ಕರ್ನಾಟಕ

karnataka

ETV Bharat / state

ವಿನಯ್ ಕುಲಕರ್ಣಿ ಮೇಲೆ ಆರೋಪವಿರಬಹುದು, ಆದರೆ ಅಪರಾಧಿಯಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ರಾಜಕೀಯ ಕಾರಣಕ್ಕಾಗಿ ಇಂತಹ ಪ್ರಯತ್ನ ನಡೆದಿದ್ದು, ಇಡೀ ಲಿಂಗಾಯತ ಸಮುದಾಯ ಇದನ್ನ ಖಂಡಿಸುತ್ತದೆ. ಚುನಾವಣೆ ಬಂದಾಗ ರಾಜಕೀಯ ಸಹಜ. ಆದರೆ ಬೇರೊಂದು ಪ್ರಕರಣದಲ್ಲಿ ಸಿಲುಕಿಸುವುದು ಸರಿಯಲ್ಲ. ಯಾವುದೇ ಸರ್ಕಾರವಿದ್ದರೂ ಸರಿಯೇ, ದುರುದ್ದೇಶಪೂರಿತವಾಗಿ ಮಾಡಬಾರದು. ದ್ವೇಷದ ರಾಜಕೀಯ ಧಾರವಾಡದಲ್ಲಿದೆ ಎಂದು ಪಂಚಮಸಾಲಿ ಮಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

By

Published : Nov 5, 2020, 6:40 PM IST

Basava Jayamritunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲೆ ಆರೋಪವಿರಬಹುದು, ಆದರೆ ಅವರು ಅಪರಾಧಿಯಲ್ಲ. ಅವರ ರಾಜಕೀಯ ವ್ಯವಸ್ಥೆ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ಪಂಚಮಸಾಲಿ ಮಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಠಾಣೆಗೆ ಅವರನ್ನ‌ ಕರೆದೊಯ್ಯಲಾಗಿದೆ. ಉತ್ತಮ ಮನೆತನದ ವ್ಯಕ್ತಿಯಾಗಿದ್ದು, ಮಾಜಿ ಸಚಿವರಾಗಿ ಕೆಲಸ ಮಾಡಿದವರು. ನೊಟೀಸ್ ನೀಡದೆ ಅವರನ್ನ ವಶಕ್ಕೆ ಪಡೆದಿದ್ದಾರೆ. ಇದು ನಮ್ಮ ಸಮಾಜಕ್ಕೆ ನೋವು ತಂದಿದ್ದು, ಇದನ್ನ ಪಂಚಮಸಾಲಿ ಸಮುದಾಯ ತೀರ್ವವಾಗಿ ಖಂಡಿಸುತ್ತದೆ ಎಂದರು.

ರಾಜಕೀಯ ಕಾರಣಕ್ಕಾಗಿ ಇಂತಹ ಪ್ರಯತ್ನ ನಡೆದಿದ್ದು, ಇಡೀ ಲಿಂಗಾಯತ ಸಮುದಾಯ ಇದನ್ನ ಖಂಡಿಸುತ್ತದೆ. ಚುನಾವಣೆ ಬಂದಾಗ ರಾಜಕೀಯ ಸಹಜ. ಆದರೆ ಬೇರೊಂದು ಪ್ರಕರಣದಲ್ಲಿ ಸಿಲುಕಿಸುವುದು ಸರಿಯಲ್ಲ. ಯಾವುದೇ ಸರ್ಕಾರವಿದ್ದರೂ ಸರಿಯೇ, ದುರುದ್ದೇಶಪೂರಿತವಾಗಿ ಮಾಡಬಾರದು. ದ್ವೇಷದ ರಾಜಕೀಯ ಧಾರವಾಡದಲ್ಲಿದೆ. ಸಿಎಂ ಅವರು ನಮ್ಮ ಸಮುದಾಯದವರೇ. ಆದರೆ ನಮ್ಮ‌ ಸಮುದಾಯದವರ ಮೇಲೆ ಈ ರೀತಿ ನಡೆದಿದೆ. ನೊಟೀಸ್ ನೀಡದೆ ಅವರನ್ನ ವಶಕ್ಕೆ ಪಡೆದಿದ್ದು ಹೇಗೆ?. ವಿನಯ್ ಕುಲಕರ್ಣಿ ಜೊತೆ ನಾವು ನಿಲ್ತೇವೆ. ಅವರ ಕುಟುಂಬದ ಪರವಾಗಿ ನಾವು ಇರುತ್ತೇವೆ ಎಂದರು.

ಆರೋಪವಿದ್ದರೆ ಕಾನೂನಿದೆ, ಅದು ನೋಡಿಕೊಳ್ಳಲಿದೆ. ಅವರನ್ನ ವಿಚಾರಣೆಗೆ ತೆಗೆದುಕೊಂಡ ರೀತಿ ಸರಿಯಲ್ಲ, ಸತ್ಯಾಸತ್ಯ ಹೊರಬರಲಿದೆ. ಎಫ್​ಐಆರ್ ನಲ್ಲೂ ಕುಲಕರ್ಣಿ ಹೆಸರಿಲ್ಲ, ಕೋರ್ಟ್ ಗೆ ನೀಡಿರುವ ದಾಖಲೆಗಳಲ್ಲೂ ಅವರ ಹೆಸರಿಲ್ಲ. ಆದರೆ ಈಗ ಏಕಾಏಕಿ ವಶಕ್ಕೆ ಪಡೆದಿದ್ದು ಹೇಗೆ. ನೊಟೀಸ್ ನೀಡದೆ ವಶಕ್ಕೆ ಪಡೆದಿದ್ದು ಸರಿಯಲ್ಲ. ಅವರನ್ನ ಅವಮಾನವಾಗುವಂತೆ ನಡೆದುಕೊಳ್ಳಲಾಗಿದೆ. ಮುಂದೆ ಸರಿಯಾದ ಉತ್ತರವನ್ನ ಸಮಾಜ ಕೊಡಲಿದೆ ಎಂದಿದ್ದಾರೆ.

ಸರ್ಕಾರದ ಬಗ್ಗೆ ಮಾತನಾಡಲ್ಲ:

ಸಿಬಿಐ ತನಿಖೆ ವೇಳೆ ನೊಟೀಸ್ ಕೊಡಬೇಕು. 600 ಜನರನ್ನ ಸಿಬಿಐ ವಿಚಾರಣೆಗೊಳಪಡಿಸಿದೆ. ಎಲ್ಲರಿಗೂ ನೊಟೀಸ್ ಕೊಟ್ಟು ವಿಚಾರಣೆ ಮಾಡಿದ್ದು, ಕೆಲವರಿಗೆ ಫೋನ್ ಮೂಲಕ ವಿಚಾರಿಸಿದ್ದಾರೆ. ಇದು ಸರಿಯಲ್ಲ ಮನಸ್ಸಿಗೆ ನೋವಾಗಿದ್ದು, ಸಮುದಾಯಕ್ಕೂ ಇದು ಅಸಮಾಧಾನ ತಂದಿದೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ಕೆಲಸ ನಡೆದಿದೆ. ಸರ್ಕಾರದ ಬಗ್ಗೆ ನಾನು‌ ಮಾತನಾಡಲ್ಲ. ವಿನಯ್ ಕುಲಕರ್ಣಿಯವರದ್ದು ಏನೂ ತಪ್ಪಿಲ್ಲ. ಪ್ರಭಾವಿ ನಾಯಕರೊಬ್ಬರು ಇಂತ ಪ್ರಯತ್ನ ಮಾಡಿದ್ದಾರೆ. ಅವರ ಹೆಸರನ್ನ ನಾನು ಹೇಳಲ್ಲ. ಅವರ ಬಗ್ಗೆಯೂ ನಮಗೆ ಉತ್ತಮ ಅಭಿಪ್ರಾಯವಿದೆ ಎಂದರು.

ವಿಚಾರಣೆಗೆ ಮುಕ್ತ ಅವಕಾಶ ಇದೆ:

ಸಿಬಿಐ ಅಂದರೆ ಸತ್ಯಶೋಧನಾ ತಂಡ, ವಿಚಾರಣೆ ಮಾಡಲು ಮುಕ್ತ ಅವಕಾಶವಿದೆ. ಆದರೆ ರೌಡಿಗಳ ರೀತಿ ಅವರನ್ನ ಎಳೆದೊಯ್ದಿದ್ದಾರೆ. ಇದು ಸರಿಯಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಮುಖ್ಯಮಂತ್ರಿ ಬಿಎಸ್ ವೈ ಅವರನ್ನ‌ ಸ್ಥಾನದಿಂದ ಕೆಳಗಿಳಿಸುವ ವಿಚಾರ ಕುರಿತು ಮಾತನಾಡಿ, ಅಂತಹ ಸಂದರ್ಭ ಬಂದರೆ ನಮ್ಮ ಸಮುದಾಯಕ್ಕೆ ಕೊಡಬೇಕು. ಅದು ಅವರ ಪಕ್ಷದ ನಿರ್ಧಾರ, ಹಾಗೊಂದು ವೇಳೆ ಆದರೆ ಉತ್ತರ ಕರ್ನಾಟಕದವರಿಗೆ ಕೊಡಲಿ. ಯಡಿಯೂರಪ್ಪನವರೂ ಇದಕ್ಕೆ ಒಪ್ಪಿಗೆ ಕೊಡಬೇಕು. ಆಗ ನಾನು ಉತ್ತರಕರ್ನಾಟಕ್ಕೆ ಕೊಡಿ‌ ಅಂತೇನೆ. ಆದರಲ್ಲೂ ನಮ್ಮ ಸಮುದಾಯಕ್ಕೆ ಕೊಡಿ ಅನ್ನುತ್ತೇನೆ ಎಂದರು.

ABOUT THE AUTHOR

...view details