ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಹುಡುಗರ ಹಾಸ್ಟೆಲ್ ನಲ್ಲಿ ಕೋವಿಡ್ ಆರೈಕೆ ಕೇಂದ್ರ ಮತ್ತು ಟ್ರಯಾಜಿಂಗ್ ಸೆಂಟರ್ನ್ನು ಆಯುಕ್ತ ಗೌರವ್ ಗುಪ್ತಾ, ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟ್ರಯಾಜ್ ಸೆಂಟರ್ ಮತ್ತು 20 ಹಾಸಿಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಸೌಲಭ್ಯವಿರುವ ಸ್ಥಿರೀಕರಣ ಕೇಂದ್ರಕ್ಕೆ ಮುಖ್ಯ ಆಯುಕ್ತರು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ, ಟ್ರಯಾಜಿಂಗ್ ಸೆಂಟರ್ ನಲ್ಲಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಿಯೋಜಿಸಿರುವ ಬಗ್ಗೆ ವಿಚಾರಿಸಿ ಸದರಿ ಸಿಬ್ಬಂದಿಗೆ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇನ್ನೂ ಹೆಚ್ಚು ಸ್ಥಳಾವಕಾಶವಿದ್ದು, ಇನ್ನೂ 20 ಸಾಮಾನ್ಯ ಹಾಸಿಗೆಗಳ ವ್ಯವಸ್ಥೆ ಮಾಡುವಂತೆ ವಲಯ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ವಿದ್ಯಾಪೀಠ ಆರೋಗ್ಯ ಕೇಂದ್ರದ ಕಾರ್ಯ ಪರಿಶೀಲನೆ
ವಿದ್ಯಾಪೀಠ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ದಿನಕ್ಕೆ ಎಷ್ಟು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಪ್ರಾಥಮಿಕ ಸೋಂಕಿತರ ಪತ್ತೆಕಾರ್ಯ, ಹೋಮ್ ಐಸೋಲೇಷನ್ನಲ್ಲಿರುವವರ ಮೇಲೆ ನಿಗಾವಹಿಸಲಾಗುತ್ತಿರುವ ಜೊತೆಗೆ ಸೀಲ್ ಹಾಕುವ ಹಾಗೂ ಮೆಡಿಕಲ್ ಕಿಟ್ ಒದಗಿಸುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ತಕ್ಷಣ ಮೆಡಿಕಲ್ ಕಿಟ್ ನೀಡಿ ಹೊರಗೆ ಬಾರದೇ ಸ್ವಯಂ ಹೋಮ್ ಐಸೋಲೇಷನ್ ಅಲ್ಲಿರುವಂತೆ ಸೂಚಿಸಬೇಕು ಎಂದು ತಿಳಿಸಿದರು.