ಕರ್ನಾಟಕ

karnataka

By

Published : Oct 26, 2020, 6:34 PM IST

ETV Bharat / state

ಮದ್ಯ ಪ್ರಿಯರಿಗೆ ಶಾಕ್​​: ಇಂದಿನಿಂದ ಎರಡು ದಿನಗಳ ಕಾಲ 'ಎಣ್ಣೆ' ಅಂಗಡಿ ಬಂದ್

ದಿನಾಂಕ: 28/10/2020 ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ನಡೆಯಲಿರುವ ಕಾರಣದಿಂದಾಗಿ ಮತ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮದ್ಯದಂಗಡಿಗಳನ್ನು ಎರಡು ದಿನಗಳ ಕಾಲ ಬಂದ್​ ಮಾಡುವಂತೆ ಆದೇಶಿಸಲಾಗಿದ್ದು, ಸಾರ್ವಜನಿಕ ಸಭೆ, ಮೆರವಣಿಗೆ ಹಾಗೂ ಇನ್ನಿತರ ಚುನಾವಣಾ ಸಂಬಂಧ ಕಾರ್ಯಗಳನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

File Photo
ಸಂಗ್ರಹ ಚಿತ್ರ

ಬೆಂಗಳೂರು:ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ಅ.28ರಂದು ನಡೆಯುತ್ತಿರುವ ಹಿನ್ನೆಲೆ, ಚುನಾವಣೆ ನಡೆಯುವ ಮತ ಕೇಂದ್ರಗಳ ಸುತ್ತಮುತ್ತವಿರುವ ಮದ್ಯದಂಗಡಿ ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

ಇಂದು ಸಂಜೆ 5 ಗಂಟೆಯಿಂದ ಅ.28ರ ಮಧ್ಯರಾತ್ರಿವರೆಗೆ ಮದ್ಯದಂಗಡಿಯ ಬಾಗಿಲು ಬಂದ್ ಆಗಿರಲಿದೆ. ಬೆಂಗಳೂರು ಗ್ರಾಮಾಂತರ, ನಗರ ಸೇರಿದಂತೆ ಒಟ್ಟು 39 ಮತ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ಶಾಂತಿಯುತವಾಗಿ ನಡೆಯಲು ಮದ್ಯದಂಗಡಿ ಬಂದ್ ಮಾಡುವಂತೆ ಚುನಾವಣಾ ಆಯೋಗ ಸೂಚನೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾನವು ದಿನಾಂಕ: 28/10/2020 ರಂದು ಬೆಳಿಗ್ಗೆ 8:00 ರಿಂದ ಸಂಜೆ 5:00 ಗಂಟೆಯವರೆಗೂ ನಡೆಯಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 4 ತಾಲ್ಲೂಕುಗಳ ಒಟ್ಟು 17 ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸಲಿದ್ದು, ಮತದಾನವು ಶಾಂತಿ, ಮುಕ್ತ,‌ ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ದಿನಾಂಕ:26/10/2020 ರ ಸಂಜೆ 5:00 ರಿಂದ ಮತದಾನ ನಡೆಯುವ ದಿನಾಂಕ 28/ 10/2020 ರ ಸಂಜೆ 5:00 ಗಂಟೆಯವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಯಾವುದೇ ಮತ ಕ್ಷೇತ್ರಗಳಲ್ಲಿ ಯಾವುದೇ ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆ ನಡೆಸುವುದಾಗಲೀ, ಮೆರವಣಿಗೆ ಮಾಡುವುದಾಗಲಿ ಹಾಗೂ ಯಾವುದೇ ಸಭೆಗೆ ಹಾಜರಾಗುವುದಾಗಲೀ ನಿರ್ಬಂಧಿಸಿದೆ ಹಾಗೂ ಎಲ್ಲಾ ಬಹಿರಂಗ ಪ್ರಚಾರಗಳನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ರಾಜಕೀಯ ಪಕ್ಷಗಳಿಂದ ಹಾಗೂ ಅಭ್ಯರ್ಥಿಗಳಿಂದ ಯಾವುದೇ ಪ್ರಚಾರ ಕೈಗೊಳ್ಳಲು ನಿರ್ಬಂಧಿಸಿದೆ. ಆದರೆ 5 ಜನರಿಗೆ ಸೀಮಿತಗೊಳಿಸಿ ಮನೆ ಮನೆ ಭೇಟಿ ನೀಡಿ ಪ್ರಚಾರಕ್ಕೆ ಮಾತ್ರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಪಕ್ಷದ ಕಾರ್ಯಕರ್ತರು, ಪ್ರಚಾರ ಮತ್ತು ಸಭೆಗಳನ್ನು ನಿರ್ವಹಿಸುವವರು ಮುಂತಾದವರು, ಹೊರಗಿನ ಕ್ಷೇತ್ರದವರು, ಕ್ಷೇತ್ರದ ಮತದಾರರಲ್ಲದವರು ಯಾರೂ ಸಹ ಕ್ಷೇತ್ರದ ವ್ಯಾಪ್ತಿಯ ಒಳಗೆ ಇರತಕ್ಕದ್ದಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕರಿಗೆ ಸಿನಿಮಾ, ದೂರದರ್ಶನ ಹಾಗೂ ಇತರೆ ಮಾಧ್ಯಮಗಳ ಮೂಲಕ ಅಂದರೆ ಮೊಬೈಲ್, ರೇಡಿಯೋ ಹಾಗೂ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ರಾಜಕೀಯ ಚರ್ಚೆಗಳು, ವಿಶ್ಲೇಷಣೆ, ದೃಶ್ಯ ಅಥವಾ ಆಡಿಯೋ ಬೈಟ್ ಗಳನ್ನು ಪ್ರಚಾರ ಮಾಡತಕ್ಕದ್ದಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ135ಸಿ ರ ಅನ್ವಯ ದಿನಾಂಕ: 26/10/2020ರ ಸಂಜೆ 5:00 ಗಂಟೆಯಿಂದ ದಿನಾಂಕ: 28/10/2020ರ ಮಧ್ಯರಾತ್ರಿ 12:00 ಗಂಟೆಯವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿರ್ಬಂಧಿಸಿ ಒಣ ದಿನಗಳನ್ನು (ಡ್ರೈ ಡೇಸ್) ಘೋಷಿಸಿದೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಈ ಅವಧಿಯಲ್ಲಿ ಮುಚ್ಚಲು ಆದೇಶಿಸಿದೆ. ಇದಲ್ಲದೇ ಈ ಅವಧಿಯಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕಗಳನ್ನು ಬಳಸತಕ್ಕದ್ದಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ರಮವಾಗಿ ಮದ್ಯ ಸರಬರಾಜು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಆಯಾ ಠಾಣೆಗಳ ಇನ್​​ಸ್ಪೆಕ್ಟರ್​​ಗಳಿಗೆ ಕಮೀಷನರ್ ಕಮಲ್​ ಪಂತ್​ ತಾಕೀತು ಮಾಡಿದ್ದಾರೆ.

ABOUT THE AUTHOR

...view details