ಕರ್ನಾಟಕ

karnataka

By

Published : May 12, 2021, 2:12 PM IST

ETV Bharat / state

ಲಾಕ್​​ಡೌನ್ ಸಂದರ್ಭ ಹಳ್ಳಿಗಳಿಗೆ ವಾಪಸಾದ ವಲಸಿಗರು.. ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲ..

ಈಗ ಮತ್ತೆ ಲಾಕ್ಡೌನ್‌ ಆಗಿದೆ. ಕೊರೊನಾ ಮೊದಲ ಅಲೆ ಕಡಿಮೆಯಾಗಿದ್ದರಿಂದ ಮತ್ತೆ ನಿಧಾನವಾಗಿ ಹಳ್ಳಿಗಳಿಂದ ನಗರಕ್ಕೆ ವಾಪಸಾಗುತ್ತಿದ್ದ ರೈತ ಕುಟುಂಬಗಳಿಗೆ ಎರಡನೇ ಅಲೆ ಅಬ್ಬರದಿಂದ ತತ್ತರಿಸುವಂತೆ ಮಾಡಿದೆ. ಹಾಗಾಗಿ, ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದಾರೆ..

Bangalore
ವಲಸಿಗರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲ

ಬೆಂಗಳೂರು : ಮಹಾಮಾರಿ ಕೊರೊನಾ ಸೋಂಕಿನ 2ನೇ ಅಲೆಗೆ ತತ್ತರಿಸಿದ ಜನ ನಗರ ಬಿಟ್ಟು ತಮ್ಮ ತಮ್ಮ ಹಳ್ಳಿಗಳ ಕಡೆ ವಲಸೆ ಹೋಗಿದ್ದಾರೆ.

ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿಗಳು ಸೇರಿ ನಗರದಲ್ಲಿ ಸಣ್ಣ ಸಣ್ಣ ಕೆಲಸ ಮಾಡಿಕೊಂಡಿದ್ದ ಸಾವಿರಾರು ಮಂದಿ ಗುಳೆ ಹೋಗಿದ್ದಾರೆ. ಹಳ್ಳಿಗಳಲ್ಲೇ ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.

ಆದರೆ, ಕಳೆದ ವರ್ಷದ ಲಾಕ್​​ಡೌನ್ ಸಂದರ್ಭದಲ್ಲಿ ಹಳ್ಳಿಗಳಿಗೆ ತೆರಳಿದ ವಲಸಿಗ ರೈತರಲ್ಲಿ ಶೇ.10ರಷ್ಟು ಮಂದಿ ಅಲ್ಲಿಯೇ ಬದುಕು ಕಟ್ಟಿಕೊಳ್ಳಲು ಇನ್ನೂ ಪರದಾಡುತ್ತಿದ್ದಾರೆ.

ಇದೀಗ ಕೊರೊನಾ 2ನೇ ಅಲೆಯಿಂದಾಗಿ ತೆರಳಿರುವ ವಲಸಿಗ ರೈತರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಎದುರಾಗಿದೆ.

ಶೇ.17 ರಷ್ಟು ಜನರಿಗೆ ಮಾತ್ರ ಸವಲತ್ತು :ಕಳೆದ ವರ್ಷ ಬಹುತೇಕ ಮಂದಿಗೆ ಸರ್ಕಾರಿ ಸೌಲಭ್ಯಗಳು, ಸವಲತ್ತುಗಳು ಇನ್ನೂ ಸಿಕ್ಕಿಲ್ಲ. ಇನ್ನು, ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಶೇ.17ರಷ್ಟು ಜನರಿಗೆ ಮಾತ್ರ ಸಿಕ್ಕಿದೆ. ಶೇ.23ರಷ್ಟು ರೈತರಿಗೆ ಮಾತ್ರ ನರೇಗಾ ಯೋಜನೆಯಿಂದ ಅವಕಾಶ ದೊರೆತಿದೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಶೇ.53 ರಷ್ಟು ರೈತರು ಹಾಗೂ ಶೇ.20ರಷ್ಟು ರೈತರಿಗೆ ಮಾತ್ರ ಬೆಳೆ ವಿಮೆ ಸೌಲಭ್ಯ ದೊರೆತಿದೆ ಎಂಬುದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಈಗ ಮತ್ತೆ ಲಾಕ್​​ಡೌನ್‌ ನಡೀತಿದೆ. ಹಳ್ಳಿ ಸೇರಿರುವ ರೈತರಿಗೆ ಬದುಕು ಕಟ್ಟಿಕೊಡುವ ಅವಕಾಶವನ್ನು ಕಲ್ಪಿಸಿಕೊಡುವ ಸವಾಲು ಸರ್ಕಾರದ ಮುಂದಿದೆ. ಕಳೆದ ವರ್ಷ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿದ ವಲಸಿಗರಲ್ಲಿ ಶೇ.19ರಷ್ಟು ಜನರು ರೈತ ಕುಟುಂಬಗಳಿಗೆ ಸೇರಿದವರಾಗಿದ್ದರು.

ಸುಮಾರು 8ರಿಂದ 10 ಲಕ್ಷ ರೈತ ಕುಟುಂಬಕ್ಕೆ ಸೇರಿದವರು ನಗರಗಳಿಂದ ಮರು ವಲಸೆ ಹೋಗಿದ್ದರು. ಅವರಲ್ಲಿ ಶೇ.23ರಷ್ಟು ಜನರು ಉತ್ತರಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸೇರಿದವರಾಗಿದ್ದಾರೆ.

ಹಳ್ಳಿಗಳಿಗೆ ತೆರಳಿದ ಶೇ.19ರಷ್ಟು ಜನರಲ್ಲಿ ಶೇ.10ರಷ್ಟು ಜನರು ನಗರ ಪ್ರದೇಶಗಳಿಗೆ ವಾಪಸ್‌ ಬರದೆ ತಮ್ಮ ತಮ್ಮ ಊರುಗಳಲ್ಲೇ ಏನಾದರೂ ಉದ್ಯೋಗ ಮಾಡಿಕೊಂಡು ಇರಲು ಬಯಸಿದ್ದಾರೆ.

ಆದರೆ, ರಾಜ್ಯ ಸರ್ಕಾರ ಹಳ್ಳಿಗಳಿಗೆ ತೆರಳಿದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಲಾಕ್‌ಡೌನ್‌ ಸಮಯ ಹಾಗೂ ನಂತರ ರಾಜ್ಯ ಸರ್ಕಾರ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ನೆರವು ನೀಡಿರುವ ಬಗ್ಗೆ ಶೇ. 45ರಷ್ಟು ಜನರು ಮಾತ್ರ ತೃಪ್ತಿ ವ್ಯಕ್ತಪಡಿಸಿದ್ದು, ಶೇ.55ರಷ್ಟು ಜನರು ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರಾಟವಾಗದ ಉತ್ಪನ್ನ :ಕಳೆದ ವರ್ಷ ಲಾಕ್ಡೌನ್‌ ಘೋಷಣೆ ಮಾಡಿದ ಸಂದರ್ಭದಲ್ಲಿ ರಾಜ್ಯದ ರೈತರು ಹಿಂಗಾರು ಬೆಳೆ ಉತ್ತಮವಾಗಿ ಬಂದಿದ್ದರೂ ಶೇ.30ರಷ್ಟು ರೈತರು ಮಾತ್ರ ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗಿದೆ.

ಶೇ.17ರಷ್ಟು ಉತ್ಪನ್ನ ಮಾರಾಟವಾಗದೆ ಸಂಪೂರ್ಣ ಕೊಳೆತು ನಾಶವಾಗಿದೆ. ಶೇ.6ರಷ್ಟು ರೈತರಿಗೆ ಮಾತ್ರ ಸಾಮಾನ್ಯ ದರ ಸಿಕ್ಕಿದ್ದು, ಶೇ. 94 ರಷ್ಟು ರೈತರಿಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಿದ್ದಾರೆ.

ಲಾಕ್ಡೌನ್‌ ಸಂದರ್ಭದಲ್ಲಿ ರೈತರಿಗೆ ಸರ್ಕಾರದ ಕೃಷಿ, ನೀರಾವರಿ, ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಗಳಿಂದ ಸೂಕ್ತ ಮಾಹಿತಿ ದೊರೆತಿರುವ ಬಗ್ಗೆ ಶೇ.49ರಷ್ಟು ರೈತರು ಮಾತ್ರ ಸಹಮತ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಸೂಕ್ತ ಸಾಲ ಸಿಗದಿರುವ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಎಲ್ಲ ರೈತರಿಗೂ ಸಾಲ ಸಿಗದಿರುವ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಸಿಗದೆ ನಷ್ಟ ಅನುಭವಿಸಿರುವ ಬಗ್ಗೆ ರೈತರು ಸಮೀಕ್ಷೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳ್ಳಿಗಳಲ್ಲಿ ಪರ್ಯಾಯ ಉದ್ಯೋಗ ನೀಡುವಲ್ಲಿ ವಿಫಲ :ಲಾಕ್​​ಡೌನ್‌ ಸಂದರ್ಭದಲ್ಲಿ ಹಳ್ಳಿಗಳಿಗೆ ಮರು ವಲಸೆ ಹೋದ ರೈತ ಕುಟುಂಬಗಳು ಹಾಗೂ ಕಾರ್ಮಿಕರಿಗೆ ರಾಜ್ಯ ಸರ್ಕಾರ ಹಳ್ಳಿಗಳಲ್ಲಿಯೇ ಪರ್ಯಾಯ ಉದ್ಯೋಗ ಒಗದಿಸುವಲ್ಲಿ ವಿಫಲವಾಗಿದೆ.

ಈಗ ಮತ್ತೆ ಲಾಕ್ಡೌನ್‌ ಆಗಿದೆ. ಕೊರೊನಾ ಮೊದಲ ಅಲೆ ಕಡಿಮೆಯಾಗಿದ್ದರಿಂದ ಮತ್ತೆ ನಿಧಾನವಾಗಿ ಹಳ್ಳಿಗಳಿಂದ ನಗರಕ್ಕೆ ವಾಪಸಾಗುತ್ತಿದ್ದ ರೈತ ಕುಟುಂಬಗಳಿಗೆ ಎರಡನೇ ಅಲೆ ಅಬ್ಬರದಿಂದ ತತ್ತರಿಸುವಂತೆ ಮಾಡಿದೆ. ಹಾಗಾಗಿ, ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ಈ ಬಾರಿ ಹಳ್ಳಿಗಳಲ್ಲೂ ಕೊರೊನಾ ಅಬ್ಬರ ಜೋರಾಗಿದೆ. ಇದರಿಂದಾಗಿ ವಲಸೆ ಹೋಗಿರುವ ಕುಟುಂಬಗಳು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿಯೇ ಮರು ವಲಸಿಗರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ಕಡೆ ಹೆಚ್ಚಿನ ಆದ್ಯತೆ ನೀಡಬೇಕೆಂದು ವಲಸೆಗರು ಒತ್ತಾಯಿಸಿದ್ದಾರೆ.

ABOUT THE AUTHOR

...view details