ಬೆಂಗಳೂರು:ತಮಿಳುನಾಡಿನ ರಾಜಕೀಯ ಪಕ್ಷದ ಮುಖಂಡ, ರೌಡಿಶೀಟರ್ ಹಿನ್ನೆಲೆಯ ವಿ. ಕೆ. ಗುರುಸ್ವಾಮಿ (64) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗಾಗಿ ಬಾಣಸವಾಡಿ ಠಾಣಾ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹಲ್ಲೆಗೊಳಗಾದ ಗುರುಸ್ವಾಮಿ ಕುರಿತ ಮಾಹಿತಿ ಕಲೆಹಾಕಲು ಹಾಗೂ ಆರೋಪಿಗಳನ್ನ ಪತ್ತೆ ಹಚ್ಚಲು ಪ್ರತ್ಯೇಕ ತಂಡಗಳನ್ನ ರಚಿಸಲಾಗಿದ್ದು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಗುರುಸ್ವಾಮಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಲವು ರಾಜಕೀಯ ಮುಖಂಡರ ಆಪ್ತನಾಗಿ ಗುರುತಿಸಿಕೊಂಡಿರುವ ಅವರು, ಅಪರಾಧ ಹಿನ್ನೆಲೆಯನ್ನೂ ಹೊಂದಿದ್ದಾರೆ. ಇವರ ವಿರುದ್ಧ ಕಿರುತರೈ ಠಾಣೆಯಲ್ಲಿ ರೌಡಿಶೀಟ್ ಸಹ ಇದ್ದು, ಎಂಟು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ಗ್ಯಾಂಗ್ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ:ಹಲ್ಲೆಗೊಳಗಾದ ಗುರುಸ್ವಾಮಿ ಅವರು ಸೋಮವಾರ ವ್ಯವಹಾರದ ಮೇಲೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದರು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಸುಖಸಾಗರ್ ಹೊಟೇಲ್ನಲ್ಲಿ ಸೋಮವಾರ ಸಂಜೆ 4 ರ ಸುಮಾರಿನಲ್ಲಿ ಟೀ ಕುಡಿಯಲು ಹೋಗಿದ್ದಾಗ ದುಷ್ಕರ್ಮಿಗಳ ಗುಂಪು ದಾಳಿ ಮಾಡಿತ್ತು.