ಕರ್ನಾಟಕ

karnataka

ETV Bharat / state

ಸಮಸ್ಯೆಗಳು ಸಾವಿರ, 'ಉತ್ತರ' ಕೊಡೋರು ಯಾರು? ಇದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಈ ಬಾರಿ ಬಿಜೆಪಿಯಿಂದ ಡಿ.ವಿ.ಸದಾನಂದಗೌಡರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನಿಂದ ಕೃಷ್ಣಬೈರೇಗೌಡ ಅವರು ಸ್ಪರ್ಧಿಸುತ್ತಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಜನರು ಯಾವ ನಾಯಕರ ಕೈ ಹಿಡಿಯುತ್ತಾರೋ ಕಾದು ನೋಡಬೇಕಿದೆ.

By

Published : Apr 14, 2019, 10:23 AM IST

ಕಸದಿಂದ ಕೂಡಿರುವ ರಸ್ತೆ

ಬೆಂಗಳೂರು :ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಮತ್ತಿತರ ಸಮಸ್ಯೆಗಳಿವೆ. ಈ ಕುರಿತು ಒಂದು ವರದಿ ಇಲ್ಲಿದೆ.

ಈ ಭಾಗದಲ್ಲಿ ಬರುವ ರಾಚೇನಹಳ್ಳಿ, ಅಮೃತಳ್ಳಿ,ಕಲ್ಕೆರೆ,ಸಿಂಗಪೂರ್ ,ಕೋಡಿಗೆಹಳ್ಳಿ ಸೇರದಂತೆ ಹೆಬ್ಬಾಳ ಹಾಗೂ ನಾಗವಾರ ಕೆರೆಗಳು ಖಾಸಗಿಯವರ ಕೈಲಿವೆ. ಕೆರೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದ್ದು, ಕೆರೆಗಳು ನಿಧಾನವಾಗಿ ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ.ಯಾವುದೇ ರೈಲು ನಿಲ್ದಾಣ ಉನ್ನತೀಕರಣಗೊಂಡಿಲ್ಲ. ಸರ್ಕಾರಿ ಶಾಲಾ-ಕಾಲೇಜುಗಳ ಉನ್ನತೀಕರಣಗೊಂಡಿಲ್ಲ. ಯಾವುದೇ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿಲ್ಲ. ಕಳೆದ ಹತ್ತು ವರ್ಷಗಳಿಂದ ಹಲವು ಸೇವೆಗಳು ಅತ್ಯಂತ ದುರ್ಬಲವಾಗಿವೆ.

ಕಸದಿಂದ ಕೂಡಿರುವ ರಸ್ತೆ

ಇನ್ನು ಕಸದ ಸಮಸ್ಯೆಯೂ ಹೆಚ್ಚು ಇದೆ. ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಎಸ್ಟಿಪಿಗಳು ಹಾಗೂ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯಿಂದ ಈ ಭಾಗದ ಕಸದ ಸಮಸ್ಯೆ ನಿವಾರಣೆಯಾಗಲು ಸಾಧ್ಯ ಹಾಗೂ ಇದರಿಂದ ಜೈವಿಕ ಅನಿಲ ಹಾಗೂ ವಿದ್ಯುತ್ ಉತ್ಪಾದನೆಯನ್ನು ಸ್ವೀಡನ್ ದೇಶದ ಮಾದರಿಯಲ್ಲಿ ಮಾಡುವುದು ಅತ್ಯಂತ ಪ್ರಮುಖವಾಗಿದೆ.

ಎ.ಟಿ. ರಾಮಸ್ವಾಮಿ ಅವರ ವರದಿ ಆಧರಿಸಿ ಹೇಳುವುದಾದರೆ 21,000 ಎಕರೆ ಸರ್ಕಾರಿ ಭೂಮಿಯು ಬೆಂಗಳೂರು ಉತ್ತರದಲ್ಲಿ ಕಣ್ಮರೆಯಾಗಿದೆ. ಮಹಾಲಕ್ಷ್ಮಿಲೇಔಟ್, ನಂದಿನಿಲೇಔಟ್ ನಲ್ಲಿ ವಿದ್ಯುತ್ ದೀಪ ಸರಿಯಾಗಿಲ್ಲ. ಸರಿಯಾದ ರಸ್ತೆ ಇಲ್ಲ ಎನ್ನುತ್ತಾರೆ ಸ್ಥಳೀಯ ನಾಗರೀಕರು.ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಡಿ.ವಿ.ಸದಾನಂದಗೌಡರು ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್​ನಿಂದ ಕೃಷ್ಣಬೈರೇಗೌಡ ಅವರು ಸ್ಪರ್ಧಿಸಿದ್ದು, ಚುನಾವಣಾ ಕಣ ರಂಗೇರಿದೆ.

ಹಿಂದಿನ ರಾಜಕೀಯ ಇತಿಹಾಸ:

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ನ ಹಿರಿಯ ರಾಜಕಾರಣಿಯಾಗಿದ್ದ ದಿ. ಸಿ.ಕೆ. ಜಾಫರ್ ಶರೀಫ್ ಸತತವಾಗಿ ಗೆದ್ದು ಬಂದು ಈ ಕ್ಷೇತ್ರವನ್ನು ಕಾಂಗ್ರೆಸ್​ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ 2004ರಲ್ಲಿ ಕಾಂಗ್ರೆಸ್​ನ ಭದ್ರಕೋಟೆಯನ್ನು ಬಿಜೆಪಿ ಭೇದಿಸಿತ್ತು. 2004ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಡಾ.ಎಚ್.ಟಿ. ಸಾಂಗ್ಲಿಯಾನ ಬಿಜೆಪಿಯಿಂದ ಸ್ಪರ್ಧಿಸಿ 473,502 ಮತಗಳನ್ನು ಪಡೆದು ಕಾಂಗ್ರೆಸ್​ ಭದ್ರಕೋಟೆಯನ್ನು ಭೇದಿಸಿದ್ದರು. ಸಾಂಗ್ಲಿಯಾನ ವಿರುದ್ಧ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಸಿ.ಕೆ. ಜಾಫರ್ ಶರೀಫ್ ಅವರು 443,144 ಮತಗಳನ್ನು ಪಡೆದು ಸೋಲು ಕಂಡಿದ್ದರು.
2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಬಿ.ಚಂದ್ರೇಗೌಡರು 452,920 ಮತಗಳಿಂದ ಜಯಗಳಿಸಿದ್ದರು. ಸಿ.ಕೆ. ಜಾಫರ್ ಶರೀಫ್ ಅವರು 393,255 ಮತಗಳನ್ನು ಪಡೆದು ಮತ್ತೆ ಪರಾಭವಗೊಂಡರು. 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ವಿ.ಸದಾನಂದಗೌಡರು 718,326 ಮತಗಳಿಂದ ಜಯಗಳಿಸಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಸಿ. ನಾರಾಯಣಸ್ವಾಮಿ ಅವರು 488,562 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಇದಾದ ನಂತರ ಸತತವಾಗಿ ಈ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ.

8 ವಿಧಾನಸಭಾ ಕ್ಷೇತ್ರಗಳಿವೆ:
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಬ್ಯಾಟರಾಯನಪುರ, ಹೆಬ್ಬಾಳ, ಕೆ.ಆರ್. ಪುರ, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್, ಪುಲಿಕೇಶಿನಗರ (ಮೀಸಲು), ಯಶವಂತಪುರ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದು, ಒಂದು ಕ್ಷೇತ್ರ ಬಿಜೆಪಿ ಹಾಗೂ ಎರಡು ಕ್ಷೇತ್ರ ಜೆಡಿಎಸ್ ಕೈಯಲ್ಲಿವೆ.

ಜಾತಿವಾರು ಲೆಕ್ಕಾಚಾರ? :
ಕುರುಬ, ಪರಿಶಿಷ್ಟ ಜಾತಿ ಸೇರಿದಂತೆ ಇತರ ಜಾತಿಗಳ ಸುಮಾರು 6 ಲಕ್ಷ ಮತಗಳಿವೆ ಎನ್ನಲಾಗುತ್ತಿದೆ. ಅದೇ ರೀತಿ ಒಕ್ಕಲಿಗ ಸಮುದಾಯದ ಮತಗಳು ಸುಮಾರು 7 ಲಕ್ಷದಷ್ಟಿವೆ ಎಂದು ಅಂದಾಜಿಸಲಾಗಿದೆ. ಮುಸ್ಲಿಂ ಸಮುದಾಯದ ಸುಮಾರು 5 ಲಕ್ಷ ಮತಗಳಿವೆ. ಆದರೆ ಸರಿಯಾದ ಜಾತಿ ಲೆಕ್ಕಾಚಾರ ಎಲ್ಲಿಯೂ ಲಭ್ಯವಾಗಿಲ್ಲ. ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಮತಗಳೆ ಉತ್ತರ ಕ್ಷೇತ್ರದ ಫಲಿತಾಂಶವನ್ನು ನಿರ್ಧರಿಸುತ್ತದೆ. ಈ
ಒಟ್ಟು ಕ್ಷೇತ್ರದಲ್ಲಿರುವ ಮತದಾರರು: 28,48,705
ಪುರುಷ ಮತದಾರರ ಸಂಖ್ಯೆ:14,81,456
ಮಹಿಳಾ ಮತದಾರರ ಸಂಖ್ಯೆ:13,66,753
ಇತರರು 496 ಮಂದಿದ್ದಾರೆ.

ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ 13,57,553 ಮತದಾರರು ಮತವನ್ನು ಚಲಾಯಿಸಿದ್ದು, ಶೇ. 56.53ರಷ್ಟು ಮತದಾನವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಡಿ.ವಿ. ಸದಾನಂದಗೌಡರು 7,18,326 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ನ ಸಿ. ನಾರಾಯಣಸ್ವಾಮಿ ಅವರು 4,88, 562 ಮತಗಳು ಪಡೆದಿದ್ದರು. ಜೆಡಿಎಸ್​ನಿಂದ ಅಬ್ದುಲ್ ಅಜೀಂ, ಆಮ್ ಆದ್ಮಿ ಪಕ್ಷದಿಂದ ಬಾಬು ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ ವಿ ವೇಣು ಕಣದಲ್ಲಿದ್ದರು.ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ಜೆಡಿಎಸ್ ವರಿಷ್ಠರು ಈ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟು ಕೊಟ್ಟರು. ಹಾಗಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಬೈರೇಗೌಡರು ಕಣಕ್ಕಿಳಿದಿದ್ದಾರೆ.

ಬ್ಯಾಟರಾಯನಪುರದಲ್ಲಿ ವಲಸಿಗರ ಪ್ರಾಬಲ್ಯದ ಜೊತೆ ಮಧ್ಯಮ ಹಾಗೂ ಬಡ, ಕೂಲಿ ಕಾರ್ಮಿಕರು ಈ ಕ್ಷೇತ್ರದ ನಿರ್ಣಯಕ ಮತದಾರರು. ಜೊತೆಗೆ ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರು ಈ ಕ್ಷೇತ್ರದಲ್ಲಿದ್ದಾರೆ. ಏರ್ ಪೋರ್ಟ್ ರಸ್ತೆಯಾಗಿರುವುದರಿಂದ ವಾಹನದಟ್ಟಣೆಯೂ ಹೆಚ್ಚು ಇದೆ. ಕುಡಿಯುವ ನೀರಿಗೂ ಈ ಪ್ರದೇಶದಲ್ಲಿ ಸಮಸ್ಯೆ ಹೆಚ್ಚು. ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ರಿಯಲ್ ಎಸ್ಟೇಟ್ ಕೆ.ಆರ್.ಪುರ ಕ್ಷೇತ್ರದ ಪ್ರಮುಖ ಉದ್ಯಮ ಎಂದರೂ ತಪ್ಪಾಗಲಾರದು. ಜತೆಗೆ ಹಲವು ಸಾಫ್ಟ್ವೇರ್ ಸಂಸ್ಥೆಗಳು, ಗಾರ್ಮೆಂಟ್ಸ್, ಇಟ್ಟಿಗೆ ಕಾರ್ಖಾನೆಗಳು ಈ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯಮವನ್ನು ಸೃಷ್ಟಿಸಿದೆ. ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ದಾಸರಹಳ್ಳಿ ಕ್ಷೇತ್ರದಲ್ಲಿ ವಲಸಿಗ ಬಡ ಹಾಗೂ ಮಧ್ಯಮ ವರ್ಗದ ಮತದಾರರು ಹೆಚ್ಚಿದ್ದು, ಒಕ್ಕಲಿಗ ಮತ ಹೆಚ್ಚಿನ ಪ್ರಾಧಾನ್ಯತೆ ಹೊಂದಿದೆ.

ಯಶವಂತಪುರ ಕ್ಷೇತ್ರ ವ್ಯಾಪಾರ, ವಹಿವಾಟಿಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ಆರ್ ಎಂಸಿ ಯಾರ್ಡ್, ರೈಲ್ವೆ ನಿಲ್ದಾಣ ಈ ಕ್ಷೇತ್ರದಲ್ಲಿದ್ದು, ಹೆಚ್ಚು ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರಿದ್ದಾರೆ.ಬಿಜೆಪಿ ಪ್ರಾಬಲ್ಯ ಹೊಂದಿರುವ ಮಲ್ಲೇಶ್ವರಂ ಕ್ಷೇತ್ರದಲ್ಲಿ ಇಲ್ಲಿ ಮಧ್ಯಮ ಹಾಗೂ ಶ್ರೀಮಂತ ವರ್ಗ ಹೆಚ್ಚು ಕಾಣಬಹುದು. ಜೆಡಿಎಸ್ ತೆಕ್ಕೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ನಲ್ಲಿ ಎಲ್ಲ ವರ್ಗದ ಜನರಿದ್ದಾರೆ.ಮೀಸಲು ಕ್ಷೇತ್ರವಾದ ಪುಲಕೇಶಿ ನಗರದಲ್ಲಿ ಕೂಲಿ ಕಾರ್ಮಿಕರು ಹಾಗೂ ಮುಸ್ಲೀಂ ಸಮುದಾಯದವರು ಹೆಚ್ಚು ನೆಲೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details