು.
  • ಕೆರೆಗಳ ಹಬ್ಬ, ಪಾರ್ಕ್​​ಗಳಲ್ಲಿ ಓಪನ್ ಥಿಯೇಟರ್​​ಗಳ ಸಮರ್ಪಕ ಬಳಕೆ, ಥಿಯೇಟರ್ ಹಬ್, ಮಕ್ಕಳಿಗಾಗಿಯೇ ಸಾಂಸ್ಕೃತಿಕ ಹಬ್ ನಿರ್ಮಿಸುವುದು.
  • ಮೇಲುಸೇತುವೆಗಳ ಕೆಳಭಾಗವನ್ನು ವಿವಿಧ ಥೀಮ್​​ಗಳಲ್ಲಿ ಅಭಿವೃದ್ಧಿಪಡಿಸುವುದು.
  • ನಗರದ ವಿವಿಧ ಭಾಗಗಳಲ್ಲಿ ಭಾನುವಾರದಂದು ನಾಲ್ಕು ಪಥಗಳಿರುವ ರಸ್ತೆಯಲ್ಲಿ ಎರಡು ಪಥದಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೆರಡು ಪಥವನ್ನು ಬ್ಲಾಕ್ ಮಾಡಿ ಸಾರ್ವಜನಿಕರಿಂದ ಸಮುದಾಯ ಕಾರ್ಯಕ್ರಮಗಳು/ವಿವಿಧ ಚಟುವಟಿಕೆಗಳನ್ನು ಮಾಡಲು ಅನುಕೂಲ ಮಾಡುವುದು.

ಗೃಹ ಲಕ್ಷ್ಮೀ ಯೋಜನೆ- 198 ವಾರ್ಡ್ ಕಚೇರಿಗಳಲ್ಲಿ ಸಹಾಯ ಕೇಂದ್ರ:ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮೀ ಯೋಜನೆಯನ್ನು ಯಶಸ್ವಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 198 ವಾರ್ಡ್ ಕಚೇರಿಗಳಲ್ಲಿ ನೋಂದಣಿ ಹಾಗೂ ಸಹಾಯ ಕೇಂದ್ರಗಳನ್ನು ತೆರೆದು ಅರ್ಜಿ ನೋಂದಾಯಿಸುವ ವ್ಯವಸ್ಥೆ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಿಬಿಎಂಪಿ ವ್ಯಾಪ್ತಿಯಲ್ಲಿ ಯೋಜನೆಯನ್ನು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ನಡೆದ ವರ್ಚ್ಯುವಲ್ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಪಾಲಿಕೆಯ 198 ವಾರ್ಡ್​ಗಳಲ್ಲಿ ಸ್ಥಾಪಿಸುವ ಸಹಾಯ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳು ತೆರಳಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ನೋಂದಾಯಿಸಿ ಫಲಾನುಭವಿಗಳಿಗೆ ಮಂಜುರಾತಿ ಪತ್ರ ನೀಡುವ ಸಲುವಾಗಿ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಬೇಕು. ಜೊತೆಗೆ ಅದಕ್ಕೆ ಬೇಕಾದಂತಹ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಡಿಎ ಬಿಬಿಎಂಪಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಕಡತಗಳನ್ನು ಮನೆ ಬಾಗಿಲಿಗೆ ತಲುಪಿಸಲು ನಿರ್ಧಾರ: ಡಿಕೆಶಿ

ABOUT THE AUTHOR

...view details