ಕರ್ನಾಟಕ

karnataka

ETV Bharat / state

ಬೆಂಗಳೂರು ಮಿಷನ್-2022: ಪ್ರತೀ ವಾರ ಯೋಜನೆಗಳ ಪ್ರಗತಿ ಪರಿಶೀಲಿಸಲು ಸಿಎಂ ಸೂಚನೆ - ವೈಟ್‍ಫೀಲ್ಡ್ ಮಾರ್ಗ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗ

ಜೂನ್-2021ರ ಅಂತ್ಯದೊಳಗೆ ಕೆಂಗೇರಿ ಮೆಟ್ರೋ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೈಟ್‍ ಫೀಲ್ಡ್ ಮಾರ್ಗ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಇದಕ್ಕೆ ಇರುವ ತೊಡಕುಗಳನ್ನು ಶೀಘ್ರವೇ ನಿವಾರಣೆ ಮಾಡುವಂತೆ ಸಿಎಂ ತಿಳಿಸಿದರು.

Bangalore Mission 2022 CM
ಬೆಂಗಳೂರು ಮಿಷನ್ 2022

By

Published : Jan 30, 2021, 3:06 PM IST

ಬೆಂಗಳೂರು:ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬೆಂಗಳೂರು ಮಿಷನ್-2022 ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಬೆಂಗಳೂರು ಮಿಷನ್-2022

ನಗರದ ಜನತೆಗೆ ಉನ್ನತ ಮಟ್ಟದ ಸಂಚಾರವನ್ನು ಒದಗಿಸುವ ನಿಟ್ಟಿನಲ್ಲಿ 190 ಕಿ.ಮೀ. ಉದ್ದದ 12 ಹೈ-ಡೆನ್ಸಿಟಿ ಕಾರಿಡಾರ್​ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆಯನ್ನು ರೂ. 477 ಕೋಟಿಗಳ ಮೊತ್ತದಲ್ಲಿ ಕೈಗೊಂಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಏಪ್ರಿಲ್-2021ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಿದರು.

ಓದಿ: ಯುಗಾದಿಯೊಳಗೆ ಸಿಎಂ ಚೇಂಜ್​: ಯತ್ನಾಳ್​ ಮತ್ತೆ ಮತ್ತೆ ಹೊಸ ಬಾಂಬ್

ಇದೇ ವೇಳೆ ನಗರದ ಹೃದಯ ಭಾಗದಲ್ಲಿರುವ ರಸ್ತೆಗಳನ್ನು ಮೇಲ್ದರ್ಜೆಗೆರಿಸಲು ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ 37 ರಸ್ತೆಗಳ ಅಭಿವೃದ್ಧಿಯನ್ನು ಕೈಗೊಂಡಿದ್ದು, ತ್ವರಿತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ 5 ರಸ್ತೆಗಳು ಪೂರ್ಣಗೊಂಡಿವೆ.

ಒಟ್ಟಾರೆ 32 ರಸ್ತೆಗಳನ್ನು ಮೇ-2021ರೊಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು. ಈ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಸುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳನ್ನು ಹಾಗೆಯೇ ಉಳಿಸಿಕೊಂಡು ರಸ್ತೆ ಅಭಿವೃದ್ಧಿಪಡಿಸಿ, ಅನಗತ್ಯವಾಗಿ ಹಣ ಪೋಲು ಮಾಡದಿರಿ ಎಂದು ಸೂಚಿಸಿದರು.

ಜೂನ್-2021 ಅಂತ್ಯದೊಳಗೆ ಕೆಂಗೇರಿ ಮೆಟ್ರೋ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೈಟ್‍ ಫೀಲ್ಡ್ ಮಾರ್ಗ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಇದಕ್ಕೆ ಇರುವ ತೊಡಕುಗಳನ್ನು ಶೀಘ್ರವೇ ನಿವಾರಣೆ ಮಾಡುವಂತೆ ಸಿಎಂ ತಿಳಿಸಿದರು.

ವಿನೂತನ ರೀತಿಯಲ್ಲಿ ರಾಜಕಾಲುವೆ ಸುಂದರಗೊಳಿಸುವ ಯೋಜನೆಯನ್ನು ರೂಪಿಸಿದ್ದು, ಸುಮಾರು 11 ಕಿ.ಮೀ. ಉದ್ದದ ಕೆ-100 ರಾಜಕಾಲುವೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಟೆಂಡರ್ ಆಹ್ವಾನಿಸಲಾಗಿರುತ್ತದೆ. ಇದಕ್ಕೆ ಪೂರಕವಾಗಿ ರಾಜಕಾಲುವೆಯಲ್ಲಿ ಜಲಮಂಡಳಿಯ ತ್ಯಾಜ್ಯ ನೀರು ಒಯ್ಯುವ ಕೊಳವೆಗಳನ್ನು ಸ್ವಚ್ಛಗೊಳಿಸುವ ಕಾಮಗಾರಿಗಳನ್ನು ಫೆಬ್ರವರಿ-2021ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಓದಿ: ವಿಶ್ವದರ್ಜೆ ನಗರದ ರೀತಿ ಬೆಂಗಳೂರು ಅಭಿವೃದ್ಧಿ; ಮಿಷನ್-2022 ಟಾರ್ಗೆಟ್ ಫಿಕ್ಸ್ ಮಾಡಿದ ಸರ್ಕಾರ

ನಗರದ ಕೆರೆಗಳನ್ನು ಉಳಿಸಲು ಮತ್ತು ಜೀವವೈವಿಧ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ 25 ಕೆರೆಗಳ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಯನ್ನು ಕೈಗೊಂಡಿದ್ದು, ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಇದರ ಜೊತೆಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಫೆಬ್ರವರಿ 2022ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು‌‌.

ಬೆಂಗಳೂರು ನಗರದ ಹಸಿರು ಸಿರಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪೂರಕವಾಗುವಂತೆ ಬೃಹತ್ ವೃಕ್ಷೋದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಏಪ್ರಿಲ್-2021ರ ಅಂತ್ಯಕ್ಕೆ ತುರಹಳ್ಳಿ (400 ಎಕರೆ), ಮೇ-2021ರ ಅಂತ್ಯಕ್ಕೆ ಕಾಡುಗೋಡಿ (102 ಎಕರೆ) ಮತ್ತು ಜೂನ್-2021ರ ಅಂತ್ಯಕ್ಕೆ ಮಾಚೋಹಳ್ಳಿ (98 ಎಕರೆ) ವೃಕ್ಷೋದ್ಯಾನಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ನಾಗರಿಕರ ಸೇವೆಗಳಾದ ಖಾತಾ, ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ಪರವಾನಗಿ ಇತ್ಯಾದಿ ಸೇವೆಗಳು ಈಗಾಗಲೇ ಲಭ್ಯವಿದ್ದು, ಈ ಎಲ್ಲಾ ಸೇವೆಗಳನ್ನು ಸರಳೀಕೃತಗೊಳಿಸಿ ಏಕೀಕೃತ ಡಿಜಿಟಲ್ ಪೋರ್ಟಲ್ ಅಡಿ ಒದಗಿಸಲು ಕ್ರಮ ವಹಿಸಿದ್ದು ಏಪ್ರಿಲ್-2021 ಅಂತ್ಯಕ್ಕೆ ಲಭ್ಯವಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಎಕ್ಸ್​​ಪೀರಿಯೆನ್ಸ್ ಬೆಂಗಳೂರು ಯೋಜನೆಯ ಅನುಷ್ಠಾನಕ್ಕೆ ಶೀಘ್ರವೇ ಬೆಂಗಳೂರು ಪರಿಸರ ಮತ್ತು ಪರಂಪರೆ ಟ್ರಸ್ಟ್ ಸ್ಥಾಪಿಸಲು ಸಿಎಂ ಸೂಚಿಸಿದರು.

ನಗರದಲ್ಲಿ ಹೆಚ್ಚಿನ ಜನಸಂಖ್ಯೆಯಿಂದ ತ್ಯಾಜ್ಯ ನಿರ್ವಹಣೆ ಪ್ರಮುಖ ಸವಾಲಿನ ಅಂಶವಾಗಿದೆ. ಪ್ರತಿನಿತ್ಯ ನಗರದಲ್ಲಿ ಸುಮಾರು 4500ಕ್ಕೂ ಅಧಿಕ ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ವೈಜ್ಞಾನಿಕ ಮತ್ತು ಸಮರ್ಪಕ ಘನತ್ಯಾಜ್ಯ ನಿರ್ವಹಣೆಗಾಗಿ 15 ದಿನದೊಳಗೆ ಎಸ್​​ಪಿವಿ ಸ್ಥಾಪಿಸುವಂತೆ ಸೂಚಿಸಿದರು. ಮುಖ್ಯ ಕಾರ್ಯದರ್ಶಿಗಳು ಪ್ರತೀ ವಾರ ಈ ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವಂತೆ ಸಿಎಂ ಸೂಚಿಸಿದರು.

ABOUT THE AUTHOR

...view details