ಬೆಂಗಳೂರು :ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ತುರ್ತು ಪರಿಹಾರ ನಿಧಿಗೆ ನೀಡುವ ಘೋಷಣೆ ಮಾಡಿದ್ದಾರೆ.
ಸಿಎಂ ಹಾದಿಯಲ್ಲಿ ಹೋಂ ಮಿನಿಸ್ಟರ್.. 1 ವರ್ಷದ ವೇತನ ಸಿಎಂ ಪರಿಹಾರ ನಿಧಿಗೆ ಕೊಟ್ಟ ಸಚಿವ ಬೊಮ್ಮಾಯಿ.. - basavraj bommai donated his one year salary to cm relief fund
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ ತುರ್ತು ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ಸಂಬಂಳವನ್ನು ನೀಡುವುದಾಗಿ ಘೋಷಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಒಂದು ವರ್ಷದ ಸಂಬಳವನ್ನು ಸಿಎಂ ತುರ್ತು ಪರಿಹಾರ ನಿಧಿಗೆ ನೀಡಿದ್ದಾರೆ. ಜತೆಗೆ ಇತರರಿಗೂ ಸಿಎಂ ಪರಿಹಾರ ನಿಧಿ ನೀಡಲು ಕರೆ ನೀಡಿದ್ದಾರೆ. ಹೀಗಾಗಿ ನಾನೂ ನನ್ನ ಒಂದು ವರ್ಷದ ವೇತನವನ್ನು ಸಿಎಂ ರಿಲೀಫ್ ಫಂಡ್ಗೆ ನೀಡುತ್ತಿದ್ದೇನೆ ಎಂದರು.
ದೆಹಲಿಗೆ ಹೋಗಿದ್ದವರ ಸಂಖ್ಯೆ ಹೆಚ್ಚಳ ಸಾಧ್ಯತೆ :ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಗೆ ಹೋಗಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದವರೇ ಆಗಿರುವ 342 ಮಂದಿ ದೆಹಲಿಗೆ ಹೋಗಿದ್ದಾರೆ ಅನ್ನೋದು ಪತ್ತೆಯಾಗಿದೆ. ಈಗಾಗಲೇ 200 ಮಂದಿಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಳಿದ 142 ಮಂದಿಯನ್ನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಇಂದು ರಾತ್ರಿಯೊಳಗೆ ಎಲ್ಲರನ್ನು ಪತ್ತೆಹಚ್ಚಲು ಸೂಚಿಸಲಾಗಿದೆ.
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದಿದ್ದ 62 ಮಂದಿ ವಿದೇಶಿಗರಲ್ಲಿ 12 ಮಂದಿ ವಾಪಸ್ ಹೋಗಿದ್ದಾರೆ. ಉಳಿದ 50 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ದೆಹಲಿ ಧಾರ್ಮಿಕ ಸಭೆಗೆ ಹೋಗಿದ್ದವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದರು.
ಕೇರಳ ಗಡಿ ಓಪನ್ ಮಾಡಲ್ಲ :ಕೇರಳದಿಂದ ರಾಜ್ಯ ಸಂಪರ್ಕಿಸುವ 23 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಕಾನೂನಿನ ಅಡಿಯಲ್ಲೇ ಗಡಿ ಬಂದ್ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಕೇರಳ ಗಡಿಭಾಗವನ್ನ ಓಪನ್ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಲಾಕ್ಡೌನ್ ವೇಳೆ ಮದ್ಯ ಮಾರಾಟಕ್ಕಿಲ್ಲ ಅವಕಾಶ :ಏನೇ ಒತ್ತಡ ಬಂದರೂ ಮದ್ಯ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ. ಈಗಾಗಲೇ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ. ಹೀಗಾಗಿ ಒಂದು ವಾರ ಸುಮ್ಮನೆ ಇದ್ದರೆ ಏನೂ ಆಗಲ್ಲ. ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದರು.