ಕರ್ನಾಟಕ

karnataka

ಕಾವೇರಿ ನೀರು ಪೂರೈಕೆ ಘಟಕ ದುರಸ್ತಿ, ಕುಡಿಯುವ ನೀರಿಗೆ ಆತಂಕ ಬೇಡ: ಸಿಎಂ ಬೊಮ್ಮಾಯಿ

By

Published : Sep 7, 2022, 8:54 AM IST

ಬೆಂಗಳೂರಿಗೆ ನೀರು ಪೂರೈಸುತ್ತಿದ್ದ ಪಂಪ್ ಹೌಸ್​ಗಳು ದುರಸ್ತಿಯಾಗಿದ್ದು, ಮಹಾನಗರದ ನಾಗರಿಕರು ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

Bangalore water problem
ಸಿಎಂ ಬೊಮ್ಮಾಯಿ

ಬೆಂಗಳೂರು:ಮಳೆ ನೀರು ನುಗ್ಗಿ ಸ್ಥಗಿತಗೊಂಡಿದ್ದ ಕಾವೇರಿ ನೀರು ಸರಬರಾಜು ಮಾಡುವ ಪಂಪ್ ಹೌಸ್​ಗಳು ದುರಸ್ತಿಯಾಗಿದ್ದು, ಬುಧವಾರ ಬೆಳಗ್ಗೆಯಿಂದಲೇ ಕಾರ್ಯನಿರ್ವಹಣೆ ಮಾಡಲಿವೆ. ಮಹಾನಗರದ ನಾಗರಿಕರು ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಆತಂಕಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಆರ್‌ ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ನೀರು ನುಗ್ಗಿದ್ದರಿಂದ ಎರಡು ಪಂಪ್ ಹೌಸ್ ಸ್ಥಗಿತವಾಗಿತ್ತು. 550 ಎಂಎಲ್​ಡಿ ಸಾಮರ್ಥ್ಯದ ನಾಲ್ಕನೇ ಹಂತದ ನೀರು ಘಟಕ ಈಗ ಪ್ರಾರಂಭವಾಗಿದೆ. 330 ಎಂಎಲ್​ಡಿ ಪಂಪ್ ಕೂಡ ಆದಷ್ಟು ಬೇಗ ಸರಿಯಾಗಲಿದ್ದು, ಬುಧವಾರ ಬೆಳಗ್ಗೆಯಿಂದ ನೀರು ಪೂರೈಕೆ ಮಾಡಲಿದೆ. ಹಾಗಾಗಿ ನಗರದ ನಾಗರಿಕರು ಯಾವುದೇ ರೀತಿಯಲ್ಲಿ ಆತಂಕಪಡಬೇಕಿಲ್ಲ. ಇಷ್ಟು ತ್ವರಿತವಾಗಿ ದುರಸ್ತಿ ಮಾಡಿದ ಜಲಮಂಡಳಿ, ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕುಡಿಯುವ ನೀರಿಗೆ ಆತಂಕ ಬೇಡ : ಸಿಎಂ ಬೊಮ್ಮಾಯಿ

ಸರಿರಾತ್ರಿ ನಗರ ಸಂಚಾರ ನಡೆಸಿ ಎರಡು ಮೂರು ಪ್ರಮುಖ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. 24 ಗಂಟೆಯೂ ನಿರಂತರವಾಗಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಏಕಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾದ ಕಾರಣ ಈ ಸಮಸ್ಯೆ ಆಗಿದೆ. ಮಹದೇವಪುರದಲ್ಲಿ ಕೆರೆಗಳ ಸಂಖ್ಯೆ ಹೆಚ್ಚು ಇರುವುದರಿಂದ ಅಲ್ಲಿ ಸಮಸ್ಯೆಯಾಗಿದೆ.

ಪ್ರತಿಪಕ್ಷಗಳಿಗೂ ಮನವಿ ಮಾಡುತ್ತೇನೆ, ಇದು ರಾಜಕಾರಣ ಮಾಡುವ ಸಮಯವಲ್ಲ. ಎಲ್ಲರೂ ಒಂದಾಗಿ ಇರಬೇಕಾದ ಸಂದರ್ಭ. ಹಾಗಾಗಿ ನಿಮ್ಮ ಸಹಕಾರ ಬೇಕು ಪಾಲಿಕೆ, ಜಲಮಂಡಳಿಯ ಹಿಂದಿನ ಅಧಿಕಾರಿಗಳಿಗೆ ಸಲಹೆ ಸೂಚನೆ ಕೊಡಿ. ಸಾರ್ವಜನಿಕರೂ ಒಳ್ಳೆಯ ಸಲಹೆ ಕೊಟ್ಟರೆ ಸ್ವೀಕಾರ ಮಾಡಲಿದ್ದೇವೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ :ಬೆಂಗಳೂರು ಪೂರ್ತಿ ಮುಳುಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ABOUT THE AUTHOR

...view details